ವಾಟ್ಸಾಪ್ ಮೂಲಕ ಅಪಹರಣ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು
ಬೆಂಗಳೂರು, ನವೆಂಬರ್ 03: ಅಪಹರಣಕ್ಕೊಳಗಾಗಿದ್ದ ಬೆಂಗಳೂರಿನ ಇಬ್ಬರು ಮಕ್ಕಳನ್ನು ಪತ್ತೆ ಮಾಡಿ, ಅವರನ್ನು ಪಾಲಕರಿಗೆ ಒಪ್ಪಿಸುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಭೂಪಸಂದ್ರದಲ್ಲಿದ್ದ ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದ ನಮೃತಾ(7) ಮತ್ತು ನಮಿತಾ (5) ಎಂಬ ಇಬ್ಬರು ಮಕ್ಕಳನ್ನು ಚಿಂದಿ ಆಯುವ ಯುವಕನೊಬ್ಬ ಅಪಹರಿಸಿದ್ದ. ನಂತರ ಮಕ್ಕಳನ್ನು ತಿರುಪತಿಗೆ ಸಾಗಿಸಲಾಗಿತ್ತು.

ಗೊತ್ತು, ಗುರಿ ಇಲ್ಲದ ಊರಿನಲ್ಲಿ ಅಲೆಯುತ್ತಿದ್ದ ಈ ಮಕ್ಕಳನ್ನು ವಾಟ್ಸಾಫ್ ಸಿಟಿಜನ್ ಗ್ರೂಪ್ ಮೂಲಕ ಪತ್ತೆ ಮಾಡಲಾಗಿದೆ. ಈ ಮೂಲಕ ಸಾಮಾಜಿಕ ಮಾಧ್ಯಮಗಳನ್ನು ಇಂಥ ಉತ್ತಮ ಕೆಲಸಕ್ಕೂ ಬಳೆಸಿಕೊಳ್ಳಬಹುದು ಎಂಬುದನ್ನು ಬೆಂಗಳೂರು ಪೊಲೀಸರು ಸಾಬೀತುಪಡಿಸಿದ್ದಾರೆ.
ಮಕ್ಕಳು ತಿರುಪತಿಯಲ್ಲಿದ್ದಾರೆ ಎಂಬುದು ವಾಟ್ಸಾಪ್ ಮೂಲಕ ತಿಳಲಿಯುತ್ತಿದ್ದಂತೆಯೇ ತಿರುಪತಿಗೆ ತೆರಳಿದ ಸಂಜಯನಗರ ಪೊಲೀಸರು, ಇಬ್ಬರು ಮಕ್ಕಳನ್ನೂ ಸುರಕ್ಷಿತವಾಗಿ ಕರೆತಂದು, ಬೆಂಗಳೂರಿನಲ್ಲಿರುವ ಅವರ ಹೆತ್ತವರಿಗೆ ಒಪ್ಪಿಸಿದ್ದಾರೆ.
ಎಳನೀರು ವ್ಯಾಪಾರಿಯಾಗಿರುವ ಪ್ರಶಾಂತ್ ಮತ್ತು ಮನೆಕೆಲಸ ಮಾಡುವ ಶೈಲಜಾ ಅವರ ಇಬ್ಬರೂ ಮಕ್ಕಳು ಮತ್ತೆ ಅವರ ಮಡಿಲು ಸೇರಿದ್ದಾರೆ. ಈ ಮಕ್ಕಳನ್ನು ಪತ್ತೆ ಮಾಡುವುದಕ್ಕಾಗಿ ಅವಿನಾಶ್ ಎಂಬ ಕಾರ್ ಡ್ರೈವರ್ ಮತ್ತು ಆತನ ಸ್ನೇಹಿತ ವಿಜಯ್ ಎನ್ನುವವರು ಮಾಡಿದ ಸಹಾಯವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ಪೊಲೀಸರು ಇಬ್ಬರು ಯುವಕರ ಸಹಕಾರವನ್ನು ಕೊಂಡಾಡಿದ್ದಾರೆ. ಅಕ್ಟೋಬರ್ 25 ರಂದು ಮನೆಯ ಹೊರಗೆ ಆಟವಾಡುತ್ತಿದ್ದ ಈ ಮಕ್ಕಳನ್ನು ಅಪಹರಣ ಮಾಡಲಾಗಿತ್ತು!












Click it and Unblock the Notifications