ಸ್ವಂತ ಮನೆಗೆ ಕನ್ನ ಹಾಕಲು ಗೆಳೆಯನಿಗೆ ಕೀ ಕೊಟ್ಟಳು!
ಬೆಂಗಳೂರು, ನವೆಂಬರ್. 04: ಗಂಡ-ಹೆಂಡತಿ ಇಬ್ಬರು ಮನೆಗೆ ಬೀಗ ಹಾಕಿ ತೀರ್ಥಯಾತ್ರೆಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮನೆಯಲ್ಲಿದ್ದ ನಗದು ಮತ್ತು ಆಭರಣಗಳನ್ನು ಕಳ್ಳರು ದೋಚಿದ್ದರು. ಕಳ್ಳತನದ ಬಗ್ಗೆ ಮನೆ ಮಾಲೀಕರು ದೂರು ದಾಖಲು ಮಾಡಿದ್ದರು. ಇದು ಸಾಮಾನ್ಯವಾಗಿ ಎಲ್ಲ ಮನೆಗಳ್ಳತನ ಪ್ರಕರಣದ ವೇಳೆ ಕೇಳಿಬರುವ ಕತೆ.
ಆದರೆ ಇಲ್ಲಿನ ಕತೆಗೆ ಕೊಂಚ ಟ್ವಿಸ್ಟ್ ಇದೆ. ಮೇಲಿನ ಸಾಲುಗಳೊಂದಿಗೆ ಇದನ್ನು ಸೇರಿಸಿಕೊಳ್ಳಬೇಕು. ಮನೆ ಮಾಲೀಕನ ಹೆಂಡತಿಯೇ ಮನೆ ಕೀಯನ್ನು ತನ್ನ ಗೆಳೆಯನಿಗೆ ನೀಡಿಹೋಗಿದ್ದಳು! ಗೆಳಯನಿಗೆ ಮನೆಯ ಕೀ ಕೊಟ್ಟು ಗಂಡನೊಂದಿಗೆ ಯಾತ್ರೆ ಹೋಗಿದ್ದ ಮಹಿಳೆ ಮತ್ತು ಕಳ್ಳತನ ಮಾಡಿದ್ದ ಆಕೆಯ ಗೆಳೆಯ ಇಬ್ಬರು ಇದೀಗ ಪೊಲೀಸರ ಬಂಧನದಲ್ಲಿದ್ದಾರೆ.

ಜೆಪಿ ನಗರದ ಮನೆ ಮಾಲೀಕನ ಹೆಂಡತಿ ಶ್ರುತಿ (31) ಮತ್ತು ಟಿ ದಾಸರಹಳ್ಳಿ ನಿವಾಸಿ ಕುಮಾರ್ (30) ಬಂಧಿತರು. ಬಂಧಿತರಿಂದ 1.2 ಕೋಟಿ ನಗದು ಮತ್ತು ಕಾರ್ ವಶಕ್ಕೆ ಪಡೆಯಲಾಗಿದೆ. ನವೆಂಬರ್ 1 ರಂದು ಜೆ.ಪಿ ನಗರದ ರಾಮಚಂದ್ರ ಎಂಬುವವರ ಮನೆಯಲ್ಲಿ 1.30 ಕೋಟಿ ಹಣ ಕಳ್ಳತನವಾಗಿತ್ತು. ರಾಮಚಂದ್ರ ಮತ್ತು ಅವರ ಹೆಂಡತಿ ಶ್ರುತಿ ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ಕಳ್ಳತನವಾಗಿತ್ತು. ಈ ಬಗ್ಗೆ ರಾಮಚಂದ್ರ ಜೆಪಿ ನಗರ ಪೊಲೀಸರಿಗೆ ದೂರು ನೀಡಿದ್ದರು.[ಮಹಿಳೆ ಮನೆಗೆ 'ಡ್ಯೂಟಿ' ಮಾಡಲು ಹೋಗಿ ಪ್ಯಾದೆ ಸಿಕ್ಕಿಬಿದ್ದ!]
ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಶ್ರುತಿ ಅವರನ್ನು ಬಗೆ ಬಗೆಯಾಗಿ ಪ್ರಶ್ನೆ ಮಾಡಿದಾಗ ವಿಷಯ ಹೊರಕ್ಕೆ ಬಂದಿದೆ. ಲ್ಯಾನ್ಸರ್ ಕಾರಿನಲ್ಲಿ ಬಂದು ನಕಲಿ ಕೀ, ಕಟಿಂಗ್ ಪ್ಲೇಯರ್, ಸ್ಕ್ರೂಡ್ರೈವರ್ ಹಾಗೂ ಆಕ್ಸಲ್ ಬ್ಲೇಡ್ ಪ್ರೇಮ್ ಗಳನ್ನು ಬಳಸಿ ಮನೆಯೊಳಗೆ ಕುಮಾರ್ ಪ್ರವೇಶ ಮಾಡಿದ್ದಾನೆ. ನಂತರ ಹಣವನ್ನು ಮೊದಲು ಚೀಲಕ್ಕೆ ತುಂಬಿಸಿಕೊಂಡಿದ್ದಾನೆ. ನಂತರ ತೆರಳುವಾಗ ಯಾರಿಗೂ ಅನುಮಾನ ಬಾರದಿರಲಿ ಎಂದು ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಬಾಗಿಲ ಲಾಕ್ ಕಿತ್ತು ಹೋಗಿದ್ದಾನೆ.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ-ಪೊಲೀಸ್ ಕಮಿಷನರ್ ಬಿ.ಎಸ್. ಲೋಕೇಶ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಕಮಿಷನರ್, ಜಿ.ಎಂ. ಕಾಂತರಾಜ್, ಜೆ.ಪಿ.ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ. ಎಸ್.ಜೆ. ಮಹಾಜನ್, ಜೆ.ಎಂ. ರೇಣುಕಾ, ಎ.ಆರ್. ರಘುನಾಯ್ಕ್, ಸುರಾಚಾರ್, ಲೋಕೇಶ್, ಕೆಂಪೇಗೌಡ, ವಿಜಯಕುಮಾರ್, ನಾಗೇಶ, ಎನ್.ಎಸ್. ರಘು, ಚಂದ್ರಪ್ಪ ಭಾಗವಹಿಸಿದ್ದರು.












Click it and Unblock the Notifications