ವರಮಹಾಲಕ್ಷ್ಮಿ ಹಬ್ಬದ ಭರಾಟೆ: ಹೂವು ಹಣ್ಣು ದರ ಎಷ್ಟಿದೆ?
ಬೆಂಗಳೂರು, ಆಗಸ್ಟ್, 27: ಬಿಬಿಎಂಪಿ ಚುನಾವಣೆ ಗಲಾಟೆ ಮುಗಿದಿದ್ದು ನಾಗರಿಕರು ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜನರು ಮಾರುಕಟ್ಟೆ ಕಡೆ ಮುಖ ಮಾಡಿದ್ದು ಹೂವು-ಹಣ್ಣು ಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಅನಿರೀಕ್ಷತವಾಗಿ ಆಗಮಿಸಿದ ವರುಣ ಜನರ ಹಬ್ಬದ ಖರೀದಿ ಭರಾಟೆಗೆ ಬ್ರೇಕ್ ಹಾಕಿದ್ದಾನೆ.
ಬೆಲೆ ಏರಿಕೆಗೂ ಹಬ್ಬಗಳಿಗೂ ಅವಿನಾಭಾವ ಸಂಬಂಧ. ಹಿಂದಿನ ವರ್ಷಗಳಿಗೆ ಹೊಲೀಸಿದರೆ ಈ ಬಾರಿ ಹಬ್ಬ ಒಂದು ತಿಂಗಳು ಮುಂದಕ್ಕೆ ಬಂದಿದೆ. ಲೆಕ್ಕಾಚಾರದಂತೆ ಹೂವು ಮತ್ತು ಹಣ್ಣಿನ ಸೀಸನ್ ಆರಂಭವಾಗಿದೆ ಆದರೆ ಬೆಲೆ ಏರಿಕೆಗೆ ಕಡಿವಾಣ ಬಿದ್ದಿಲ್ಲ.
ಎರಡು ದಿನದಿಂದಲೇ ಹಬ್ಬದ ಸಿದ್ಧತೆ ಶುರುವಾಗಿದ್ದು, ಗುರುವಾರ ಜನರು ಮಾರ್ಕೆಟ್ ಗಳತ್ತ ಮುಖ ಮಾಡಿದ್ದಾರೆ. ಹೂವು ಹಣ್ಣುಗಳ ದರ ಕೇಳಿ ಒಮ್ಮೆ ದಂಗಾದರೂ ಹಬ್ಬಕ್ಕೆ ಅನಿವಾರ್ಯ ಎಂದು ಕೊಂಡುಕೊಳ್ಳುತ್ತಿದ್ದಾರೆ. ಕೆಆರ್ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ಜಯನಗರ 4ನೇ ಬ್ಲಾಕ್, ಎನ್ ಆರ್ ಕಾಲೋನಿ, ಬಸವನಗುಡಿ ಸೇರಿದಂತೆ ಎಲ್ಲ ಕಡೆ ಜನ ಧಾವಿಸುತ್ತಿದ್ದಾರೆ.[ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ]
ಹೂವಿನ ದರ ಪಟ್ಟಿನೋಡಿ
* ಕನಕಾಂಬರ-ಕೆಜಿಗೆ 1000 ರು.
* ಮಲ್ಲಿಗೆ-800 ರು.
* ಕಣಿಗಲೆ-200 ರು.
* ಜಾಜಿ ಮಲ್ಲಿಗೆ-400ರು.
* ಸೂಜಿ ಮಲ್ಲಿಗೆ-500
* ಸೇವಂತಿ-200 ರಿಂದ 300
* ಸುಗಂಧರಾಜ-300
* ಚೆಂಡು ಹೂವು-100
ಹಣ್ಣುಗಳ ದರಪಟ್ಟಿ
* ಸೇಬು-150 ರು
* ದ್ರಾಕ್ಷಿ-80
* ಏಲಕ್ಕಿ ಬಾಳೆ-70
*ಪಚ್ಚ ಬಾಳೆ-30
*ಸಪೋಟ-50
*ಮೂಸಂಬಿ-60
*ಸೀಬೆಹಣ್ಣು-50
*ಬಾಳೆ ದಿಂಡು-50 ರಿಂದ 60ರು (1ಕ್ಕೆ)
ಇವಿಷ್ಟಕ್ಕೆ ಮುಗಿಯದು ಸಂಜೆ ದರ ಬದಲಾವಣೆ ಆಗಬಹುದು? ಯಾಕೆ ಅಂತೀರಾ, ಮುಂದಿದೆ ಕಾರಣಗಳ ಪಟ್ಟಿ....

ಇನ್ನು ಏರಲಿದೆ
ಮುಂಜಾನೆ ಇದ್ದ ದರ ಸಂಜೆಗೆ ಇರುವುದಿಲ್ಲ. ಮಳೆ ಬಿದ್ದಿರುವ ಕಾರಣ ನಾಗರಿಕರು ಸಂಜೆ ಒಮ್ಮೆಲೆ ಮಾರುಕಟ್ಟೆಗೆ ಧಾವಿಸಲಿದ್ದು ಎಲ್ಲ ದರಗಳಲ್ಲಿ 5 ರಿಂದ 10 ರು. ಏರಿಕೆಯಾದರೂ ಆಶ್ಚರ್ಯವಿಲ್ಲ.

ಮಾರಿನ ಲೆಕ್ಕದಲ್ಲಿ ಖರೀದಿ
ಸಾಮಾನ್ಯವಾಗಿ ಮನೆಯಲ್ಲಿ ಹಬ್ಬ ಆಚರಣೆ ಮಾಡುವವರು ಮಾರು ಲೆಕ್ಕದಲ್ಲಿಯೇ ಹೂವು ಖರೀದಿ ಮಾಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಬಸವಳಿದ ಕಾರಣ ಎರಡು ಮಾರು ತೆಗೆದುಕೊಳ್ಳುವ ಬದಲು ಒಂದು ಮಾರು ತೆಗೆದುಕೊಂಡು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ.

ಬಾಳೆ ದಿಂಡು ಬೇಕಲ್ಲ
ಹಬ್ಬದ ಸಂಭ್ರಮಕ್ಕೆ ಮೆರುಗು ನೀಡುವ ಬಾಳೆ ದಿಂಡಿಗೆ 50 ರು. ಇದೆ. ಆದರೆ ಸಂಜೆ ವೇಳೆಗೆ ಬೇಡಿಕೆ ಹೆಚ್ಚಿದರೆ 100 ರು. ತಲುಪಬಹುದು ಎಂದು ಎನ್ ಆರ್ ಕಾಲೋನಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಅಗತ್ಯ ಹೂವು ಪೂರೈಕೆಯಾಗಿಲ್ಲ
ಮಾರುಕಟ್ಟೆಗೆ ಅಗತ್ಯ ಪ್ರಮಾಣದಲ್ಲಿ ಹೂವು ಪೂರೈಕೆಯಾಗಿಲ್ಲ. ಮಳೆ ಏರುಪೇರಿನಿಂದ ಇಳುವರಿಯಲ್ಲಿ ಕುಂಠಿತವಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಖರೀದಿಸುವುದು ಅನಿವಾರ್ಯ
ಹಬ್ಬ ಬಂತೆಂದರೆ ಹೂ-ಹಣ್ಣುಗಳ ಬೆಲೆ ಹೆಚ್ಚುತ್ತವೆ. ಆದರೂ ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಆಚರಿಸದೆ ಇರಲಾಗದು. ಹೀಗಾಗಿ ಎಷ್ಟೇ ದುಬಾರಿಯಾದರೂ ಖರೀದಿಸುವ ಅನಿವಾರ್ಯತೆ ಇದೆ ಎಂದು ಕತ್ರಿಗುಪ್ಪೆಯ ಗೃಹಿಣಿ ಕವಿತಾ ಹೇಳುತ್ತಾರೆ.












Click it and Unblock the Notifications