ಬೆಂಗಳೂರು ಲಾಕ್ ಡೌನ್ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು
ಬೆಂಗಳೂರು, ಜುಲೈ.15: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ನಿಯಂತ್ರಿಸುವ ಉದ್ದೇಶದಿಂದ ಸಿಲಿಕಾನ್ ಸಿಟಿಯಲ್ಲಿ ಒಂದು ವಾರ ಕಠಿಣ ಲಾಕ್ ಡೌನ್ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಜುಲೈ.14ರ ರಾತ್ರಿ 8 ಗಂಟೆಯಿಂದಲೇ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಾಗಿದ್ದು, ಜುಲೈ.22ರವರೆಗೂ ಲಾಕ್ ಡೌನ್ ಮುಂದುವರಿಯಲಿದೆ. ಈ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಈಗಾಗಲೇ ಪೊಲೀಸರಿಗೆ ಖಡಕ್ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಲಾಕ್ ಡೌನ್ ಹಿನ್ನೆಲೆ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಕಾನೂನು ಪಾಲನೆ ಹಾಗೂ ಶಿಸ್ತುಬದ್ಧ ಲಾಕ್ ಡೌನ್ ಜಾರಿಗೆ ಸೂತ್ರಗಳನ್ನು ನೀಡಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಎಲ್ಲ ಅಂಗಡಿಗಳನ್ನು ಮುಚ್ಚಬೇಕು
ಸಿಲಿಕಾನ್ ಸಿಟಿಯಲ್ಲಿ ಲಾಕ್ ಡೌನ್ ನಡುವೆಯೂ ಅಗತ್ಯ ವಸ್ತುಗಳ ಪೂರೈಕೆ ಮತ್ತು ಮಾರಾಟದ ಅಗತ್ಯವಿದೆ. ಈ ಹಿನ್ನೆಲೆ ಕೆಲವು ವ್ಯಾಪಾರ-ವಹಿವಾಟಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಪೊಲೀಸರು ವ್ಯಾಪಾರಿಗಳ ಜೊತೆಗೆ ಮೃದುವಾಗಿ ನಡೆದುಕೊಳ್ಳಬೇಕು. ಮಧ್ಯಾಹ್ನ 12 ಗಂಟೆ ನಂತರದಲ್ಲಿ ಮಡಿಕಲ್ ಶಾಪ್ ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಿಸಬೇಕು ಎಂದು ಭಾಸ್ಕರ್ ರಾವ್ ಸೂಚಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿಗಳ ಪಾಸ್ ಪರಿಶೀಲಿಸಿ
ಬೆಂಗಳೂರು ಲಾಕ್ ಡೌನ್ ಹಿನ್ನೆಲೆ ಯಾವುದೇ ಬಸ್ ವ್ಯವಸ್ಥೆ ಇರುವುದಿಲ್ಲ. ಈ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳುವ ಮೊದಲು ಪಾಸ್ ಪರಿಶೀಲನೆ ಮಾಡಬೇಕು. ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಶಿಸ್ತುಕ್ರಮವನ್ನು ತೆಗೆದುಕೊಳ್ಳಬೇಕು. ಆದರೆ, ಮಾಧ್ಯಮದ ಪ್ರತಿನಿಧಿಗಳಿಗೆ ಯಾವುದೇ ಪಾಸ್ ಅಗತ್ಯ ಇರುವುದಿಲ್ಲ. ಐಡಿ ಕಾರ್ಡ್ ಗಳಿದ್ದಲ್ಲಿ ಸಾಕು ಎಂದು ತಿಳಿಸಿದ್ದಾರೆ.

ಪೊಲೀಸರು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ
ನಗರದಲ್ಲಿ ಮುಂದಿನ ಏಳು ದಿನಗಳ ಕಾಲ ಲಾಕ್ ಡೌನ್ ಜಾರಿಯಲ್ಲಿ ಇರಲಿದ್ದು ವಿಮಾನ ನಿಲ್ದಾಣದ ಫ್ಲೈಓವರ್ ಹೊರತುಪಡಿಸಿ ಎಲ್ಲ ಫ್ಲೈಓವರ್ ಗಳು ಬಂದ್ ಆಗಿರಲಿವೆ. ಏರ್ ಪೋರ್ಟ್, ರೈಲ್ವೆ ಮತ್ತು ಟ್ಯಾಕ್ಸಿ ಸೇವೆ ಎಂದಿನಂತೆ ಇರುತ್ತದೆ. ಈ ಹಿನ್ನೆಲೆ ಪೊಲೀಸರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಸ್ವಯಂ ಸೇವಕರನ್ನು ನೇಮಿಸಿಕೊಂಡಿರುವ ಬಗ್ಗೆ ಮಾಹಿತಿ
ಕೊರೊನಾವೈರಸ್ ಸೋಂಕು ನಿಯಂತ್ರಣ ಮತ್ತು ಬೆಂಗಳೂರು ಲಾಕ್ ಡೌನ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಅವರಿಗೆ ಒಂದು ಜಾಕೆಟ್ ಮತ್ತು ಕ್ಯಾಪ್ ನೀಡಲಾಗಿದ್ದು, ಕಂಪ್ಯೂಟರ್ ಆಪರೇಟಿಂಗ್, ಚೆಕ್ ಪಾಯಿಂಟ್ ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಸ್ವಯಂಸೇವಕರಿಗೆ ಯಾವುದೇ ಆಯುಧಗಳನ್ನು ನೀಡುವುದಿಲ್ಲ ಹಾಗೂ ಕಂಟೇನ್ಮೆಂಟ್ ಝೋನ್ ಗಳಿಗೆ ಅವರನ್ನು ಕರೆದೊಯ್ಯುವಂತಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.












Click it and Unblock the Notifications