ಈ ಬಾರಿ ಕಡ್ಲೆಕಾಯಿ ಪರಿಷೆಯಲ್ಲಿ ಹೊಸತೇನಿದೆ?
ಬೆಂಗಳೂರು, ನ.17: ಬೆಂಗಳೂರಿನಲ್ಲಿ ಕಡ್ಲೆಕಾಯಿ ಪರಿಷೆ ಸಂಭ್ರಮ ಮನೆಮಾಡಿದೆ. ಮಹಾನಗರದ ಮೂಲೆ ಮೂಲೆಯಿಂದ ನಾಗರಿಕರು ಆಗಮಿಸಿ ಅಲಂಕೃತ ದೊಡ್ಡ ಬಸವಣ್ಣನ ದರ್ಶನ ಪಡೆದು ಹಿಂದಿರುಗುತ್ತಿದ್ದಾರೆ.
ಎರಡು ದಿನಗಳ ಜಾನಪದ ಸಂತೆ ಇದೀಗ ಹಬ್ಬವಾಗಿ ಪರಿವರ್ತನೆಯಾಗಿದ್ದು ಜನರ ಪ್ರತಿಕ್ರಿಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ, ಬಿಬಿಎಂಪಿ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಪರಿಷೆಯ ಯಶಸ್ಸಿಗೆ ಶ್ರಮಿಸುತ್ತಿವೆ.[ಕಡ್ಲೆಕಾಯಿ ಪರಿಷೆ ಉದ್ಘಾಟನೆ ವಿಶೇಷವೇನು?]

ಸ್ವಚ್ಛ ಭಾರತ ಅಭಿಯಾನದ ಪರಿಣಾಮ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನದ ಪರಿಣಾಮ ಕಡ್ಲೆಕಾಯಿ ಪರಿಷೆ ಮೇಲೂ ಬಿದ್ದಿದೆ. ಜನರು ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್ ಮುಕ್ತ ಹಬ್ಬ ಆಚರಣೆಗೆ ಸಿದ್ಧವಾಗಿದ್ದಾರೆ. ಅಲ್ಲದೇ ವಿವಿಧ ಕಾಲೇಜು ವಿದ್ಯಾರ್ಥಿಗಳು ಜನರಿಗೆ ಬಟ್ಟೆ ಚೀಲಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಿದ್ದಾರೆ.
ಹೊಸತೇನಿದೆ?
ರಾಮಕೃಷ್ಣ ಆಶ್ರಮದಿಂದ ಎನ್ ಆರ್ ಕಾಲೋನಿ ವರೆಗಿನ ರಸ್ತೆಗಳ ಇಕ್ಕೆಲದಲ್ಲಿ ಕಡ್ಲೆಕಾಯಿ ಅಂಗಡಿಗಳ ಜತೆಗೆ, ಗೃಹ ಬಳಕೆ ವಸ್ತುಗಳು, ಗೊಂಬೆ, ಹೂ ಕುಂಡ, ಎಲೆಕ್ಟ್ರಾನಿಕ್ ಸಾಮಗ್ರಿಗಳು, ಪಿಂಗಾಣಿ ವಸ್ತುಗಳು, ಅಲಂಕಾರಿಕ ಉತ್ಪನ್ನಗಳು....ಹೀಗೆ ವಿವಿಧ ನಮೂನೆಯ ಸಾಮಗ್ರಿಗಳ ಮಾರಾಟ ಭರದಿಂದ ಸಾಗಿದೆ.

ಮಕ್ಕಳಿಗೆ ಇಷ್ಟವಾಗುವಂಥ ಆಟಗಳು, ವಂಡರ್-ಲಾ ಮಾದರಿಯ ತೊಟ್ಟಿಲು ಸದಾ ತಿರುಗುತ್ತಿದೆ. ಅಲ್ಲದೇ ಮಾಲ್ ಗಳಲ್ಲಿದ್ದ ಗೆಮ್ ಗಳು ಇದೀಗ ಬೀದಿಗೆ ಬಂದಿವೆ. ತಿಂಡಿ ಪೋತರ ಬಾಯಿ ಚಪಲ ಕಡಿಮೆ ಮಾಡಲು ಸಾಕಷ್ಟು ಅಂಗಡಿಗಳು ಬಾಗಿಲು ತೆರೆದು ನಿಂತಿವೆ.[ಕಡ್ಲೆಕಾಯಿ ಪರಿಷೆಗೆ ರಾಷ್ಟ್ರೀಯ ಮಾನ್ಯತೆ: ಅನಂತಕುಮಾರ್]
ವ್ಯಾಪಾರ ಕಡಿಮೆ
ಕಡ್ಲೆಕಾಯಿ ವ್ಯಾಪಾರಕ್ಕೆ ಕುಳಿತವರಲ್ಲಿ ಶೇ. 90 ಜನ ತಮಿಳುನಾಡು ಮೂಲದವರು. ಪರಿಷೆ ಸೋಮವಾರ ಆರಂಭಗೊಂಡಿದ್ದರೂ ವ್ಯಾಪಾರ ಶನಿವಾರವೇ ಶುರುವಾಗಿತ್ತು. ಈ ಬಾರಿ ವ್ಯಾಪಾರ ಸ್ವಲ್ಪ ಕಡಿಮೇನೇ ಇದೆ. ಬೆಲೆ ಏನೂ ಜಾಸ್ತಿಯಾಗಿಲ್ಲ. ಹಬ್ಬ ಸ್ವಲ್ಪ ಮುಂದೆ ಹೋಗಿದ್ದೇ ಕಾರಣವೇನೋ ಎಂದು ಕೋಲಾರದ ವ್ಯಾಪಾರಿ ಮಣಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬಿಗಿ ಬಂದೋಬಸ್ತ್
ಪೊಲೀಸ್ ಇಲಾಖೆ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ದೇವಾಲಯಕ್ಕೆ ತೆರಳುವವರು ಬಾಂಬ್ ಪರಿಶೀಲನಾ ಬಾಗಿಲಿನ ಮೂಲಕವೇ ಹಾದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಎಲ್ಲ ಕಡೆ ಕಬ್ಬಿಣದ ಗೇಟ್ ಅಳವಡಿಸಲಾಗಿದ್ದು ನೂಕು ನುಗ್ಗಲು ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.[ಪರಿಷೆಯ ಮತ್ತಷ್ಟು ಚಿತ್ರಗಳು]

ಪಾರ್ಕಿಂಗ್ ಎಲ್ಲಿ?
ಬೆಳಗ್ಗೆಯಿಂದ ಸಂಜೆಯವರೆಗೆ ದೊಡ್ಡ ಬಸವನಗುಡಿ ರಸ್ತೆಯ ಒಂದು ಕಡೆ ನಿಮ್ಮ ವಾಹನ ನಿಲ್ಲಿಸಲು ಅಡ್ಡಿಯಿಲ್ಲ. ಅದೇ ಸಂಜೆ 6 ರಿಂದ 10 ಗಂಟೆವರೆಗೆ ಎಲ್ಲಾ ವಾಹನಗಳಿಗೂ ನಿರ್ಭಂಧ. ಬ್ಯುಗಲ್ ರಾಕ್ ಉದ್ಯಾನದ ಕೆಳಬದಿ ಇಲ್ಲವೇ ಗಣೇಶ ಭವನ ಸಮೀಪ ವಾಹನ ನಿಲ್ಲಿಸಿ ನಡೆದುಕೊಂಡು ಪರಿಷೆಗೆ ಆಗಮಿಸುವುದೇ ಉತ್ತಮ.
ನವೆಂಬರ್ 18ರ ಸಾಂಸ್ಕೃತಿಕ ಕಾರ್ಯಕ್ರಮಗಳು
ಬ್ಯೂಗಲ್ ರಾಕ್ ಉದ್ಯಾನ:
ಸಂಜೆ 6 ರಿಂದ 7.30: ಶಿವಲೀಲ ಟ್ರಸ್ಟ್ ಆಶ್ರಯದಲ್ಲಿ 'ಸತ್ಯವೇ ಭಗವಂತ' ಪುಣ್ಯಕೋಟಿ ನೃತ್ಯ ನಾಟಕ
ರಾತ್ರಿ 7.30 ರಿಂದ 9.30: ರವಿಶಂಕರ್ ಶರ್ಮಾ ಅವರ ಶ್ರುತಿ ಸಿಂಧೂರ ತಂಡದಿಂದ 'ಕರ್ನಾಟಕ ಸಂಗೀತ.
ನರಸಿಂಹಸ್ವಾಮಿ ಉದ್ಯಾನವನ
ಸಂಜೆ 6 ರಿಂದ 7.30: ಸೂರ್ಯ ಕಲಾವಿದರು ತಂಡದಿಂದ ನೃತ್ಯ ವೈಭವ
ರಾತ್ರಿ 7.30 ರಿಂದ 9.30: ನಾಗಚಂದ್ರಿಕಾ ಭಟ್ ತಂಡದಿಂದ ಸುಗಮ ಸಂಗೀತ












Click it and Unblock the Notifications