ರವಿ ಚೆನ್ನಣ್ಣನವರ್ ಕಾರ್ಯಾಚರಣೆ; ನಿಯಮ ಉಲ್ಲಂಘಿಸಿದರೆ ದಂಡ
Recommended Video
ಬೆಂಗಳೂರು, ಜನವರಿ 21 : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪೊಲೀಸರು ಕರ್ನಾಟಕ ಹೈಕೋರ್ಟ್ ಸೂಚನೆಯಂತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಉಪ ವಿಭಾಗಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ನೇತೃತ್ವದಲ್ಲಿ ವಾಹನಗಳ ದೋಷಯುಕ್ತ ನಂಬರ್ ಪ್ಲೇಟ್ ಪರೀಕ್ಷೆ ನಡೆಸಲಾಗುತ್ತಿದೆ. ಹಲವು ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಲಾಗಿದೆ, ದಂಡವನ್ನು ವಿಧಿಸಲಾಗಿದೆ.
ಹಲವು ವಾಹನ ಸವಾರರು ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಫ್ಯಾನ್ಸಿ ನಂಬರ್ ಪ್ಲೇಟ್ ಮತ್ತು ವಿವಿಧ ಸಂಘ ಸಂಸ್ಥೆಗಳ ಹೆಸರನ್ನು ನಂಬರ್ ಪ್ಲೇಟ್ನಲ್ಲಿ ಹಾಕಿಕೊಂಡಿದ್ದಾರೆ. ಇಂತಹ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
2019ರ ಡಿಸೆಂಬರ್ನಲ್ಲಿಯೇ ಸಾರಿಗೆ ಇಲಾಖೆ ವಾಹನಗಳ ನಂಬರ್ ಪ್ಲೇಟ್ ಬಗ್ಗೆ ಸವಾರರಿಗೆ ಸೂಚನೆಯನ್ನು ನೀಡಿದೆ. ವಾಹನಗಳ ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ತಿಳಿಸಲಾಗಿದೆ. ಆದರೆ, ಈ ನಿಯಮವನ್ನು ಎಲ್ಲರೂ ಪಾಲನೆ ಮಾಡುತ್ತಿಲ್ಲ.

ವಾಹನ ಸವಾರರಿಗೆ ದಂಡ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿ ಡಿ. ಚೆನ್ನಣ್ಣನವರ್ ನೇತೃತ್ವದಲ್ಲಿ ವಾಹನಗಳ ದೋಷಯುಕ್ತ ನಂಬರ್ ಪ್ಲೇಟ್ ತೆರವುಗೊಳಿಸುವ 'ಸ್ಪೆಷಲ್ ಡ್ರೈವ್' ನಡೆಯುತ್ತಿದೆ. ವಾಹನ ಸವಾರರಿಗೆ ದಂಡವನ್ನು ಹಾಕಲಾಗುತ್ತಿದೆ. ನಂಬರ್ ಪ್ಲೇಟ್ ಬದಲಾಯಿಸಲು ಸೂಚನೆ ನೀಡಲಾಗುತ್ತಿದೆ.

ನಂಬರ್ ಪ್ಲೇಟ್ ನಿಯಮಗಳು
ವಾಹನಗಳ ನಂಬರ್ ಪ್ಲೇಟ್ಗಳು ದೋಷಯುಕ್ತವಾಗಿದ್ದಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ನಿಯಮ 50 ಮತ್ತು 51ರ ಹಾಗೂ Emblems And Names Act 1950A (Prevention Of Improper Use) Act 1950 ಕಲಂ 3, 4 ಮತ್ತು 5ರ ಉಲ್ಲಂಘನೆಯಾಗುತ್ತದೆ. ಇದಕ್ಕೆ 500 ರೂ. ದಂಡವಿಧಿಸಲು ಅವಕಾಶವಿದೆ.

ನಂಬರ್ ಪ್ಲೇಟ್ ಹೇಗಿರಬಾರದು?
ವಾಹನಗಳ ನಂಬರ್ ಪ್ಲೇಟ್ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ/ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಸರನ್ನು ಹೋಲುವಂತಹ ರಾಷ್ಟ್ರೀಯ/ರಾಜ್ಯ ಮಾನವ ಹಕ್ಕುಗಳ ಸಂಸ್ಥೆ/ಒಕ್ಕೂಟ/ಇತ್ಯಾದಿ ಹೆಸರುಗಳನ್ನು ಚಿಹ್ನೆ/ಲಾಂಛನಗಳನ್ನು ಇತರ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದು ಅಪರಾಧ.

7 ದಿನಗಳ ಅವಕಾಶ ನೀಡಲಾಗಿತ್ತು
2019ರ ಡಿಸೆಂಬರ್ನಲ್ಲಿಯೇ ಸಾರಿಗೆ ಇಲಾಖೆ ಇಂತಹ ದೋಷಯುಕ್ತ ನಂಬರ್ ಪ್ಲೇಟ್ ಬದಲಾವಣೆ ಮಾಡಿ ಎಂದು ವಾಹನ ಸವಾರರಿಗೆ ಮಾಹಿತಿ ನೀಡಿತ್ತು. ಒಂದು ವಾರದಲ್ಲಿ ನಂಬರ್ ಪ್ಲೇಟ್ ತೆರವುಗೊಳಿಸದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.












Click it and Unblock the Notifications