Bengaluru Rain: ಭಾನುವಾರ ಸಂಜೆ ತಂಪೆರೆದ ಮಳೆ, ಎಲ್ಲೆಲ್ಲಿ ಎಷ್ಟು ಮಳೆ ಆಯಿತು?
ಬೆಂಗಳೂರು, ಆಗಸ್ಟ್ 06: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಕಣ್ಮರೆಯಾಗಿದ್ದ ಮುಂಗಾರು ಮತ್ತೆ ಭಾನುವಾರ ಸುರಿಯಲು ಶುರು ಮಾಡಿದೆ. ಸಂಜೆ ದಿಢೀರ್ ಹಗುದಿಂದ ಸಾಧಾರಣವಾಗಿ ಮಳೆ ದಾಖಲಾಗಿದ್ದು, ಕೆಲವೆಡೆ ಬಿರುಸಿನ ಮಳೆ ಆಯಿತು. ಇಂದು ಸಂಜೆ 6 ನಂತರ ಆರಂಭವಾಗಿದ್ದು, ನಗರದ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಅಧಿಕ ಮಳೆ ದಾಖಲಾಯಿತು.
ನಗರದಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇದ್ದು, ಸಂಜೆಗೆ ಮಬ್ಬು ವಾತಾವರಣ ನಿರ್ಮಾಣವಾಗಿ ದಿಢೀರನೇ ಜೋರು ಮಳೆ ಆರಂಭವಾಯಿತು. ನಾಯಂಹಳ್ಳಿ, ದೀಪಾಂಜಲಿನಗರ, ಹಂಪಿನಗರ, ವಿಜಯನಗರ, ಮಲ್ಲೇಶ್ವರಂ, ಮಜೆಸ್ಟಿಕ್, ರಾಜಾಜಿನಗರ, ಹೆಬ್ಬಾಳ, ಮಹಾದೇವಪುರ ವಲಯ, ಕೋರಮಂಗಲ ಸೇರಿದಂತೆ ಬೆಂಗಳೂರಿನ ನಾನಾ ಕಡೆ ಮಳೆ ಆಯಿತು.

ಮುಂದಿನ ನಾಲ್ಕು ದಿನ ಉದ್ಯಾನ ನಗರಿಗೆ ಮಳೆ ಹೀಗೆ ಮುಂದುವರಿಯುವ ಸಾಧ್ಯತೆ ಇದೆ. ನಾಳೆಯಿಂದ ನಿತ್ಯ ಮಧ್ಯಾಹ್ನದ ನಂತರ ಸಂಜೆಗೆ ಮಳೆ ಬೀಳಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ (KSNDMC) ಮಾಹಿತಿ ನೀಡಿದೆ.
ಭಾನುವಾರ ರಾತ್ರಿ 8ಗಂಟೆ ವರೆಗಿನ ಮಾಹಿತಿ ಪ್ರಕಾರ, ರಾಜಮಹಲ್ ಗುಟ್ಟಹಳ್ಳಿಯಲ್ಲಿ ಅಧಿಕ ಮಳೆ 24 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇದರೊಂದಿಗೆ ನಾಗಪುರ 23ಮಿ.ಮೀ, ನಂದಿನಿ ಬಡಾವಣೆ 22.ಮೀ, ಬಸವನಗುಡಿ 17 ಮಿ.ಮೀ, ಪೀಣ್ಯ ಕೈಗಾರಿಕೆ ಪ್ರದೇಶ 15ಮಿ.ಮೀ, ಮಾರಪ್ಪನಪಾಳ್ಯ 13ಮಿ.ಮೀ, ದಯಾನಂದಸಾಗರ 12.5 ಮಿ.ಮೀ, ಕುಶಾಲನಗರ 10.5 ಮಿ.ಮೀ, ಹೆರೋಹಳ್ಳಿ 11ಮಿ.ಮೀ, ಕಮ್ಮನಹಳ್ಳಿ 10ಮಿ.ಮೀ, ಮತ್ತು ರಾಜಾಜಿನಗರ 10 ಮಿ.ಮೀ ಮಳೆ ಆಗಿದೆ.
ಈ ಪ್ರದೇಶಗಳನ್ನು ಹೊರತುಪಡಿಸಿದರೆ ದೇವನಹಳ್ಳಿ, ಯಲಹಂಕ, ವಿದ್ಯಾರಣ್ಯಪುರ, ಯಶವಂತಪುರ, ಬಸವೇಶ್ವರ ನಗರ, ಹೊರವರ್ತುಲ ರಸ್ತೆ, ಕೆಂಗೇರಿ, ಜ್ಞಾನಭಾರತಿ, ಚಾಮರಾಜಪೇಟೆ, ಜಯನಗರ ಸೇರಿದಂತೆ ವಿವಿಧೆಡೆ ಮಳೆಯ ಸಿಂಚನವಾಗಿದೆ.

ಆಗಸ್ಟ್ 10ರವರೆಗೆ ಮಳೆ ಮುಂದುವರಿಕೆ
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಆಗಸ್ಟ್ 10ರವರೆಗೆ ಬೆಂಗಳೂರಿನಲ್ಲಿ ವಾತಾವರಣದಲ್ಲಿ ಇದೇ ಸ್ಥಿತಿ ಮುಂದುವರಿಯಲಿದೆ. ಇದಾದ ಬಳಿಕ ತುಸು ಹೆಚ್ಚಿನ ಬಿಸಿಲು ಕಂಡು ಬರಬಹುದು. ಒಂದು ವೇಳೆ ವಾತಾವರಣದಲ್ಲಿ ಗಂಭೀರ ರೂಪದ ಬದಲಾವಣೆಗಳು ಕಂಡು ಬಂದರೆ ಮುಂಗಾರು ನಗರಾದ್ಯಂತ ತೀವ್ರ ಗೊಳ್ಳುವ ಸಾಧ್ಯತೆಗಳು ಇದೆ.
ಮುಂದಿನ ನಾಲ್ಕು ದಿನ ಬೆಂಗಳೂರಿನ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.
ಕರ್ನಾಟಕದ ಕರಾವಳಿಯ ದಿನ ಮೂರು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಕೆಲವೆಡೆ ತುಂತುರು ಮಳೆ, ಇನ್ನೂ ಹಲವೆಡೆ ಮುಂದಿನ ನಾಲ್ಕು ದಿನ ಜೋರು ಮಳೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications