ಪತ್ನಿಯಿಂದ ರಕ್ಷಣೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರಿನ ವ್ಯಕ್ತಿ
ಬೆಂಗಳೂರು, ನವೆಂಬರ್ 2: ಪ್ರತಿದಿನ ದೈಹಿಕವಾಗಿ ಚಿತ್ರಹಿಂಸೆ ನೀಡುವ ಪತ್ನಿಯಿಂದ ರಕ್ಷಣೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಬೆಂಗಳೂರಿನ ವ್ಯಕ್ತಿ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ಯದುನಂದನ್ ಆಚಾರ್ಯ ಎಂಬ ವ್ಯಕ್ತಿಯು ಈ ಪತ್ರವನ್ನು ರವಾನಿಸಿದ್ದಾರೆ.
ತನ್ನ ಹೆಂಡತಿ ಪ್ರತಿದಿನ ಹೊಡೆಯುತ್ತಾಳೆ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡುತ್ತಾಳೆ ಎಂದೂ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
Invest Karnataka 2022: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆಗೆ ಲಗತ್ತಿಸಿ ಈ ವ್ಯಕ್ತಿಯು ತಮ್ಮ ಪತ್ರವನ್ನು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹಾಗೂ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿದ್ದಾರೆ.
ಪತ್ನಿಯು ತಮ್ಮ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ನನಗೆ ಚಾಕೂ ಇರಿತದ ಗಾಯವಾಗಿದೆ ಎಂದು ವ್ಯಕ್ತಿಯು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ನಾನು ಒಬ್ಬ ಗಂಡಸಾಗಿದ್ದರಿಂದ ನನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲವೆಂದು ನೋವು ಹಂಚಿಕೊಂಡಿದ್ದಾರೆ.
'ಇದೇನಾ ನೀವು(ಪ್ರಧಾನಿ ಮೋದಿ) ಹೇಳುತ್ತಿರುವ ನಾರಿ ಶಕ್ತಿ. ನಾನು ಆಕೆಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ನೀಡಲೇ' ಎಂದು ಕೇಳಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತರು, 'ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಕೊಡುವಂತೆ ಸಲಹೆ ನೀಡಿದ್ದಾರೆ'
ಪೊಲೀಸ್ ಆಯುಕ್ತರಿಗೆ ಈ ಹಿಂದೆ ಕಳುಹಿಸಿರುವ ಸಂದೇಶಗಳ ಸ್ಕ್ರೀನ್ ಶಾಟ್ಗಳನ್ನೂ ಯದುನಂದನ್ ಆಚಾರ್ಯ ಅವರು ಕಮೆಂಟಿಸಿದ್ದಾರೆ.
ಯದುನಂದನ್ ಅವರು ಟ್ವಿಟ್ಟರ್ ಪ್ರೊಫೈಲ್ ಅಲ್ಲಿ ಬರೆದುಕೊಂಡಿರುವಂತೆ, 'ಅವರೊಬ್ಬ ಎಂಜಿನಿಯರ್. ಮಾಜಿ ಬೈಕರ್. ಸುಳ್ಳು ಆರೋಪಗಳಿಗೆ ಬಲಿಯಾದವನು. ಭಾರತದಲ್ಲಿ ಲಿಂಗ ಪಕ್ಷಪಾತ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತೇನೆ' ಎಂದು ತಿಳಿಸಿದ್ದಾರೆ.