ವೈರಲ್ ವಿಡಿಯೋ: ಬೆಂಗಳೂರು ಗಗನಯಾನಿ ಚಂದ್ರಯಾನ ಯಶಸ್ವಿ
ಬೆಂಗಳೂರು, ಸೆ. 02: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಚಂದ್ರಯಾನ 2ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಮುನ್ನವೇ ಬೆಂಗಳೂರಿನ ಗಗನಯಾತ್ರಿಯೊಬ್ಬರು ಚಂದ್ರನ ಮೇಲ್ಮೈನಲ್ಲಿ ಭಾರದ ಹೆಜ್ಜೆಗಳನ್ನಿಟ್ಟಿದ್ದಾರೆ. ಗಗನಯಾನಿಯೊಬ್ಬರು ಚಂದ್ರನ ಮೇಲೆ ನಡೆಯುವ ವಿಡಿಯೋ ಇಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ಸೆ.7ರ ತನಕ ಕಾಯಬೇಕಿದೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಿರ್ಮಾಣದ ಚಂದ್ರನ ಮೇಲ್ಮೈನಲ್ಲಿ ಗಗನಯಾನಿಯೊಬ್ಬರು ನಡೆದು ಪ್ರತಿಭಟನಾ ರೂಪಕ ಹೆಜ್ಜೆಗಳನ್ನಿಟ್ಟಿದ್ದಾರೆ.
ಕರ್ನಾಟಕದ ಹೆಮ್ಮೆಯ ಕಲಾವಿದ ಬಾದಲ್ ನಂಜುಂಡಸ್ವಾಮಿ ಮತ್ತೊಮ್ಮೆ ತಮ್ಮ ಕಲೆಯ ಮೂಲಕ ಬಿಬಿಎಂಪಿಗೆ ಚಾಟಿ ಬೀಸಿದ್ದಾರೆ. ರಸ್ತೆಗುಂಡಿಗಳನ್ನು ಆಕರ್ಷಕ ಈಜುಕೊಳ ಮಾಡಿ ಮತ್ಸ್ಯಕನ್ಯೆಯನ್ನು ಸೃಷ್ಟಿಸುವುದು, ಅಸ್ತವ್ಯಸ್ತಗೊಂಡ ರಸ್ತೆ ಡಿವೈಡರ್ ಸರಿ ಪಡಿಸಲು ಆ ಕಲ್ಲುಗಳಿಗೆ ಚಿನ್ನದ ಬಣ್ಣ ಬಳಿಯುವುದು ಹೀಗೆ ನಿರಂತರವಾಗಿ ಬಿಬಿಎಂಪ್ ಹುಳುಕುಗಳನ್ನು ಎತ್ತಿ ತೋರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.
ಚಂದ್ರಯಾನ ಟ್ರೆಂಡಿಂಗ್ ನಲ್ಲಿರುವುದರಿಂದ ಈ ಬಾರಿ ಗಗನಯಾತ್ರಿಯ ದಿರಿಸನ್ನು ತೊಟ್ಟ ವ್ಯಕ್ತಿಯೊಬ್ಬ ಚಂದ್ರನ ಮೇಲ್ಮೈನಂತೆ ಕಾಣುವ ನಗರದ ರಸ್ತೆಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಹೆಜ್ಜೆ ಹಾಕುವುದನ್ನು ಚಿತ್ರಿಸಿ ಹಂಚಿಕೊಂಡಿದ್ದು, ಸದ್ಯ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ.
ರಸ್ತೆ ಗುಂಡಿ ಕಂಡರೆ ಆನ್ಲೈನ್ ನಲ್ಲಿ ಬಿಬಿಎಂಪಿಗೆ ದೂರು ನೀಡಿ
ತುಂಗಾನಗರದ ಮುಖ್ಯರಸ್ತೆಯಲ್ಲಿ ಚಿತ್ರೀಕರಿಸಿದ್ದು, ಮೂನ್ ವಾಕ್ ವಿಡಿಯೋ ನೀವು ನೋಡಿ...ರಸ್ತೆಗುಂಡಿ ಮುಚ್ಚದ ಇಂಜಿನಿಯರ್ ಗಳಿಗೆ 2000 ರು ದಂಡ ವಿಧಿಸುವುದಾಗಿ ಕಳೆದ ವಾರ ಬಿಬಿಎಂಪಿ ಆದೇಶವನ್ನು ಹೊರಡಿಸಿತ್ತು. ರಸ್ತೆಗುಂಡಿಗಳಿಂದ ಆಗುವ ಅಪಘಾತಗಳಿಗೆ ಬಿಬಿಎಂಪಿ ಅಧಿಕಾರಿಗಳನ್ನೇ ಹೊಣೆ ಮಾಡುವಂತೆ ಆಗಸ್ಟ್ ತಿಂಗಳಿನಲ್ಲಿ ಹೈಕೋರ್ಟ್ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.