Bengaluru rains: ಆಗಸ್ಟ್ 16ರ ನಂತರ ನಗರದಲ್ಲಿ 4 ದಿನ ಮಳೆ ಅಬ್ಬರ
ಬೆಂಗಳೂರು, ಆಗಸ್ಟ್ 13: ಸಿಲಿಕಾನ್ ಸಿಟಿ ಬೆಂಗಳೂರು ಆಗಸ್ಟ್ ನಲ್ಲಿ ಮಳೆ ಕೊರತೆ ಎದುರಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಆಗಸ್ಟ್ 16ರ ನಂತರ ನಾಲ್ಕು ದಿನ ನಗರದಲ್ಲಿ ಮತ್ತೆ ಮಳೆ ಆರ್ಭಟ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.
ಮುಂಗಾರು ಆರಂಭವಾದ ಬಳಿಕ ಬೆಂಗಳೂರಿಗೆ ಸಾಮಾನ್ಯ ಮಳೆ ದಾಖಲಾಗಿದೆ. ಆಗಸ್ಟ್ ಎರಡು ವಾರದ ಹೊತ್ತಿಗಾಗಲೇ ಭಾರಿ ಮಳೆ ಅಬ್ಬರಿಸಬೇಕಿತ್ತು. ಆದರೆ ಹವಾಮಾನದಲ್ಲಿ ಬದಲಾವಣೆಗಳಿಂದಾಗಿ ಆಗಸ್ಟ್ ಈವರೆಗೆ ಭಾರಿ ಮಳೆ ಎಲ್ಲಿಯೂ ಆಗಿಲ್ಲ. ನಗರದೆಲ್ಲಡೆ ಬೇಸಿಗೆ ಎಂಬಂತಹ ವಾತಾವರಣವೇ ಮುಂದುವರಿಯುತ್ತಿದೆ.

ಈ ತಾಪಮಾನದ ವಾತಾವರಣಕ್ಕೆ ಆಗಸ್ಟ್ 16ರಿಂದ ಬ್ರೇಕ್ ಬೀಳಲಿದೆ. ಸತತವಾಗಿ ನಗರದಲ್ಲಿ ನಾಲ್ಕು ದಿನ ಅಂದರೆ ಆಗಸ್ಟ್ 19ರವರೆಗೆ ಹಗುರದಿಂದ ಸಾಧಾರಣವಾಗಿ ಮಳೆ ಬೀಳಲಿದೆ. ಇನ್ನೂ ಒಂದೆರಡು ಕಡೆಗಳಲ್ಲಿ ವ್ಯಾಪಕವಾಗಿ ಮಳೆ ಆರ್ಭಟಿಸಿಲಿದೆ. ಈ ವೇಳೆ ತಾಪಮಾನ ಕ್ರಮೇಣ ಇಳಿಕೆ ಆಗಿ ತಂಪು ವಾತಾವರಣ ನಿರ್ಮಾಣವಾಗಲಿದೆ ಎಂದು ಮುನ್ಸೂಚನಾ ವರದಿ ಮಾಹಿತಿ ನೀಡಿದೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯೇ ಆಗಿಲ್ಲ. ಬದಲಾಗಿ ಹಗಲು ವೇಳೆ ಬಿಸಿಲು ಕಂಡು ಬಂದರೆ, ರಾತ್ರಿ ಹೊತ್ತು ಸೆಕೆಯ ವಾತಾವರಣ ನಿರ್ಮಾಣವಾಗುತ್ತಿದೆ. ಸದ್ಯ ಬೆಂಗಳೂರು ನಗರದಲ್ಲಿ ಭಾನುವಾರ ಗರಿಷ್ಠ ತಾಪಮಾನ 31.3 ಡಿಗ್ರಿ ಸೆಲ್ಸಿಯಸ್ ಕನಿಷ್ಟ 21 ಡಿಗ್ರಿ ಸೆಲ್ಸಿಯಸ್ ಇದೆ. ಇನ್ನೂ ಬೆಂಗಳೂರು KIAL ನಲ್ಲಿ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 30ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.
ಕರ್ನಾಟಕ ಹವಾಮಾನ ವರದಿ
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಕೆಲವೆಡೆ ತುಂತುರು ಮಳೆ ಆದರೆ, ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಅಂದರೆ ಆಗಸ್ಟ್ 15ರವೆರೆಗೆ ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮುಂದಿನ ಐದು ದಿನ ಜೋರು ಮಳೆ ಆಗಲಿದೆ. ಇದೇ ವೇಳೆ ಉತ್ತರ ಒಳನಾಡಿನ ಒಂದೆರಡು ಕಡೆ ತುಂತುರು ಮಳೆ ಬೀಳಲಿದೆ. ಇತ್ತ ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆ ಸುರಿಯಲಿದೆ ಎಂಬ ಮುನ್ಸೂಚನೆ ಇದೆ.












Click it and Unblock the Notifications