Bengaluru Rain: ಸೋಮವಾರದಿಂದ ಮೂರು ದಿನ ಗಾಳಿ ಸಹಿತ ಮಳೆ ಸಂಭವ
ಬೆಂಗಳೂರು, ಮೇ 14: ಮೋಚಾ ಚಂಡಮಾರುತ ಪ್ರಭಾವ ರಾಜ್ಯದಲ್ಲಿ ಮುಂದುವರಿಯಲಿದೆ. ಈ ಕಾರಣದಿಂದ ಮುಂದಿನ ಮೂರು ಬೆಂಗಳೂರಿಗೆ ಮಳೆ ಮುನ್ಸೂಚನೆ ಇದೆ. ಈ ಪೈಕಿ ನಾಳೆ ಸೋಮವಾರ ಮೇ 15ರಂದು ಅಧಿಕ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಕೆಲವು ದಿನಗಳಿಂದ ಅಲ್ಪಮಟ್ಟಿಗೆ ಮಳೆ ಪ್ರಮಾಣ ಕಡಿಮೆಯಾಗಿದೆ ಎನ್ನಬಹುದು. ಶನಿವಾರ ಸಂಜೆ ವಿದ್ಯಾಪೀಠ, ಜಯನಗರ, ಚಾಮರಾಜಪೇಟೆ, ವಿಜಯನಗರ, ಮಲ್ಲೇಶ್ವರಂ, ಹಂಪಿನಗರ, ಯಲಹಂಕ, ಹೊರಮಾವು, ರಾಜಮಹಲ್ ಗುಟ್ಟಹಳ್ಳಿ, ಕೆಂಗೇರಿ, ಹೆಮ್ಮಿಗೆಪುರ ಸೇರಿದಂತೆ ಕೆಲವೆಡೆ ತುಂತುರು ಮಳೆ ಆಗಿದೆ.

ಆದರೆ ಈ ವೇಳೆ ಮಳೆಗಿಂತ ಗಾಳಿಯ ಅಬ್ಬರ ಹೆಚ್ಚಿತ್ತು. ಅದರಿಂದ ವಿಜಯನಗರದಲ್ಲಿ ತೆಂಗಿನಮರವೊಂದು ಧರೆಗುರುಳಿದರೆ, ವಿವಿಧ ಕಡೆಗಳಲ್ಲಿ ಕೆಲವು ಮರದ ಕೊಂಬೆಗಳು ರಸ್ತೆಗೆ ಮುರಿದು ಬಿದ್ದಿವೆ. ಕೆಲವು ಹೊತ್ತು ವಿದ್ಯುತ್ ವ್ಯತ್ಯಯ ಸಹ ಉಂಟಾಗಿತ್ತು.
ಮೇ 15 ರಿಂದ ಮೂರು ದಿನ ನಗರದಲ್ಲಿ ಗುಡುಗು ಗಾಳಿ ಸಹಿತ ಜೋರು ಮಳೆ ಬರುವ ನಿರೀಕ್ಷೆ ಇದೆ. ಈ ಪೈಕಿ ಸೋಮವಾರ ಅಧಿಕ ಮಳೆಯಬ್ಬರ ಕಂಡುಬರಲಿದೆ. ನಂತರ ಎರಡು ದಿನ ಕೆಲವು ಕಡೆಗಳಲ್ಲಿ ತುಂತುರು ಮಳೆ, ಒಂದೆರಡು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 19ರಿಂದ ನಗರದಲ್ಲಿ ಮಳೆ ಕಡಿಮೆಯಾಗಿ, ಬಿಸಿಲಿನ ಪ್ರಭಾವ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲಿಯವರೆಗೆ ಗರಿಷ್ಠ ತಾಪಮಾನ 34ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ನಿರೀಕ್ಷೆ ಇದೆ.

ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ
ಕರ್ನಾಟಕದಲ್ಲಿ ಮುಂದಿನ 48 ಘಂಟೆಗಳು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ತುಮಕೂರು ಜಿಲ್ಲೆಗಳು ಒಂದೆರಡು ಕಡೆಗಳಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಒಣಹವೆ ಇರಲಿದೆ. ಈ ಮೂಲಕ ಭಾರಿ ಮಳೆಯ ಎಚ್ಚರಿಕೆ ಇಲ್ಲ ಎನ್ನಲಾಗಿದೆ.
ಇನ್ನೂ ಮುಂದಿನ 24 ಘಂಟೆಗಳಲ್ಲಿ ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಗಾಳಿಯ ವೇಗವು ಪ್ರತಿ ಘಂಟೆಗೆ 30-40 ಕಿಲೋ ಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications