ಬೆಂಗಳೂರು-ಮಾಗಡಿ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಜುಲೈನಲ್ಲಿ ಚಾಲನೆ
ಬೆಂಗಳೂರು, ಜೂನ್ 3: ರಾಜಧಾನಿ ಬೆಂಗಳೂರಿನಿಂದ (ನೈಸ್ ರಸ್ತೆಯಿಂದ) ಮಾಗಡಿ ಪಟ್ಟಣದವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಇನ್ನೊಂದು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ತಿಳಿಸಿದರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ-ಶಿಫ್) ಮುಖ್ಯ ಯೋಜನಾಧಿಕಾರಿ ಕೆ.ಎಸ್.ಕೃಷ್ಣಾರೆಡ್ಡಿ, ಮುಖ್ಯ ಎಂಜಿನಿಯರ್ ಸುರೇಶ್ ಬಾಬು ಹಾಗೂ ಮಾಗಡಿ ಶಾಸಕ ಮಂಜುನಾಥ ಜತೆ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಯೋಜನೆಯ ಪ್ರಗತಿ ಪರಿಶೀಲಿಸಿದ ನಂತರ ಉಪ ಮುಖ್ಯಮಂತ್ರಿ ಈ ವಿಚಾರ ಹೇಳಿದ್ದಾರೆ.
ಬೆಳಗಾವಿ, ಮಂಗಳೂರಿನಲ್ಲಿ ಇಂಟೆಲ್ ಚಿಪ್ ಘಟಕ ಸ್ಥಾಪನೆಗೆ ಆಹ್ವಾನ
ಅಂದಾಜು 1036 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ 170 ಎಕರೆ ಭೂಮಿಯನ್ನು ಖರೀದಿ ಮಾಡಿದ್ದು, ಶೇ 90ರಷ್ಟು ಭೂಮಿಯನ್ನು ಹಸ್ತಾಂತರ ಮಾಡಲಾಗಿದೆ. ಆದಷ್ಟು ಬೇಗ ಉಳಿದ ಜಮೀನನ್ನೂ ಕೊಟ್ಟು, ಕಾಮಗಾರಿ ಆರಂಭಿಸಬೇಕು ಎಂದು ಉಪ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು. ವಾಹನ ದಟ್ಟಣೆ ಹೆಚ್ಚು ಇರುವ ಕಾರಣ ಅಪಘಾತಗಳು ಹೆಚ್ಚಾಗುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕು. ನಾಡಪ್ರಭು ಕೆಂಪೇಗೌಡರ ಸಮಾಧಿ ಮಾಗಡಿ ತಾಲ್ಲೂಕಿನಲ್ಲಿದ್ದು, ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಈ ಹೆದ್ದಾರಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಇದೇ ರಸ್ತೆ ಹುಲಿಯೂರುದುರ್ಗದ ಮೂಲಕ ರಂಗನಾಥಪುರ ಹಾಗೂ ಸೋಮವಾರಪೇಟೆಗೂ ಸಂಪರ್ಕ ಕಲ್ಪಿಸಲಿದೆ. ಇದು ಒಂದು ರೀತಿ ಪ್ರವಾಸಿ ತಾಣಗಳ ಸಂಪರ್ಕ ಹೆದ್ದಾರಿಯಾಗಿ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.