ಬೆಂಗಳೂರು-ಕೊಲ್ಕತ್ತಾ ಇಂಡಿಗೋ 5 ಗಂಟೆ ತಡ: ತಾಯಿ ನಿಧನ ಸುದ್ದಿ ಕೇಳಿ ಹೊರಟಿದ್ದವ ಕಣ್ಣೀರು
ಬೆಂಗಳೂರು, ಆಗಸ್ಟ್ 30: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ (KIA) ಕೊಲ್ಕತ್ತಾಗೆ ತೆರಳಬೇಕಿದ್ದ ಇಂಡಿಗೋ ವಿಮಾನವು ಸುಮಾರು ಐದೂವರೆ ಗಂಟೆಗಳ ಕಾಲ ತಡವಾಗಿ ನಿಲ್ದಾಣಕ್ಕೆ ಬಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾದು ಕಾದು ಸುತ್ತಾಗಿದ್ದ ಪ್ರಯಾಣಿಕರು ಏರ್ಲೈನ್ಸ್ ವಿಳಂಬ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ತಾಯಿ ನಿಧನ ಸುದ್ದಿ ತಿಳಿದು ತನ್ನೂರಿಗೆ ತೆರಳಬೇಕಿದ್ದ ವ್ಯಕ್ತಿ ನಿಲ್ದಾಣದಲ್ಲಿ ಪರಿತಪಿಸಿದ ಘಟನೆ ಮಂಗಳವಾರ ನಡೆದಿದೆ.
ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಂಜಾ ರಹೀಮ್ ಅವರು ಸಂಜೆ 4.05ಕ್ಕೆ ಇಂಡಿಗೋ ವಿಮಾನ (6E-6572) ಏರುವ ಸಂಬಂಧ ಮಧ್ಯಾಹ್ನ 12 ಗಂಟೆಗೆಲ್ಲ ಬೆಂಗಳೂರು ಏರ್ಪೋರ್ಟ್ ತಲುಪಿದ್ದರು.

ಆದರೆ ಇಂಡಿಗೋ ವಿಮಾನವು ನಿಗದಿತ ಸಮಯಕ್ಕೆ ಬಾರದೇ ಸಮಾರು ಐದುವರೆ ಗಂಟೆಗಳ ಕಾಲ ತಡವಾಗಿ ಅಂದರೆ ರಾತ್ರಿ 9.33 ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿದೆ. ಅವರೊಂದಿಗೆ ಅನೇಕ ಹಿರಿಯ ನಾಗರಿಕರು ಸೇರಿದಂತೆ ಒಟ್ಟಾರೆ 100 ಕ್ಕೂ ಹೆಚ್ಚು ಜನರು ಎಂಟು ಗಂಟೆಗಳ ಕಾಲ ಕಾಯ್ದಿದ್ದಾರೆ. ನೇಕರು ಮಧ್ಯಾಹ್ನ 1 ಗಂಟೆಗೆ ವಿಮಾನ ನಿಲ್ದಾಣ ತಲುಪಿದ್ದಾರೆ. ಒಟ್ಟು ನಾನು ಒಂಬತ್ತು ಗಂಟೆ ಕಾಲ ನಿಲ್ದಾಣದಲ್ಲಿಯೇ ವಿಮಾನಕ್ಕೆ ಕಾದ ಘಟನೆ ನಡೆಯಿತು ಎಂದು ವಿದ್ಯಾರ್ಥಿ ಮಾಹಿತಿ ನೀಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇಂಡಿಗೋ ಸಿಬ್ಬಂದಿಯಿಂದ ಪ್ರಯಾಣಿಕರ ನಿರ್ಲಕ್ಷ್ಯ?
ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಗಂಟೆ ಗಟ್ಟಲೇ ಕಾದು ಕುಳಿತ ಪ್ರಯಾಣಿಕ ಕುರಿತು ಕಾಳಜಿ ತೋರಲಿಲ್ಲ ಎಂದು ರಹೀಮ್ ಆರೋಪಿಸಿದರು. ಊಟ- ತಿಂಡಿ ಕುರಿತು ಏರ್ಲೈನ್ಸ್ ಪ್ರಯಾಣಿಕರನ್ನು ವಿಚಾರಿಸಲಿಲ್ಲ. ಇಂಡಿಗೋ ವಿಮಾನವು ಬಹುದೂರ ಗೇಟ್ ನಲ್ಲಿ ಬಂತು ನಿಂತ ಕಾರಣ ನಾವು ಮೂರು ಬೋರ್ಡಿಂಗ್ ಗೇಟ್ಗಳನ್ನು ದಾಟಬೇಕಾಯಿತು. ಕಾಳಜಿ ತೋರದ ಇಂಡಿಗೋ ನಡೆಯಿಂದ ಪ್ರಯಾಣಿಕರು ಸಾಕಷ್ಟು ನಿರಾಶೆಗೊಂಡರು. ವ್ಯಕ್ತಿಯೊಬ್ಬರ ತಾಯಿಯ ನಿಧನ ಸುದ್ದಿ ತಿಳಿದು ನಿಗದಿತ ಸಮಯಕ್ಕೆ ಅವರು ಕೋಲ್ಕತ್ತಾ ತಲುಪಲಾಗದೇ ಹತಾಶರಾಗಿ ಕಣ್ಣೀರು ಸುರಿಸಿದ್ದು ಕಂಡು ಬಂತು.

ಸಂಜೆಯ ವಿಮಾನ ರಾತ್ರಿ 9.30ಕ್ಕೆ ಟೇಕ್ ಆಫ್
ಇಷ್ಟೆಲ್ಲ ನಿರಾಶೇ, ಕಾಯುವಿಕೆ, ಆಕ್ರೋಶದ ಬಳಿಕ ರಾತ್ರಿ 9.30ಕ್ಕೆ ಅಂತಿಮವಾಗಿ ಎಲ್ಲ ಪ್ರಯಾಣಿಕರು ಬೆಂಗಳೂರಿನಿಂದ ಕೋಲ್ಕತ್ತಾ ಇಂಡಿಗೋ ವಿಮಾನ ಏರಿದರು. ಇದೆಲ್ಲ ಘಟನೆ ಕುರಿತು ಪ್ರಯಾಣಿಕ ರಹೀಮ್ ಸಾಮಾಜಿಕ ಜಾಲತಾಣಗಳಲ್ಲಿ ಮೂರು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋಗಳಲ್ಲಿ ಒಬ್ಬೇ ಒಬ್ಬರು ಇಂಡಿಗೋ ಸಿಬ್ಬಂದಿ ಕಾಣಿಸಿಲ್ಲ. ಬೋರ್ಡಿಂಗ್ ಗೇಟ್ನಲ್ಲಿ ಸಿಐಎಸ್ಎಫ್ ಸಿಬ್ಬಂದಿಯ ಸುತ್ತಲೂ ಪ್ರಯಾಣಿಕರು ಜಮಾಯಿಸಿರುವುದು ವಿಡಿಯೋದಲ್ಲಿ ಗೊತ್ತಾಗುತ್ತದೆ.
ಈ ಮಧ್ಯೆ ಇಂಡಿಗೋ ಏರ್ಲೈನ್ಸ್ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುವ ವಿಮಾನ (6E 455) ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿತು. ಇಂಡಿಗೋ ವಿಮಾನ (6E 455) ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಟೇಕ್ ಆದ ಕೂಡಲೇ ಸಮಸ್ಯೆ ಕಂಡು ಬಂದ ಹಿನ್ನೆಲೆ ಮತ್ತೆ ಕೊಲ್ಕತ್ತಾಗೆ ತೆರಳಿತು. ಪೈಲಟ್ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಅನುಸರಿಸಿ ಕೋಲ್ಕತ್ತಾಗೆ ವಿಮಾನ ಹಿಂತಿರುಗಿದರು. ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ ಎಂದು ವರದಿ ಆಗಿದೆ.












Click it and Unblock the Notifications