ಡಿಸಿ ಶಂಕರ್ ದಿಟ್ಟ ನಡೆ: ಸಾರಕ್ಕಿ ಕೆರೆ ತೆರವು
ಬೆಂಗಳೂರು, ಏ. 16: ಗುರುವಾರ ಬೆಳಗ್ಗೆ ಸಾರಕ್ಕಿ ಕೆರೆ ಸುತ್ತ ಮುತ್ತ ಜೆಸಿಬಿಗಳ ಘರ್ಜನೆ, ಸ್ವಂತ ಮನೆ ಹೋಯ್ತು, ಶಾಲಾ ಕಟ್ಟಡ ಹೋಯ್ತು, ಬಾಡಿಗೆ ಮನೆ ಹೋಯ್ತು ಎಂಬ ಆಕ್ರೋಶದ ಮಾತುಗಳು... ಸ್ವಯಂ ಪ್ರೇರಿತವಾಗಿ ಮನೆಯ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸುತ್ತಿರುವ ನಾಗರೀಕರು.. ಇವೆಲ್ಲ ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಣ್ಣಿಗೆ ಬಿದ್ದ ದೃಶ್ಯಾವಳಿಗಳು.
ನಗರದ ಕೆರೆ ಸಂರಕ್ಷಣೆಗೆ ಪಣತೊಟ್ಟಿರುವ ಜಿಲ್ಲಾಧಿಕಾರಿ ವಿ.ಶಂಕರ್ ದಿಟ್ಟ ಹೆಜ್ಜೆಯೊಂದನ್ನು ಇರಿಸಿದ್ದಾರೆ. ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ ಮಾಡಿದ್ದು ಇನ್ನು ಎರಡು ದಿನ ಕಾಲ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.[ಸಾರಕ್ಕಿ ಕೆರೆ ತೆರವು: 2 ಸಾವಿರ ಕೋಟಿ ಮೌಲ್ಯದ ಜಾಗ ವಶ]
ಗುರುವಾರ ಬೆಳಗ್ಗೆಯಿಂದಲೇ ಸುಮಾರು 8 ಕ್ಕೂ ಅಧಿಕ ಜೆಸಿಬಿಗಳು ಸಾರಕ್ಕಿ ಕೆರೆ ಸುತ್ತ ಮುತ್ತ ಘರ್ಜಿಸುತ್ತಿವೆ. ಹೈಕೋರ್ಟ್ ವಿಭಾಗೀಯ ಪೀಠದ ಆದೇಶದಂತೆ ಕೆರೆ ಒತ್ತುವರಿ ತೆರವು ಕೆಲಸ ಆರಂಭಮಾಡಲಾಗಿದೆ. ಕೆಲವರು ಸ್ವಯಂ ಪ್ರೇರಿತವಾಗಿ ತೆರವು ಮಾಡುತ್ತಿದ್ದಾರೆ. ದೇವಾಲಯ, ಮಸೀದಿ ಮತ್ತು ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡಲಾಗುತ್ತಿಲ್ಲ. ಇವುಗಳನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದಿದ್ದು ಮುಂದೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಂಕರ್ ತಿಳಿಸಿದ್ದಾರೆ.

ಜಾಗ ಕಂದಾಯ ಇಲಾಖೆ ವಶಕ್ಕೆ
ಉತ್ತರಹಳ್ಳಿ ಹೋಬಳಿಯ ಸಾರಕ್ಕಿ ಕೆರೆ ವ್ಯಾಪ್ತಿ ಬರೋಬ್ಬರಿ 84 ಎಕರೆ. ಆದರೆ ಅದರಲ್ಲಿ 32 ಎಕೆರಗೂ ಅಧಿಕ ಜಾಗ ಭೂಗಳ್ಳರ ಪಾಲಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲೂ ಹೋರಾಟ ನಡೆಯುತ್ತಿದ್ದು ಕಳೆದ ನಾಲ್ಕು ವರ್ಷದಿಂದ ನಡೆಯುತ್ತಿದ್ದ ವಿವಾದ ತೆರವು ಮಾಡುವ ಮೂಲಕ ಬಗೆಹರಿದಂತಾಗಿದೆ. ತೆರವು ಕಾರ್ಯಾಚರಣೆ ನಂತರ ಕಂದಾಯ ಇಲಾಖೆ ಭೂಮಿಯನ್ನು ವಶಕ್ಕೆ ಪಡೆದು ನಿರ್ವಹಣೆ ಇವಾಬ್ದಾರಿ ವಹಿಸಿಕೊಳ್ಳಲಿದೆ.

ದೊಡ್ಡದಾದ ಕೆರೆ ಎಲ್ಲಿದೆ?
ವಿಶಾಲವಾದ ಕೆರೆ ಬೆಂಗಳೂರಿನ ಉತ್ತರಹಳ್ಳಿ ಹೋಬಳಿಯ ಜೆಪಿ ನಗರದಲ್ಲಿದೆ. ಕೆರೆಗೆ ಜರಗನಹಳ್ಳಿ, ಪುಟ್ಟೇನಹಳ್ಳಿ ಮತ್ತು ಸಾರಕ್ಕಿ ಕೆರೆ ಪ್ರದೇಶಗಳು ಸೇರಿಕೊಳ್ಳುತ್ತವೆ. ಸರ್ಕಾರ ಹೇಳುವಂತೆ ಜರಗನಹಳ್ಳಿ ಸ.ನಂ. 7ರಲ್ಲಿ 38 ಎಕರೆ, ಪುಟ್ಟೇನಳ್ಳಿ ಸ.ನಂ.ನಲ್ಲಿ 6 ಎಕರೆ ಮತ್ತು ಸಾರಕ್ಕಿ ವ್ಯಾಪ್ತಿಯಲ್ಲಿ 38 ವ್ಯಾಪ್ತಿಯಿದ್ದ ಕೆರೆಯನ್ನು ನಿರಂತರವಾಗಿ ಒತ್ತುವರಿ ಮಾಡಲಾಗಿತ್ತು. ಹೊಸದಾಗಿ ಸರ್ವೇ ಮಾಡಿ ತೆರವು ಕೆಲಸ ಆರಂಭಮಾಡಲಾಗಿದೆ.

ಎಷ್ಟು ಮನೆಗಳು? ಎಷ್ಟು ಕಾಂಪ್ಲೆಕ್ಸ್ ಗಳು?
ಸುಮಾರು 350 ಮನೆಗಳು ಮತ್ತು 30 ಕ್ಕೂ ಅಧಿಕ ಕಾಂಪ್ಲೆಕ್ಸ್ ಗಳನ್ನು ತೆರವು ಮಾಡಲಾಗುತ್ತಿದೆ. ಕೆರೆ ಪಕ್ಕದಲ್ಲಿದ್ದ ಗುಡಿಸಲು, ಸಿಮೆಂಟ್ ಶೀಟ್ ಮನೆಗಳು, ಆರ್ ಸಿಸಿ ಮನೆಗಳು, ಬಹುಮಹಡಿ ಕಟ್ಟಡ ಎಲ್ಲದಕ್ಕೂ ಜೆಸಿಬಿ ಪ್ರಹಾರ ಮಾಡುತ್ತಿದೆ. ಕೆಲವರದ್ದು 10 ಅಡಿ ಜಾಗ ತೆರವಾದರೆ ಸಂಪೂರ್ಣ ಮನೆ ಕಳೆದುಕೊಂಡವರು ಇದ್ದಾರೆ.

ಯಾವ ಯಾವ ಇಲಾಖೆ ಅಧಿಕಾರಿಗಳು ಇದ್ದಾರೆ?
ಜಿಲ್ಲಾಡಳಿತ ಸೇರಿದಂತೆ, ಬಿಬಿಎಂಪಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದಾರೆ.
ಬಿಎಂಟಿಎಫ್ ಸುನೀಲ್ ಕುಮಾರ್ ಸಹ ಹಾಜರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಜತೆಗೆ ಸುಮಾರು 1500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಆಂಬುಲೆನ್ಸ್ ಮತ್ತು ಅಗ್ನಿ ಶಾಮಕ ದಳದ ವಾಹನಗಳು ಸ್ಥಳದಲ್ಲಿಯೇ ಇವೆ.

ವಾಸ ಮಾಡುತ್ತಿದ್ದವರು ಯಾರು?
ತೆರವಿಗೆ ಸಂಬಂಧಿಸಿದ ಜಾಗದಲ್ಲಿ ಮಧ್ಯಮ ವರ್ಗ ಮತ್ತು ಕೆಳ ವರ್ಗದವರೇ ಹೆಚ್ಚಾಗಿ ವಾಸವಿದ್ದರು. ಆಂಧ್ರ ಮತ್ತು ತಮಿಳುನಾಡು ಮೂಲದ ಜನರೇ ಇಲ್ಲಿ ಬಹುಸಂಖ್ಯಾತರು. ಕೆಲವರು ಸ್ವಯಂ ಪ್ರೇರಿತವಾಗಿ ತೆರವು ಮಾಡುತ್ತಿದ್ದರೇ, ಆರ್ಥಿಕ ಸ್ಥಿತಿವಂತರು ಸಾಮಗ್ರಿ ಹೋದರೇ ಹೋಯ್ತು ಅಂತ ಸುಮ್ಮನಾಗಿದ್ದರು.

ನಮ್ಮದೇನು ತಪ್ಪಿಲ್ಲ, ನಿಜ ಕಳ್ಳರನ್ನು ಹಿಡೀರಿ..
ಇದು ಒಂದು ನಿನ್ನೆಯ ಒತ್ತುವರಿಯಲ್ಲ. ಒತ್ತುವರಿ ನಡೆದಿರುವುದು ನಿಜ ಆದರೆ ಇದಲ್ಲಿ ನಮ್ಮದೇನು ತಪ್ಪಿಲ್ಲ. ಕೆರೆ ಜಾಗದಲ್ಲಿ ಸೈಟ್ ಮಾಡಿ ಮಾರಾಟ ಮಾಡಿದವರನ್ನು ಮೊದಲು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಜಾಗ ಪಡೆದು ಮನೆ ಕಟ್ಟಿದವರು, ಇಲ್ಲಿ ಬಾಡಿಗೆ ಮನೆಯಲ್ಲಿ ಇದ್ದವರು ಈಗ ಬೀದಿಗೆ ಬಂದಿದ್ದು ಸರ್ಕಾರ ಪುನರ್ವಸತಿ ಕಲ್ಪಿಸಬೇಕು ಎಂದು ಸ್ಥಳೀಯ ನಾಗರಾಜು ಆಗ್ರಹಿಸುತ್ತಾರೆ.

ವಿಶಾಲವಾದ ಕೆರೆ ಹೇಗಿದೆ?
ವಿಶಾಲವಾದ ಕೆರೆ ಅಭಿವೃದ್ಧಿ ಸಂಬಂಧ ಅನೇಕ ಹೋರಾಟಗಳು ನಡೆಯುತ್ತ ಬಂದಿವೆ. ಆದರೆ ನಿಜಕ್ಕೂ ಕೆರೆ ಹೇಗಿದೆ ಎಂಬುದನ್ನು ಅಲ್ಲಿಗೆ ಹೋಗಿಯೇ ನೋಡಬೇಕು. ಒಂದು ಭಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಕೊಂಡಿವೆ, ಕೆರೆಯಲ್ಲಿ ಹೂಳು ತುಂಬಿದ್ದು ಸಾರ್ವಜನಿಕ ಶೌಚಾಲಯವಾಗಿಯೂ ಬಳಕೆಯಾಗುತ್ತಿದೆ. ಇದನ್ನು ಸರಿಯಾಗಿ ದುರಸ್ತಿ ಮಾಡಿ ನಂತರ ಒತ್ತುವರಿ ತೆರವು ಮಾಡಬೇಕಿತ್ತು ಎಂಬ ಕೂಗು ಜನರಿಂದ ಕೇಳಿಬಂತು.

ಜಿಲ್ಲಾಧಿಕಾರಿ ಶಂಕರ್ ದಿಟ್ಟ ಹೆಜ್ಜೆ
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಡಿಕೆ ರವಿ ಸಾವು ಅನೇಕ ಆತಂಕಗಳನ್ನು ತಂದಿಟ್ಟಿದ್ದರೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್ ಕೈಗೊಂಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರ ಕೆರೆ ಉಳಿವು ಸಂಕಲ್ಪಕ್ಕೆ ಕೈಜೋಡಿಸುವುದು ನಾಗರೀಕರ ಜವಾಬ್ದಾರಿ.

ಎಲ್ಲಿಗೆ ಪಯಣ? ಯಾವುದು ದಾರಿ?
ದೊಡ್ಡ ದೊಡ್ಡವರೆಲ್ಲ ಮನೆ ಹೋದರೇ ಹೋಯ್ತು ಇನ್ನೊಂದಿದೆ ಎಂದು ಕುಳಿತುಕೊಂಡಿದ್ದರೆ, ಕೆರೆಯ ತಟದಲ್ಲಿ ಸಿಮೆಂಟ್ ಇಟ್ಟಿಗೆ ಬಳಸಿ ಗಿಡಿಸಲು ಕಟ್ಟಿಕೊಂಡಿದ್ದ ಕುಟುಂಬಕ್ಕೆ ನಿಜವಾದ ಸಮಸ್ಯೆ ಆವರಿಸಿದೆ. ಏಕಾಂಗಿಯಾಗಿ ಸಿಮೆಂಟ್ ಇಟ್ಟಿಗೆ ತೆರವು ಮಾಡುತ್ತ ನಾಳಿನ ವಾಸ ಎಲ್ಲಿ ಎಂಬಂತೆ ತನ್ನಷ್ಟಕ್ಕೆ ತಾನೇ ಪ್ರಶ್ನೆ ಮಾಡಿಕೊಳ್ಳುತ್ತ ಕೆಲಸದಲ್ಲಿ ಮಗ್ನನಾಗಿದ್ದ ಭಾರತದ ನಾಗರೀಕ.

ಎಲ್ಲರಿಗೂ ಎಚ್ಚರಿಕೆ ನೀಡಿದ ಘಟನೆ
ಹೌದು.. ಇನ್ನು ಮುಂದೆ ಬೆಂಗಳೂರು ಸುತ್ತ ಮುತ್ತ ಸೈಟ್ ತೆಗೆದುಕೊಳ್ಳುವವರಿಗೆ ಇದೊಂದು ಎಚ್ಚರಿಕೆ ಘಂಟೆ. ಸರಿಯಾಗಿ ಪರಿಶೀಲನೆ ನಡೆಸದೇ ಸರ್ವೇ ನಂಬರ್ ಖಾತ್ರಿಯಿಲ್ಲದೇ ದಿಢೀರ್ ಎಂದು ನಿವೇಶನ ಖರೀದಿಸಿ ಬಿಟ್ಟರೆ ನಂತರ ಬೀದಿಗೆ ಬರಬೇಕಾದೀತು!

ಇಟ್ಟಮಡು ಕೆರೆ ತೆರವು
ಭೂಗಳ್ಳರ ವಿರುದ್ಧ ಸಮರ ಸಾರಿರುವ ಜಿಲ್ಲಾಧಿಕಾರಿ ಶಂಕರ್ ಬುಧವಾರ ಇಟ್ಟಮಡು ಕೆರೆ ಒತ್ತುವರಿಯನ್ನು ತೆರವು ಮಾಡಿದ್ದರು. ಸುಮಾರು ಐದು ಎಕರೆ ಜಾಗ ತೆರವು ಮಾಡಲಾಗಿತ್ತು. ಕೆರೆ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗಿದ್ದುದ್ದನ್ನು ಜಿಲ್ಲಾಧಿಕಾರಿ ತೆರವು ಮಾಡಿದ್ದರು.
-
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ











Click it and Unblock the Notifications