ಕುಣಿಗಲ್ನ ಲಕ್ಷ್ಮಣ ಬೆಂಗಳೂರಿನ ಶ್ರೀಮಂತ ರೌಡಿಯಾದ ಕಥೆ!
ಬೆಂಗಳೂರು, ಮಾರ್ಚ್ 08 : ಬೆಂಗಳೂರು ನಗರದ ಶೀಮಂತ ರೌಡಿ ಶೀಟರ್ ಲಕ್ಷ್ಮಣನನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ಸುಮಾರು 600 ಕೋಟಿ ರೂ. ಆಸ್ತಿ ಹೊಂದಿದ್ದ ಲಕ್ಷ್ಮಣನನ್ನು ಐದು ಜನರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.
ರಾಜಾಜಿನಗರದ ಇಸ್ಕಾನ್ ದೇವಾಲಯದ ಸಮೀಪ ಲಕ್ಷ್ಮಣನನ್ನು ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿದೆ. ಎರಡು ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಲಕ್ಷ್ಮಣ (42)ನ ವಿರುದ್ಧ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಕುರಿ ಕೃಷ್ಣ ಅಥವ ಮಚ್ಚು ಮಂಜನ ಕಡೆಯವರು ಲಕ್ಷ್ಮಣನನ್ನು ಹಳೆ ದ್ವೇಷದ ಹಿನ್ನಲೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಪೊಲೀಸರ ತನಿಖೆ ಪ್ರಗತಿಯಲ್ಲಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಕುಣಿಗಲ್ನ ರಾಮ ಮತ್ತು ಲಕ್ಷ್ಮಣ : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಮ ಮತ್ತು ಲಕ್ಷ್ಮಣ ಬೆಂಗಳೂರು ನಗರದ ಅಪರಾಧ ಜಗತ್ತಿನಲ್ಲಿ 1995ರಲ್ಲಿ ಕಾಣಿಸಿಕೊಂಡರು. ಕೆಲವೇ ದಿನಗಳಲ್ಲಿ ಪೊಲೀಸರು ತಮ್ಮ ವಿರುದ್ಧ ರೌಡಿ ಶೀಟ್ ತೆರೆಯುವಷ್ಟರ ಮಟ್ಟಿಗೆ ಸಹೋದರರು ಬೆಳೆದರು.
ಮಾಗಡಿ ರಸ್ತೆ ಮತ್ತು ಕಾಮಾಕ್ಷಿಪಾಳ್ಯದ ರೌಡಿಗಳ ಜೊತೆ ಸೇರಿದ ಸಹೋದರರು ಕೊಲೆ, ಕೊಲೆಯತ್ನ, ಅಪಹರಣ, ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದರು. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ಇಬ್ಬರ ವಿರುದ್ಧ ದಾಖಲಾಗಿವೆ.
ಭೂ ಮಾಲೀಕರನ್ನು ಪತ್ತೆ ಮಾಡುತ್ತಿದ್ದ ರಾಮ ಮತ್ತು ಲಕ್ಷ್ಮಣ ಅವರಿಗೆ ಬೆದರಿಕೆ ಹಾಕಿ ಕಡಿಮೆ ಬೆಲೆಗೆ ಭೂಮಿಯನ್ನು ಕೊಂಡು, ಹೆಚ್ಚಿನ ಬೆಲೆಗೆ ಬಿಲ್ಡರ್ಗಳಿಗೆ ಮಾರಾಟ ಮಾಡುತ್ತಿದ್ದರು. 2013ರಲ್ಲಿ ಸಿಸಿಬಿಯ ಸಂಘಟಿತ ಅಪರಾಧ ವಿಭಾಗದ ಪೊಲೀಸರು ರಾಮನ ಮನೆಯ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿದ್ದರು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಣಿಗಲ್ ಮತ್ತು ಕಾಮಾಕ್ಷಿಪಾಳ್ಯಕ್ಕೆ ತಮ್ಮ ಅಡ್ಡಾವನ್ನು ಇವರು ಬದಲಿಸುತ್ತಿದ್ದರು. ಲಕ್ಷ್ಮಣ ಸುಮಾರು 600 ಕೋಟಿ ರೂ. ಆಸ್ತಿಯನ್ನು ಹೊಂದಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು ಬಿಟ್ಟು ಮಂಡ್ಯ ಜಿಲ್ಲೆಯ ಮದ್ದೂರಿಗೆ ತನ್ನ ನೆಲೆಯನ್ನು ಬದಲಿಸಿದ್ದ ಲಕ್ಷ್ಮಣ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ. ಮೊದಲು ಬಿಜೆಪಿ ಸೇರಿದ್ದ ಆತ ಬಳಿಕ, ಜೆಡಿಎಸ್ ಸೇರ್ಪಡೆಯಾಗಿದ್ದ. ರಾಜಕೀಯದಲ್ಲಿ ಬೆಳೆಯಬೇಕೆಂದು ಹಳೆ ವೈರಿಗಳ ಜೊತೆ ಸಂಧಾನ ಮಾಡಿಕೊಂಡಿದ್ದ. ಆದರೆ, ಸಾವು ಮಾತ್ರ ಆತನನ್ನು ಬಿಡಲಿಲ್ಲ.












Click it and Unblock the Notifications