ಮೂರು ಬಾರಿ ನಾಸಾದ ಪ್ರತಿಷ್ಠಿತ ಪ್ರಶಸ್ತಿ ಪಡೆದ ಬೆಂಗಳೂರು ಬಾಲಕಿ
ಬೆಂಗಳೂರು, ಸೆಪ್ಟೆಂಬರ್ 27: ನಾಸಾದ ಕಾರ್ಯಕ್ರಮಗಳನ್ನು ಅರ್ಥ ಮಾಡಿಕೊಳ್ಳುವುದೇ ಬಹುತೇಕ ಬುದ್ಧಿವಂತರಿಗೂ ಕಷ್ಟ ಆದರೆ, ಬೆಂಗಳೂರಿನ ಬಾಲಕಿಯೊಬ್ಬಳು ಮೂರು ಬಾರಿ ನಾಸಾದ ಪ್ರಶಸ್ತಿ ಬಾಚಿಕೊಂಡಿದ್ದಾಳೆ. ನಾಲ್ಕನೇ ಬಾರಿ ಅದೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾಳೆ.
ನಗರದ ನಾರಾಯಣಾ ಒಲಿಂಪಿಯಾಡ್ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಬೆಂಗಳೂರಿನ ನಿವಾಸಿ ನಿಧಿ ಮಯೂರಿಕಾ ಸತತವಾಗಿ ಮೂರು ವರ್ಷ ನಾಸಾವು ವಿಶ್ವದೆಲ್ಲೆಡೆಯ ವಿದ್ಯಾರ್ಥಿಗಳಿಗಾಗಿ ನಡೆಸುವ 'ಏಮ್ಸ್ ಸ್ಪೇಸ್ ಸೆಟಲ್ಮೆಂಟ್ ಕಾಂಟೆಸ್ಟ್' (ASSC) ಗೆದ್ದುಕೊಂಡಿದ್ದಾಳೆ.
ಅಂತರಿಕ್ಷದಲ್ಲಿ ಮಾನವ ವಸಹಾತು ನಿರ್ಮಾಣದ ಬಗ್ಗೆ ಸ್ಪರ್ಧಿಗಳು ಪ್ರಾಜೆಕ್ಟ್ ನೀಡಬೇಕಾಗುತ್ತದೆ. ಉತ್ತಮ ಐಡಿಯಾಕ್ಕೆ ಈ ಪ್ರಶಸ್ತಿ ಒಲಿಯುತ್ತದೆ. ಇದಕ್ಕೆ ಬಹಳವೇ ತಯಾರಿ, ಅಧ್ಯಯನ, ಬುದ್ಧಿಶೀಲನೆ, ಕಲ್ಪನಾಶಕ್ತಿಯ ಅವಶ್ಯವಿರುತ್ತದೆ.

ನಿಧಿ ಮೊದಲ ಬಾರಿಗೆ ಈ ಸ್ಪರ್ಧೆಗೆ ನೊಂದಾವಣಿ ಮಾಡಿಕೊಂಡಿದ್ದು ಏಳನೇ ತರಗತಿಯಲ್ಲಿದ್ದಾಗ. ವಿಜ್ಞಾನದ ಬಗೆಗೆ ಆಕೆಗಿದ್ದ ಆಸಕ್ತಿಯನ್ನು ಗುರುತಿಸಿ ಆಕೆಯ ಶಾಲೆಯ ಪ್ರಾಂಶುಪಾಲರು ನಿಧಿಗೆ ನಾಸಾದ ಎಸ್ಎಸ್ಸಿ ಸ್ಪರ್ಧೆಯ ಬಗ್ಗೆ ಹೇಳಿದರು. ನಿಧಿಯ ಭೌತಶಾಸ್ತ್ರ ಶಿಕ್ಷಕರ ಸಹಾಯದಿಂದ ಆಕೆ ತನ್ನ ಮೊದಲ ಸ್ಪೇಸ್ ಪ್ರಾಜೆಕ್ಟ್ ತಯಾರಿಸಲು ಆರಂಭಿಸಿದರು.
ಮೊದಲ ವರ್ಷ ನಿಧಿ ಮಂಡಿಸಿದ ಪ್ರಾಜೆಕ್ಟ್ನ ಹೆಸರು 'ಸಯಿಕತಂ' ಇದು ಮೂರು ಪದರಗಳ ಮಾನವ ವಸಹಾತು. ಮೊದಲ ಪ್ರಾಜೆಕ್ಟ್ನಲ್ಲಿ ಚಂದ್ರನ ಮೇಲೆ ಭಾರಿ ಸಂಖ್ಯೆಯಲ್ಲಿ ಜನ ವಾಸಿಸಲು ಯೋಗ್ಯವಾದ ಮಾನವ ವಸಹಾತು ರಚಿಸುವ ಬಗ್ಗೆ ತಮ್ಮ ಯೋಜನೆಗಳನ್ನು ನಿಧಿ ನಾಸಾಕ್ಕೆ ಸಲ್ಲಿಸಿದ್ದರು. ಅದಕ್ಕೆ ಪ್ರಶಸ್ತಿ ಲಭಿಸಿತು. ಆಗಿನ್ನೂ ನಿಧಿ 7 ನೇ ತರಗತಿಯಲ್ಲಿ ಕಲಿಯುತ್ತಿದ್ದರು.
2016ರಲ್ಲಿ ನಿಧಿ ಮತ್ತೆ ಇದೇ ಸ್ಪರ್ಧೆಗೆ ನೊಂದಣಿ ಮಾಡಿಕೊಂಡರು. ಆಗ 'ಸೋಹಂ' ಹೆಸರಿನ ಪ್ರಾಜೆಕ್ಟ್ ಅನ್ನು ನಿಧಿ ಮಂಡಿಸಿದ್ದರು. ಸೋಹಂ ಎಂದರೆ ಧ್ಯಾನ ಎಂದರ್ಥ. ಭೂಮಿಯ ಕಕ್ಷೆಯಿಂದ 350 ಕಿ.ಮೀ ಹೊರಗೆ ನಿರ್ಮಿಸಬಹುದಾದ ವಸಹಾತುವಿನ ಬಗ್ಗೆ ಅವರು ಪ್ರಬಂಧ ಮಂಡಿಸಿದ್ದರು. 'ಸೋಹಂ', ಭೂಮಿಯ ಕಕ್ಷೆಯ ಹೊರಗೆ ಸ್ಯಾಟಲೈಟ್ಗಳ ನಿರ್ಮಾಣ ಉಡಾವಣೆಗೆ ಸಹಕಾರಿ ಆಗುತ್ತದೆ ಎಂಬುದು ನಿಧಿಯ ಯೋಜನೆ.

ಈ ವರ್ಷ ನಿಧಿಗೆ ನಾಸಾದ ಪ್ರಶಸ್ತಿ ತಂದುಕೊಟ್ಟಿರುವುದು 'ಸ್ವಸ್ಥಿಕಂ' ಎಂಬ ಪ್ರಬಂಧ. ಇದು ಸಹ ಅಂತರಿಕ್ಷದಲ್ಲಿ ಮಾನವ ಬದುಕಲು ಜೊತೆಗೆ ಇತರ ಜೀವಿಗಳು ಬದುಕಲು ನಿರ್ಮಿಸುವ ವ್ಯವಸ್ಥೆಯ ಬಗ್ಗೆಯೇ ಇದೆ.
ನಿಧಿ ಶಾಲೆಯಿಂದ ಬಂದ ಕೂಡಲೇ ಎರಡು ಗಂಟೆಗಳ ಕಾಲ ಅಂತರಿಕ್ಷ ವಿಜ್ಞಾನದ ಬಗ್ಗೆಯೇ ಅಧ್ಯಯನ ಮಾಡುತ್ತಾಳಂತೆ. ಆಕೆಗೆ ಮುಂದೊಂದು ದಿನ ಅಂತರಿಕ್ಷ ವಿಜ್ಞಾನಿ ಆಗಬೇಕೆಂಬ ಬಹು ಆಸೆ ಹೊತ್ತಿರುವ ನಿಧಿ ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸುತಿದ್ದಾಳೆ. ಅದಕ್ಕೆಂದೇ ಆಸ್ಟ್ರೋಬಯಾಲಜಿ ಕಲಿಸುವ ಬಾಸ್ಟನ್ ವಿವಿಯಿಂದ ಆನ್ಲೈನ್ ತರಗತಿಗಳನ್ನು ಪಡೆಯುತ್ತಿದ್ದಾಳೆ.
'ನನಗೆ ನನ್ನ ಯೋಚನೆಗಳನ್ನು ಜಗತ್ತಿಗೆ ಹೇಳಿಕೊಳ್ಳಲು ನಾಸಾ ಶಕ್ತಿಶಾಲಿ ವೇದಿಕೆ ಎನಿಸಿತು ಅದಕ್ಕಾಗಿ ನಾನು ಪ್ರತಿವರ್ಷ ಇದರಲ್ಲಿ ಪಾಲ್ಗೊಳ್ಳುತ್ತೇನೆ. ಮತ್ತೊಂದು ಮುಖ್ಯ ವಿಷಯವೆಂದರೆ ನನಗೆ ಭಾರತನ್ನು ಪ್ರತಿನಿಧಿಸುವುದು ಬಹು ಇಷ್ಟ' ಎನ್ನುತ್ತಾರೆ ನಿಧಿ.












Click it and Unblock the Notifications