Namma Metro: ಕೆಂಗೇರಿ - ಚಲ್ಲಘಟ್ಟ ಮಾರ್ಗದ ಸುರಕ್ಷತಾ ತಪಾಸಣೆ ಮುಕ್ತಾಯ
ನಮ್ಮ ಮೆಟ್ರೋ ನೇರಳೆ ಮಾರ್ಗ ಸಂಪೂರ್ಣವಾಗಿ ಕಾರ್ಯಾಚರಣೆ ನಡೆಸಲು ಸಮಯ ಹತ್ತಿರವಾಗಿದೆ. ಕೆಂಗೇರಿ - ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಸುರಕ್ಷತಾ ತಪಾಸಣೆ ಮುಗಿಸಿದ್ದಾರೆ.
ಕರ್ನಾಟಕ ಬಂದ್ ನಡುವೆಯೂ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಯಶಸ್ವಿಯಾಗಿ ಸುರಕ್ಷತಾ ತಪಾಸಣೆಯನ್ನು ನಡೆಸಿದ್ದಾರೆ. ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ತಪಾಸಣಾ ವರದಿಯನ್ನು ಸಲ್ಲಿಸಲಿದ್ದು, ಆ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ದಿನಾಂಕವನ್ನು ನಿಗದಿ ಮಾಡಲಾಗುತ್ತದೆ.

ಸೆಪ್ಟೆಂಬರ್ 21ರಂದು ನೇರಳೆ ಮಾರ್ಗದ ಮಿಸ್ಸಿಂಗ್ ಲಿಂಕ್ ಎನಿಸಿಕೊಂಡಿದ್ದ ಆರ್ ಪುರ - ಬೈಯಪ್ಪನಹಳ್ಳಿ ನಡುವಿನ 2-ಕಿಮೀ ಮಾರ್ಗದ ಸುರಕ್ಷತಾ ಪರಿಶೀಲನೆ ಮಾಡಿದ್ದ ಸಿಎಂಆರ್ಎಸ್ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿತ್ತು. ಇಂದು ಕೆಂಗೇರಿ ಚಲ್ಲಘಟ್ಟ ನಡುವೆ ಸುರಕ್ಷತಾ ತಪಾಸಣೆ ಮುಕ್ತಾಯವಾಗಿದೆ.
ಒಂದೇ ದಿನ ಉದ್ಘಾಟನೆ
ಈ ಮೊದಲೂ ಕೆಆರ್ ಪುರ - ಬೈಯಪ್ಪನಹಳ್ಳಿ ಮತ್ತು ಕೆಂಗೇರಿ - ಚಲ್ಲಘಟ್ಟ ನಡುವೆ ಎರಡು ಹಂತಗಳಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಲಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಕೆಆರ್ ಪುರ - ಬೈಯಪ್ಪನಹಳ್ಳಿ ಸುರಕ್ಷತಾ ತಪಾಸಣೆ ಬಳಿಕ, ಕೆಂಗೇರಿ - ಚಲ್ಲಘಟ್ಟ ಮಾರ್ಗದಲ್ಲಿ ಸುರಕ್ಷತಾ ತಪಾಸಣೆಗೂ ದಿನಾಂಕ ಮಾಡಿದ್ದರಿಂದ, ಎರಡೂ ಮಾರ್ಗಗಳಲ್ಲಿ ಒಂದೇ ಬಾರಿ ರೈಲು ಸಂಚಾರಕ್ಕೆ ಆರಂಭಿಸಲು ಬಿಎಂಆರ್ ಸಿಎಲ್ ನಿರ್ಧಾರ ಮಾಡಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ 15ರ ಒಳಗೆ ಚಲ್ಲಘಟ್ಟ - ಕಾಡುಗೋಡಿ (ವೈಟ್ಫೀಲ್ಡ್) ನಡುವೆ ಸಂಪೂರ್ಣವಾಗಿ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳು ಕಾರ್ಯಾಚರಣೆ ಆರಂಭಿಸಲಿವೆ.
44 ಕಿಮೀ ಉದ್ದದ ನೇರಳೆ ಮಾರ್ಗ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾದ ಬಳಿಕ ಈ ಭಾಗದ ಉದ್ಯೋಗಿಗಳು, ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ. ಅದರಲ್ಲೂ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಟ್ರಾಫಿಕ್ ಸಮಸ್ಯೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ ಎಂದು ನಂಬಲಾಗಿದೆ.
44 ಕಿಮೀ ಉದ್ದದ ನೇರಳೆ ಮಾರ್ಗದ ಸಂಪೂರ್ಣವಾಗಿ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ದಿನದ ಪ್ರಯಾಣಿಕರ ಸಂಖ್ಯೆ 75000 ದಿಂದ 1 ಲಕ್ಷ ದಷ್ಟು ಹೆಚ್ಚಾಗುತ್ತದೆ ಎಂದು ಬಿಎಂಆರ್ ಸಿಎಲ್ ಅಂದಾಜು ಮಾಡಿದೆ.
ಸಿಎಂಆರ್ಎಸ್ ಕೆಂಗೇರಿ - ಚಲ್ಲಘಟ್ಟ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಅನುಮೋದನೆ ನೀಡಿದ ನಂತರ, ಬಿಎಂಆರ್ ಸಿಎಲ್ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಸಂಪರ್ಕ ಮಾಡಲಿದ್ದು, ಎರಡೂ ಸರ್ಕಾರಗಳ ಒಪ್ಪಿಗೆಯ ಬಳಿಕ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಿದೆ.












Click it and Unblock the Notifications