ಬಂಧಿತ ಮೌಲ್ವಿ ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದ
ಬೆಂಗಳೂರು, ಜನವರಿ 08 : ಬೆಂಗಳೂರಿನಲ್ಲಿ ಗುರುವಾರ ರಾತ್ರಿ ದೆಹಲಿ ಪೊಲೀಸರು ಬಂಧಿಸಿದ ಮೌಲ್ವಿ ಯುವಕರನ್ನು ಉಗ್ರ ಸಂಘಟನೆ ಸೇರುವಂತೆ ಪ್ರೇರೆಸುತ್ತಿದ್ದ ಮತ್ತು ತಾನೇ ಯುವಕರನ್ನು ನೇಮಕ ಮಾಡುತ್ತಿದ್ದ ಎಂಬ ಮಾಹಿತಿ ತನಿಖೆಯಿಂದ ಬಹಿರಂಗವಾಗಿದೆ.
ದೆಹಲಿ ಪೊಲೀಸರು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ಮೌಲಾನಾ ಸೈಯದ್ ಅಂಜಾರ್ ಶಾ ಖಾಸ್ಮಿ (51) ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿಕೊಳ್ಳಲು ವೆಬ್ ಸೈಟ್ ಆರಂಭಿಸಿದ್ದ. ಉತ್ತರ ಪ್ರದೇಶ, ಗುಜರಾತ್, ಆಂಧ್ರ ಪ್ರದೇಶ ರಾಜ್ಯಗಳಿಗೂ ಭೇಟಿ ಮಾಡಿ ಹಲವು ಯುವಕರನ್ನು ಭೇಟಿ ಮಾಡಿ ಬಂದಿದ್ದ. [ಅಲ್ ಖೈದಾ ಪರ ಪ್ರಚಾರ : ಬೆಂಗಳೂರಲ್ಲಿ ಮೌಲ್ವಿ ಬಂಧನ]

ಉಗ್ರ ಸಂಘಟನೆ ಸೇರುವಂತೆ ಯುವಕರಿಗೆ ಪ್ರಚೋದನೆ ನೀಡುವುದು ಮೌಲ್ವಿಯ ಕೆಲಸವಾಗಿತ್ತು. ಮೌಲ್ವಿಯಿಂದ ಎರಡು ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆತ ಪಾಕಿಸ್ತಾನಕ್ಕೂ ಭೇಟಿ ನೀಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸಹಕಾರ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶ ಮತ್ತು ಓಡಿಶಾದಲ್ಲಿ ದಾಳಿ ಮಾಡಿದ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈ ಇಬ್ಬರ ಜೊತೆ ಮೌಲಾನಾ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೌಲಾನಾ ಸೈಯದ್ ಅಂಜಾರ್ ಶಾ ಖಾಸ್ಮಿ ಅವರನ್ನು ಮುಸ್ಲಿಂ ಸಮುದಾಯದ ಕೆಲವರು ವಿರೋಧಿಸುತ್ತಿದ್ದರು. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಮೌಲಾನಾ ಯುವಕರಿಗೆ ಪ್ರಚೋದನೆ ನೀಡುತ್ತಿದ್ದರು ಎಂದು ಸಮುದಾಯದ ಕೆಲವು ಮುಖಂಡರು ಆರೋಪಿಸುತ್ತಿದ್ದಾರೆ.
ಬುರ್ಖಾ ಧರಿಸದ ಮಹಿಳೆಯರ ಮೇಲೆ ಹಲ್ಲೆ ಮಾಡುವಂತೆ ಮೌಲಾನಾ ಕರೆ ನೀಡಿದ್ದ. ದೆಹಲಿ ಪೊಲೀಸರು ಜನವರಿ 20ರ ತನಕ ಮೌಲಾನಾನನ್ನು ವಶಕ್ಕೆ ಪಡೆದಿದ್ದಾರೆ. ದೇಶದ ಬೇರೆ-ಬೇರೆ ನಗರದಲ್ಲಿ ಆತನಿಗೆ ಇರುವ ಸಂಪರ್ಕದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.












Click it and Unblock the Notifications