'ಥ್ಯಾಂಕ್ಯೂ ಡ್ರೈವರಣ್ಣೋ, ಕಂಡಕ್ಟರಣ್ಣೋ' ಎಂದು ಹೂವು-ಸ್ವೀಟು ಕೊಟ್ಟಿದ್ದೇಕೆ?
ಸಾರ್ವಜನಿಕರಿಗಾಗಿ ಶ್ರಮ ಪಡುತ್ತಿರುವ ಬಿಎಂಟಿಸಿ ಬಸ್ಸುಗಳ ಚಾಲಕ-ನಿರ್ವಾಹಕರಿಗೆ ಧನ್ಯವಾದ ಹೇಳುವ ವಿಶಿಷ್ಟ ಕಾರ್ಯಕ್ರಮವೊಂದು ಗುರುವಾರ ಬೆಂಗಳೂರಿನಲ್ಲಿ ನಡೆಯಿತು. ಅವರಿಗೆ ಹೂವು-ಸಿಹಿ ವಿತರಿಸಿ, ಥ್ಯಾಂಕ್ಸ್ ಹೇಳಲಾಯಿತು
ಬೆಂಗಳೂರು, ಮೇ 5: ಎರಡು ನಾಗರಿಕ ಸಮಿತಿಗಳ ಸ್ವಯಂಸೇವಕರು ಭೇಷ್ ಎನಿಸುವಂಥ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ 'ಬಸ್ ದಿನ' ಆಚರಿಸಿ, ಚಾಲಕರು-ನಿರ್ವಾಹಕರ ಸೇವೆಗೆ ಅವರಿಗೊಂದು ಧನ್ಯವಾದ ಸಲ್ಲಿಸಿದ್ದಾರೆ. ಸಿಟಿಜನ್ಸ್ ಫಾರ್ ಬೆಂಗಳೂರು, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಹಾಗೂ ಬಸ್ ಭಾಗ್ಯ ಬೇಕು ಅಭಿಯಾನದ ಹಿಂದಿದ್ದ ತಂಡ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು.
ಈ ದಿನದ ನೆಪದಲ್ಲಿ ಬಸ್ ನಲ್ಲಿ ಪ್ರಯಾಣಿಸಿ, ಚಾಲಕರು-ನಿರ್ವಾಹಕರಿಗೆ ಧನ್ಯವಾದ ಹೇಳಿ ಎಂದು ಬೆಂಗಳೂರು ನಾಗರಿಕರನ್ನು ಮನವಿ ಮಾಡಲಾಗಿತ್ತು. "ಬೆಂಗಳೂರಿನ ಸಂಚಾರ ದಟ್ಟಣೆ, ಇಕ್ಕಟ್ಟು ಹಾಗೂ ಮಾಲಿನ್ಯದ ಮಧ್ಯೆಯೇ ಇಡೀ ದಿನ ಕಳೆಯುವ ಬಸ್ ಚಾಲಕರಿಂದ 50 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಿದೆ" ಎಂದು ಈ ತಂಡ ಹೇಳಿಕೆಯಲ್ಲಿ ತಿಳಿಸಿದೆ.['ಬಸ್ ಭಾಗ್ಯ ಬೇಕು' ಅಭಿಯಾನಕ್ಕೆ ನೂರಾರು ಜನರ ಸಾಥ್]
ಬೆಂಗಳೂರಿನ ದೊಮ್ಮಲೂರು, ಜೆಪಿ ನಗರ, ಜಯನಗರ, ವಿಜಯನಗರ, ಹೆಬ್ಬಾಳ, ಯಶವಂತಪುರ, ಇಂದಿರಾನಗರ ಮತ್ತು ಬನಶಂಕರಿ ಸೇರಿ ವಿವಿಧೆಡೆ ಚಾಲಕರು-ನಿರ್ವಾಹಕರನ್ನು ಭೇಟಿ ಮಾಡಿದ ಸ್ವಯಂಸೇವಕರು ಅವರಿಗೆ ಧನ್ಯವಾದ ಹೇಳಿದರು. ಕೆಲವರು ಹೂವು-ಸಿಹಿ ಕೂಡ ಕೊಟ್ಟರು.
ತುಂಬ ಸಂತೋಷ ಕೊಡುವಂಥ ಅಚ್ಚರಿಯಿದು. ಸಾರ್ವಜನಿಕ ಸೇವೆಯನ್ನು ಗುರುತಿಸಿ, ಇಂಥ ಜಾಗೃತಿ ಮೂಡಿಸುವುದು ಖುಷಿ ತಂದಿದೆ ಎಂದು ಚಾಲಕರು ಹಾಗೂ ಸ್ವಯಂಸೇವಕರ ಗುಂಪು ಹೇಳಿದೆ. ನಗರದಲ್ಲಿ ಚಾಲನೆ ಅನುಭವ ಹೇಗಿರುತ್ತದೆ ಎಂದು ಚಾಲಕರು ಹಂಚಿಕೊಂಡರು. ವಾರದಲ್ಲಿ ಒಂದು ದಿನ ಖಾಸಗಿ ವಾಹನಗಳನ್ನು ಬಳಸದೆ ಸರಕಾರಿ ಬಸ್ ಬಳಸಿದರೆ ಸಂಚಾರ ದಟ್ಟಣೆ ಕಡಿಮೆಯಾಗಿ, ಒಳ್ಳೆ ಗಾಳಿ ಉಸಿರಾಡಬಹುದು ಎಂದು ತಿಳಿಸಿದ್ದಾರೆ.[ಮಾರ್ಚ್ 4ಕ್ಕೆ ಬೆಂಗಳೂರಿನಲ್ಲಿ 'ಬಸ್ ಭಾಗ್ಯ ಬೇಕು' ಅಭಿಯಾನ]
ಬೆಂಗಳೂರಿನಲ್ಲಿ ಬಸ್ ದರ ಕಡಿಮೆ ಮಾಡಬೇಕು, ಇನ್ನೂ ಹೆಚ್ಚಿನ ಬಸ್ ಗಳನ್ನು ಸೇವೆಗೆ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ ಮಾರ್ಚ್ ನಲ್ಲಿ ಬಸ್ ಭಾಗ್ಯ ಬೇಕು ಅಭಿಯಾನ ನಡೆಸಲಾಗಿತ್ತು.