Bengaluru Heat Wave: ಮುಂದಿನ ಒಂದು ವಾರ 'ರಣಬಿಸಿಲು': ಏ.2 ತನಕ 'ಶಾಖ'ದ ಅಲೆ ಮುನ್ಸೂಚನೆ
ಬೆಂಗಳೂರು, ಮಾರ್ಚ್ 28: ವರ್ಷ ಪೂರ್ತಿ ಒಂದೆ ತೆರನಾದ ತನ್ನ ವಾತಾವರಣದಿಂದಲೇ ಹೆಸರಾಗಿದ್ದ ಉದ್ಯಾನ ನಗರಿ ಬೆಂಗಳೂರು ನಗರವು ಈ ಬಾರಿ ಬಹುದಿನಗಳ ನಿರಂತರ ಶಾಖದ ಅಲೆಗೆ ಸಾಕ್ಷಿಯಾಗುತ್ತಿದೆ. ತಾಪಮಾನದ ಏರಿಳಿತ ಮುಂದುವರೆದಿದೆ. ಮುಂದಿನ ಒಂದು ವಾರ (ಏ.2 ರತನಕ) ರಾಜಧಾನಿಯಲ್ಲಿ ತಾಪಮಾನ ಮತ್ತಷ್ಟು ಏರಿಕೆ ಆಗಲಿದೆ. ಬಿಸಿ ಗಾಳಿಯ (Bengaluru Heat Wave) ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ತಾಪಮಾನ ಏರುಗತಿಯಲ್ಲಿ ಸಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಳೆ ಬಂದಿದ್ದು, ಬೆಂಗಳೂರಿಗೆ ಮಳೆಯ ಸುಳಿವೆ ಇಲ್ಲದಾಗಿದೆ. ಬೇಸಿಗೆಯ ಮಧ್ಯ ಭಾಗದಲ್ಲಿರುವ ಬೆಂಗಳೂರಿಗರು ಇನ್ನೂ ಕನಿಷ್ಠ ಎರಡು ತಿಂಗಳ ಈ ಉರಿ ಬಿಸಿಲನ್ನು ಸಹಿಸಿಕೊಳ್ಳಬೇಕಿದೆ.

ನಗರದಲ್ಲಿ ಈ ಹಿಂದೆ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಅದಾದ ಬಳಿಕ ನಿತ್ಯ 34 ಡಿಗ್ರಿ ಸೆಲ್ಸಿಯಸ್ ಆಸುಪಾಸು ತಾಪಮಾನ ದಾಖಲಾಗುತ್ತಿತ್ತು.
ಏಪ್ರಿಲ್ 2ರವರೆಗೆ ಹೇಗಿರಲಿದೆ ಉಷ್ಣಾಂಶ?
ಇಂದು ಮಾರ್ಚ್ 28ರ ಗುರುವಾರ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ನಾಳೆ ಶುಕ್ರವಾರವು ಮುಂದುವರಿಯಲಿದೆ ಶನಿವಾರ ಮಾರ್ಚ್ 30ರಿಂದ ಏಪ್ರಿಲ್ 02ರವರೆಗೂ ಅತ್ಯಧಿಕ ತಾಪಮಾನ ಕಂಡು ಬರಲಿದೆ. ಈ ವೇಳೆ ನಿತ್ಯವು ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂದಿನ ಒಂದು ವಾರ ಮಹಿಳೆಯರು, ಮಕ್ಕಳು, ವಯೋವೃದ್ಧರು ಮನೆಯಿಂದ ಹೊರ ಬರುವಾಗ ಯೋಚಿಸಬೇಕಾದ ಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣಗಲಿದೆ. ಈಗಾಗಲೇ ಎಳನೀರು, ತಂಪು ಪಾನೀಯ ಐಸ್ಕ್ರೀಂಗಳ ಬೆಲೆ ಹೆಚ್ಚಳವಾಗಿದೆ. ಜನರು ಈ ಬಿಸಿಲಿನ ಶೆಕೆಗೆ ತಾಳಲಾರದೇ ಹಣ್ಣು, ಎಳನೀರು, ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಎಚ್ಚರಿಕೆ ವಹಿಸುವಂತೆ ತಿಳಿಸಿರುವ ವೈದ್ಯರು ಹೆಚ್ಚು ನೀರು ಕುಡಿಯುವಂತೆ, ತೆಳುವಾದ ಬಟ್ಟೆ ಧರಿಸಬೇಕು. ಆರೋಗ್ಯ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಇಡೀ ದಿನ ಬಿಸಿಲಿನ ಝಳ
ನಗರದ ಕನಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ಮುಂದುವರಿಯಲಿದೆ. ನಿತ್ಯ ಬೆಳಗ್ಗೆ 8 ಗಂಟೆ ನಂತರ ಬಿಸಿಲಿನ ಝಳ ಶುರುವಾಗುತ್ತದೆ. ಮಧ್ಯಾಹ್ನ ವಿಜೃಂಭಿಸುವ ಬಿಸಲು ಸಂಜೆ 5ಗಂಟೆವರೆಗೂ ಇದ್ದು, ನಂತರ ಇಳಿ ಮುಖವಾಗುತ್ತದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಮನೆಯಿಂದ ಕಚೇರಿ, ಇನ್ನಿತರ ಕೆಲಸ ಕಾರ್ಯಗಳಿಗೆ ಓಡಾಡುವ ಜನರು ಬಿಸಿಲಿಗೆ ಸುಸ್ತಾಗಿದ್ದು, ಮಳೆ ಎದುರು ನೋಡುತ್ತಿದ್ದಾರೆ.

ಮುಂಗಾರು ಮತ್ತು ಹಿಂಗಾರು ಮಳೆ ಕಡಿಮೆ ಆಗಿದ್ದರ ಪರಿಣಾಮ ಬೀಕರ ಬರಗಾಲ ರಾಜ್ಯಾದ್ಯಂತ ಆವರಿಸಿದೆ. ಅಂತರ್ಜಲ ಕಡಿಮೆ ಆಗಿದ್ದರಿಂದ ಬೆಂಗಳೂರಿನಂತಹ ನಗರಗಳಲ್ಲಿ ಕುಡಿಯಲು ನೀರಿನಲ್ಲಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಒಣಹವೆಗೆ ಉಂಟಾಗಿದೆ. ಬಿಸಿ ಗಾಳಿ ಬೀಸುತ್ತಿದ್ದು, ಇದರಿಂದ ಜನರು ತತ್ತರಿಸಿದ್ದಾರೆ. ನಿತ್ಯ ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಕೊರತೆ, ಅಂತರ್ಜಲ ಕುಸಿತ: ಎಚ್ಚೆತ್ತುಕೊಳ್ಳಬೇಕು
ಬೆಂಗಳೂರಿನಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದರ ಜೊತೆಗೆ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಹರಿದು ಹೋಗದಂತೆ ತಡೆಯಲು ಇಂಗುಗುಂಡಿ ನಿರ್ಮಾಣಕ್ಕೆ, ಮಳೆ ನೀರು ಕೊಯ್ಲು ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು, ಪರಿಸರವಾದಿಗಳು ಸಲಹೆ ನೀಡಿದ್ದಾರೆ.
ಈ ಜಿಲ್ಲೆಗಳಲ್ಲಿ ದಾಖಲೆ ಮಟ್ಟದ ತಾಪಮಾನ
ಮುಂದಿನ ನಾಲ್ಕೈದು ದಿನ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಲ್ಲಿನ ಬೆಳಗಾವಿ, ಧಾರವಾಡ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ವಿಜಯನಗರ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ನಿತ್ಯ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚು ತಾಪಮಾನ ಕಂಡು ಬರಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications