ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮನವಿಗೆ ಅಭೂತಪೂರ್ವ ರೆಸ್ಪಾನ್ಸ್: ಆದರೆ...
ಬೆಂಗಳೂರು, ಜುಲೈ 17: ಲಾಕ್ ಡೌನ್ ಘೋಷಣೆಯಾದ ನಂತರ ನಗರದ ರಸ್ತೆಗಿಳಿದವರಿಗೆ, ಪ್ರತೀ ಸರ್ಕಲ್ ನಲ್ಲಿ ಟ್ರಾಫಿಕ್ ಪೊಲೀಸರು ಜೊತೆ, ಸಿವಿಲ್ ಡ್ರೆಸ್ ನಲ್ಲಿರುವ ಯುವಕ/ಯುವತಿಯರು ಕಾಣಸಿಗುತ್ತಿದ್ದಾರೆ.
ಇವರೆಲ್ಲಾ, ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರ ಕರೆಗೆ ಓಗೊಟ್ಟು, ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಸ್ವಯಂಸೇವಕರು. ಕಮಿಷನರ್ ಅವರ ಕರೆಗೆ ಸುಮಾರು ಹದಿಮೂರು ಸಾವಿರಕ್ಕೂ ಹೆಚ್ಚು ಜನ ಸ್ವಯಂಸೇವಕರಾಗಿ ದುಡಿಯಲು ಮುಂದೆ ಬಂದಿದ್ದಾರೆ.
ಹೇಗೂ ಲಾಕ್ ಡೌನ್, ಮನೆಯಲ್ಲಿ ಕೂತು ಮಾಡುವುದಾದರೂ ಏನು ಎನ್ನುವ ವರ್ಗದವರು, ಸಂಕಷ್ಟದ ವೇಳೆ, ತಮ್ಮ ಕೈಲಾದ ಸಹಾಯವನ್ನು ಸಾರ್ವಜನಿಕ ಸೇವೆಗೆ ಮಾಡೋಣ ಎನ್ನುವ ಕ್ಯಾಟಗರಿಯವರೂ ಇದರಲ್ಲಿ ಇದ್ದಾರೆ.
ಉತ್ಸಾಹೀ ಯುವ ಸಮುದಾಯವೇ ಸ್ವಯಂಸೇವಕರಾಗಲು ನೊಂದಾಣಿ ಮಾಡಿಕೊಂಡಿರುವುದು ಪೊಲೀಸ್ ಇಲಾಖೆಗೆ ಖುಷಿಕೊಡುವ ವಿಚಾರವಾಗಿದ್ದರೂ, ಇದರ ಜೊತೆಗೆ, ಅವರಿಗೆ ಆತಂಕವೂ ಕಾಡುತ್ತಿದೆ.
|
ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಟ್ವೀಟ್
"ದೈಹಿಕವಾಗಿ ಸುಧೃಡವಾಗಿರುವ, ಸೇವಾ ಮನೋಭಾವದ, ಬೆಂಗಳೂರು ನಿವಾಸಿಯಾಗಿರುವ ಪುರುಷರು ಮತ್ತು ಮಹಿಳೆಯರನ್ನು ಸ್ವಯಂಸೇವಕರಾಗಿ ದುಡಿಯಲು ಆಹ್ವಾನಿಸುತ್ತಿದ್ದೇನೆ. 18 ರಿಂದ 45 ವಯೋಮಿತಿಯವರು, ಕೋವಿಡ್ ವಿರುದ್ದ ಹೋರಾಟಕ್ಕೆ, ಪೊಲೀಸ್ ಇಲಾಖೆಗೆ ಸಹಾಯ ಮಾಡಲು ಮುಂದೆ ಬರುವವರು http://bcp.gov.in ಇಲ್ಲಿ ನೊಂದಾಣಿ ಮಾಡಿಕೊಳ್ಳಿ" ಇದು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಮಾಡಿದ್ದ ಟ್ವೀಟ್.

ಸ್ವಯಂಸೇವಕರಾಗಿ ಬರುವವರಿಗೆ ಕೊರೊನಾ ಸೋಂಕು ತಗುಲಿದರೆ
ಭಾಸ್ಕರ್ ರಾವ್ ಮಾಡಿದ್ದ ಟ್ವೀಟ್ ಉತ್ತಮ ಪ್ರಶಂಸೆಗೊಳಗಾಗಿರುವುದು ಒಂದು ಕಡೆಯಾದರೆ, ಇದಕ್ಕೆ ಹಲವು ಜನರು ಮರುಪ್ರಶ್ನೆಯನ್ನೂ ಹಾಕಿದ್ದರು. ಅದರಲ್ಲಿ ಪ್ರಮುಖವಾಗಿ, ಸ್ವಯಂಸೇವಕರಾಗಿ ಬರುವವರಿಗೆ ಕೊರೊನಾ ಸೋಂಕು ತಗುಲಿದರೆ, ಯಾವ ರೀತಿಯ ಚಿಕಿತ್ಸಾ ಸಹಾಯ ಪೊಲೀಸ್ ಇಲಾಖೆಯಿಂದ ಲಭ್ಯವಾಗುತ್ತದೆ ಎನ್ನುವ ಪ್ರಶ್ನೆಯೂ ಒಂದಾಗಿತ್ತು.

ಸೋಂಕು ತಗಲಬಹುದು ಎನ್ನುವ ಭಯ ಇಲಾಖಾ ಸಿಬ್ಬಂದಿಗೆ
ಈಗ ಈ ಆತಂಕ ನಗರದ ಪೊಲೀಸರಿಗೂ ಕಾಡುತ್ತಿದೆ. ಸಾರ್ವಜನಿಕರು ಇಲಾಖೆಯ ಜೊತೆ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆಯಾದರೂ, ಸಾವಿರಾರು ಸ್ವಯಂಸೇವಕರನ್ನು ಚಿಕಿತ್ಸೆಗೆ ಒಳಪಡಿಸದೇ ಕೆಲಸಕ್ಕೆ ನಿರ್ವಹಿಸಿದರೆ, ಅವರ ಜೊತೆಗೂ, ತಮಗೂ ಸೋಂಕು ತಗಲಬಹುದು ಎನ್ನುವ ಭಯ ಇಲಾಖಾ ಸಿಬ್ಬಂದಿಗೆ ಕಾಡುತ್ತಿದೆ. ಇದು, ಸ್ವಾಭಾವಿಕ ಕೂಡಾ..

13,470 ಸ್ವಯಂಸೇವಕರಾಗಿ ದುಡಿಯಲು ನೊಂದಾಣಿ
ಸ್ವಯಂಸೇವಕರಾಗಿ ಬರುವವರನ್ನು ಮೊದಲು ಟೆಸ್ಟ್ ಮಾಡಿಸಿ, ಅದಾದ ಮೇಲೆ ಡ್ಯೂಟಿಗೆ ಹಾಕುವುದು ಉತ್ತಮ ಎನ್ನುವುದು ಪೊಲೀಸ್ ಇಲಾಖಾ ಸಿಬ್ಬಂದಿಯ ಅಭಿಪ್ರಾಯ. ಇದುವರೆಗೆ (ಜುಲೈ 16) ನಗರದ ಸೆಂಟ್ರಲ್ 780, ಪೂರ್ವ 1,704, ಉತ್ತರ 2,678, ಈಶಾನ್ಯ 1,027, ದಕ್ಷಿಣ 2,623, ಆಗ್ನೇಯ 1,456, ಪಶ್ಚಿಮ 2,042, ವೈಟ್ ಫೀಲ್ಡ್ 1,160 ಜನರು ಸೇರಿ, ಒಟ್ಟು 13,470 ವಾರಿಯರ್ಸ್ ಆಗಿ ದುಡಿಯಲು ನೊಂದಾಣಿ ಮಾಡಿಸಿಕೊಂಡಿದ್ದಾರೆ.












Click it and Unblock the Notifications