ಬೆಂಗಳೂರಿಗೆ ಬರಬೇಕಾದ ಬಹುದೊಡ್ಡ ಯೋಜನೆ ಆಂಧ್ರ ಪಾಲು, ಹಿನ್ನಡೆ ಆಗಿದ್ದೆಲ್ಲಿ ? Google Ai Hub
Google Ai Hub: ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಹಾಗೂ ಜನಸೇನಾ ಪಾರ್ಟಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕರ್ನಾಟಕ ಹಾಗೂ ಬೆಂಗಳೂರು ಅಭಿವೃದ್ಧಿಯ ಮೇಲೆ ಕಣ್ಣಿರಿಸಿದೆ. ಇದೀಗ ಬೆಂಗಳೂರಿಗೆ ಬರಬೇಕಾದ ಮಹತ್ವದ ಯೋಜನೆ ಕೊನೆಯ ಕ್ಷಣದಲ್ಲಿ ಆಂಧ್ರಪ್ರದೇಶದ ಪಾಲಾಗಿದೆ. ಈ ಮೂಲಕ ಬೆಂಗಳೂರಿಗೆ ಭಾರೀ ಹಿನ್ನಡೆ ಆದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಬೆಂಗಳೂರಿಗೆ ಇದು ಬಹುದೊಡ್ಡ ಹೊಡೆತ ಎಂದೇ ಹೇಳಲಾಗುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಮೂಲಸೌಕರ್ಯ ಹಾಗೂ ಭಾಷೆ ಸೇರಿದಂತೆ ವಿವಿಧ ಕಾರಣಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇಲ್ಲಿನ ಮೂಲಸೌಕರ್ಯ ವ್ಯವಸ್ಥೆ ಕುಸಿಯುತ್ತಿದೆ ಹಾಗೂ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ ಎನ್ನುವುದು ಸೇರಿದಂತೆ ಹಲವು ಕಾರಣಗಳಿಗೆ ಚರ್ಚೆ ಆಗುತ್ತಿದೆ. ಬೆಂಗಳೂರಿನ ಮೇಲಿರುವ ಒತ್ತಡ ಹಾಗೂ ಆ ಒತ್ತಡಕ್ಕೆ ಅನುಗುಣವಾಗಿ ಪರಿಹಾರಗಳು ಆಗುತ್ತಿಲ್ಲ ಎನ್ನುವ ಕಾರಣಗಳಿಗೆ ಬೆಂಗಳೂರಿನಿಂದ ಉದ್ಯಮಗಳು ಹೊರಗೆ ಹೋಗಲಿವೆಯೇ ಎನ್ನುವ ಆತಂಕವಿತ್ತು. ಎಐ ಹಬ್ ಇದೀಗ ಆಂಧ್ರಪ್ರದೇಶದ ಪಾಲಾಗಿರುವುದು ಈ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ವಿಶ್ವದ ಟೆಕ್ ದೈತ್ಯ ಗೂಗಲ್ ಸಂಸ್ಥೆ ಭಾರತದಲ್ಲಿ ಭಾರಿ ಮೊತ್ತದ ಹೂಡಿಕೆಗೆ ಮುಂದಾಗಿದೆ. ಇದು ಸಂತೋಷದ ವಿಷಯವೇ ಆಗಿದೆ. ಆದರೆ ಈ ಯೋಜನೆ ಕನ್ನಡಿಗರ ಕೈಯಿಂದ ಕೈ ತಪ್ಪಿರುವುದು ಭಾರೀ ನಿರಾಸೆಯನ್ನುಂಟು ಮಾಡಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ Google ಸಿಇಒ ಸುಂದರ್ ಪಿಚೈ ಅವರು, ಆಂಧ್ರಪ್ರದೇಶದ ವಿಶಾಖಪಟ್ಟಣ ತಂತ್ರಜ್ಞಾನ ದೈತ್ಯ ಕಂಪನಿಯ ಮೊದಲ AI ಹಬ್ ಯೋಜನೆ ಜಾರಿ ಆಗುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ. ಇದು ಬೆಂಗಳೂರಿಗೆ ಭಾರೀ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣವಾದರೂ ನಮಗೇ ಲಾಭವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಆಂಧ್ರಪ್ರದೇಶ ಇದೆ.
ಭಾರತದ ಪ್ರಧಾನಿಯವರೊಂದಿಗೆ ಮಾತನಾಡಲು ಸಂತೋಷವಾಯಿತು. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮೊದಲ ಗೂಗಲ್ AI ಹಬ್ಗಾಗಿ ನಮ್ಮ ಯೋಜನೆಗಳನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ. ಈ ಹಬ್ ಗಿಗಾವ್ಯಾಟ್-ಪ್ರಮಾಣದ ಕಂಪ್ಯೂಟ್ ಸಾಮರ್ಥ್ಯ, ಹೊಸ ಅಂತ ರರಾಷ್ಟ್ರೀಯ ಸಬ್ಸೀ ಗೇಟ್ವೇ ಮತ್ತು ದೊಡ್ಡ ಪ್ರಮಾಣದ ಇಂಧನ ಮೂಲಸೌಕರ್ಯವನ್ನು ಸಂಯೋಜನೆ ಆಗಲಿದೆ. ಇದರ ಮೂಲಕ ನಾವು ನಮ್ಮ ಉದ್ಯಮ-ಪ್ರಮುಖ ತಂತ್ರಜ್ಞಾನವನ್ನು ಭಾರತದ ಉದ್ಯಮಗಳು ಮತ್ತು ಬಳಕೆದಾರರಿಗೆ ತರುತ್ತೇವೆ. AI ನಾವೀನ್ಯತೆಯನ್ನು ವೇಗಗೊಳಿಸುತ್ತೇವೆ ಮತ್ತು ದೇಶಾದ್ಯಂತ ಬೆಳವಣಿಗೆ ಹೆಚ್ಚಿಸುತ್ತೇವೆ ಎಂದು ಸುಂದರ್ ಪಿಚೈ ಅವರು ಹೇಳಿದ್ದಾರೆ.
ಆಂಧ್ರಪ್ರದೇಶದ ಅದ್ಭುತ ನಗರವಾದ ವಿಶಾಖಪಟ್ಟಣದಲ್ಲಿ ಗೂಗಲ್ ಎಐ ಹಬ್ ಪ್ರಾರಂಭವಾಗುತ್ತಿರುವುದು ಸಂತೋಷವಾಗಿದೆ. ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಮೂಲಸೌಕರ್ಯವನ್ನು ಒಳಗೊಂಡಿರುವ ಈ ಬಹುಮುಖಿ ಹೂಡಿಕೆಯು ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ದೃಷ್ಟಿಕೋನಕ್ಕೆ ಪೂರಕವಾಗಿದೆ. ತಂತ್ರಜ್ಞಾನವನ್ನು ಅತ್ಯುತ್ತಮವಾಗಿಸುವುದಕ್ಕೆ ಇದು ಪ್ರಬಲ ಶಕ್ತಿಯಾಗಲಿದೆ.
ಇದು ಎಲ್ಲರಿಗೂ ಎಐ ಸಿಗುವುದನ್ನು ಖಚಿತಪಡಿಸುತ್ತದೆ. ನಮ್ಮ ದೇಶದ ಜನರಿಗೆ ಅತ್ಯಾಧುನಿಕ ಎಐ ತಲುಪುವಂತೆ ಮಾಡುತ್ತದೆ. ನಮ್ಮ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಜಾಗತಿಕ ತಂತ್ರಜ್ಞಾನ ನಾಯಕನಾಗಿ ಭಾರತದ ಸ್ಥಾನವನ್ನು ಭದ್ರಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತೋಷ ಹಂಚಿಕೊಂಡಿದ್ದಾರೆ.












Click it and Unblock the Notifications