ಫ್ಯಾಮಿಲಿ ಡೇ ಆಚರಿಸಿ ಸಂಭ್ರಮಪಟ್ಟ ಬೆಂಗಳೂರು ಪೊಲೀಸರು
ಬೆಂಗಳೂರು ಫೆಬ್ರವರಿ 3: ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕೆಲಸದ ನಡುವೆ ಕುಟುಂಬದ ಜೊತೆ ಬೆರೆಯುವುದೇ ಕಡಿಮೆ. ಇದರಿಂದ ತಮ್ಮ ಕುಟುಂಬದ ಪ್ರೀತಿಯ ಕ್ಷಣಗಳನ್ನು ಅನುಭವಿಸುವುದೇ ಅಪರೂಪ.
ಆದರೆ, ಬೆಂಗಳೂರು ಉತ್ತರ ವಲಯ ಪೊಲೀಸರು ಈ ಮಾತನ್ನು ಅಲ್ಲಗಳೆಯುತ್ತಾರೆ. ಏಕೆಂದರೆ ಸ್ವತಃ ಬೆಂಗಳೂರು ಉತ್ತರ ವಲಯ ಡಿಸಿಪಿ ಅವರೇ ತಮ್ಮ ವಿಭಾಗದ ಸಿಬ್ಬಂದಿಗೆ ಕುಟುಂಬದ ಪ್ರೀತಿಯನ್ನು ತೋರಿದ್ದಾರೆ. ಪೊಲೀಸರು ಕುಟುಂಬಸ್ಥರ ಜತೆ ಕಾಲ ಕಳೆಯುವ ಸಲುವಾಗಿ ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ಅವರು ಕುಟುಂಬಸ್ಥರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದರು.
ಚಿತ್ರದುರ್ಗಕ್ಕೆ ನೂತನ ಎಸ್ಪಿ; ಓಬವ್ವನ ಮಣ್ಣಲ್ಲಿ ಮಹಿಳಾ ಅಧಿಕಾರಿಗಳ ಆಡಳಿತ
ಭಾನುವಾರ ಯಶವಂತಪುರದ ಜೆ ಪಿ ಪಾರ್ಕ್ನಲ್ಲಿ ಪೊಲೀಸ್ ಸಿಬ್ಬಂದಿ ಒಂದೆಡೆ ಬೆರೆತು, ಒಟ್ಟಾಗಿ ಪೋಟೊ ತೆಗೆಸಿಕೊಂಡು ಸಂತಸಪಟ್ಟು, ಇತರ ವಿಭಾಗದ ಪೊಲೀಸರಿಗೆ ಪ್ರೇರಣೆಯಾದರು.
ಪಾರ್ಕ್ನಲ್ಲಿ ನಲಿದಾಡಿದರು
ಪ್ರತಿದಿನ ಕೇಸ್, ಕೊರ್ಟ್, ಕಚೇರಿ ಎಂದು ಠಾಣೆಯಲ್ಲಿ ಇರುವ ಸಿಬ್ಬಂದಿ ಒಂದು ದಿನ ಒತ್ತಡದಿಂದ ದೂರ ಉಳಿದು ಯಶವಂತಪುರದ ಜೆ ಪಿ ಪಾರ್ಕ್ನಲ್ಲಿ ನಲಿದಾಡಿದರು. ಇದರಲ್ಲಿ 95 ಜನ ಪೊಲೀಸ್ ಅಧಿಕಾರಿ, 200 ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅವರ ಮಕ್ಕಳು ಪಾಲ್ಗೊಂಡಿದ್ದರು ಇದರಲ್ಲಿ ಉತ್ತರ ವಿಭಾಗದ ಬೇರೆ ಬೇರೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕುಟುಂಬಸ್ಥರು ಒಂದೆಡೆ ಸೇರಿ ತಂದೆ-ತಾಯಿ, ಹೆಂಡತಿ, ಮಕ್ಕಳ ಜತೆ ಫೋಟೊ ತೆಗೆಸಿಕೊಂಡರು. ಒಂದು ರೀತಿ ಹಬ್ಬದ ವಾತಾವರಣವನ್ನು ನಿರ್ಮಿಸಿ, ಗಮನ ಸೆಳೆದರು.
ಹಾಡು ಹಾಡಿ ನೃತ್ಯ ಮಾಡಿದರು
ಪೊಲೀಸ್ ಸಿಬ್ಬಂದಿಯವರ ಮಕ್ಕಳ ಜತೆ ಡಿಸಿಪಿ ಶಶಿಕುಮಾರ್ ಫೋಟೊ ತೆಗೆಸಿಕೊಂಡರು. ಇದೇ ವೇಳೆ ಮಹಿಳಾ ಪೇದೆಗಳು, ಅವರ ಕುಟುಂಬದವರು ಬಣ್ಣ ಬಣ್ಣದ ಸಾರಿ ತೊಟ್ಟು ಗಮನ ಸೆಳೆದರು. ಪುಟಾಣಿ ಮಕ್ಕಳು ಹೊಸ ಅಂಗಿತೊಟ್ಟು ವಿಶೇಷವಾಗಿ ಕಾಣಿಸಿಕೊಂಡರು. ಬಳಿಕ ಎಲ್ಲರೂ ಉದ್ಯಾಾನದಲ್ಲಿ ಊಟ ಸವಿದರು. ದಿನವಿಡಿ ಮಕ್ಕಳು ತಮಗಿಷ್ಟದ ಹಾಡು ಹಾಡಿ ನೃತ್ಯ ಮಾಡಿದರು.
ನನಗೂ ಸಂತೋಷ ಆಯ್ತು; ಡಿಸಿಪಿ ಎನ್.ಶಶಿಕುಮಾರ್
ಈ ಕುರಿತು ಉತ್ತರ ಡಿಸಿಪಿ ಎನ್.ಶಶಿಕುಮಾರ್ ಮಾತನಾಡಿ, ""ಪೊಲೀಸರಲ್ಲಿರುವ ಒತ್ತಡವನ್ನು ಕಡಿಮೆ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ಎಲ್ಲ ಠಾಣೆಯ ಪೊಲೀಸ್ ಸಿಬ್ಬಂದಿ ಪಾಲ್ಗೊಂಡು ಸಂಭ್ರಮಿಸಿದರು. ಇದನ್ನು ನೋಡಿ ನನಗೂ ಸಂತೋಷ ಆಯ್ತು'' ಎಂದು ತಿಳಿಸಿದರು.
ಬೇರೆ ಘಟಕದ ಪೊಲೀಸರಿಗೆ ಮಾದರಿ
""ಪೊಲೀಸರು ಪ್ರತಿದಿನ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿದಿನ ಜನರಿಗಾಗಿ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಅವರಿಗೆ ಕುಟುಂಬದವರ ಜತೆ ಹೆಚ್ಚು ಕಾಲ ಕಳೆಯುವುದು ಕಷ್ಟವಾಗಿರುತ್ತದೆ. ಅದನ್ನು ದೂರ ಮಾಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು'' ಎಂದರು. ಒಟ್ಟಿನಲ್ಲಿ ಉತ್ತರ ವಲಯ ಡಿಸಿಪಿ ಅವರ ನಡೆ ಬೆಂಗಳೂರು ಇತರ ವಲಯದ ಪೊಲೀಸ್ರಿಗೆ ಪ್ರೇರಣೆ ನೀಡಿದ್ದಂತು ನಿಜ.