Bengaluru Centre Lok Sabha Election 2024: ಬೆಂಗಳೂರು ಕೇಂದ್ರ ಲೋಕಸಭಾ ಅಧಿಪತಿ ಯಾರು? ಮೋದಿ ಅಲೆನಾ ? ಗ್ಯಾರಂಟಿ ಲಾಭನಾ ?
ಬೆಂಗಳೂರು,ಮೇ 31: ಸತತ 15 ವರ್ಷಗಳಿಂದ ರಾಜ್ಯ ರಾಜಧಾನಿಯಲ್ಲಿ ಖಾತೆ ತೆರೆಯಲು ಒದ್ದಾಡಿದ್ದು ಕಾಂಗ್ರೆಸ್. ಆದರೆ ಈ ಬಾರಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಭವಿಷ್ಯ ಏನಾಗಬಹುದು? ಬೆಂಗಳೂರು ಕೇಂದ್ರದಲ್ಲಿ ಕಮಲ ಮುದುಡುತ್ತಾ? ಕೇಂದ್ರದ ಮತದಾರ ಕೈ ಹಿಡಿಯುತ್ತಾರಾ ? ಎಂಬ ಕುತೂಹಲ ಹುಟ್ಟಿಸಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಪಂಚ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಜೋರಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕರ ಕೈ ಗೆ ಆಂತರಿಕ ವರದಿ ಸಿಕ್ಕಿದ್ದು, ಹೆಚ್ಚು ಸ್ಥಾನಗಳನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಇತ್ತ ಮುಂದಿನ ಬಿಬಿಎಂಪಿ ಚುನಾವಣಾ ದೃಷ್ಟಿಯಿಂದಾಗಿ ಕಾಂಗ್ರೆಸ್ ಬೆಂಗಳೂರು ಭಾಗದಲ್ಲಿ ಕನಿಷ್ಟ ಎರಡು ಸ್ಥಾನಗಳನ್ನ ಗೆಲ್ಲುವ ಗುರಿಯನ್ನ ಹಾಕಿಕೊಂಡಿತ್ತು. ಈ ಬಾರೀ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನ ಪಡೆಯುವ ನಿಟ್ಟಿನಲ್ಲಿ ಕೈ ಪಡೆ ಭರ್ಜರಿ ತಂತ್ರಗಾರಿಕೆಯನ್ನ ನಡೆಸಿ ಚುನಾವಣೆಯನ್ನ ಎದುರಿಸಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆದ್ದು, ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಮುಂದಾಗಿದ್ದಾರೆ. ಇತ್ತ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹೊಸಬರನ್ನು ಕಣಕ್ಕಿಳಿಸಿದ್ದು, ಮುಸ್ಲಿಂ ನಾಯಕ ಮನ್ಸೂರ್ ಅಲಿ ಖಾನ್ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿಸಿದೆ. ತಮಿಳು ಭಾಷಿಗರು, ಮುಸ್ಲಿಮರು, ದಲಿತರು ಹಾಗೂ ಕ್ರೈಸ್ತ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಈ ಬಾರಿ ಗೆಲುವು ಯಾರಿಗೆ ಎಂಬ ಕುತೂಹಲವಿದೆ.
2009ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಎಚ್. ಟಿ ಸಾಂಗ್ಲಿಯಾನ ವಿರುದ್ದ ಬಿಜೆಪಿ ಪಿಸಿ ಮೋಹನ್ 35 ಸಾವಿರ ಮತಗಳ ಅಂತರದಿಂದ ಜಯ ದಾಖಲಿಸಿದ್ದರು. 2014 ಮತ್ತು 2019 ರ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ವಿರುದ್ದ ಪಿ ಸಿ ಮೋಹನ್ ಜಯಗಳಿಸಿದ್ದಾರೆ. ಆದರೆ, ಈ ಬಾರಿ ಹಲವು ಸಮೀಕ್ಷೆಗಳು ಹಾಗೂ ರಾಜಕೀಯ ವಿಶ್ಲೇಷಕರು ಹೇಳಿರುವಂತೆ ಮೋದಿ ಅಲೆ ರಾಜ್ಯದಲ್ಲಿ ಕಡಿಮೆಯಾಗಿದ್ದು, ಸಿದ್ದರಾಮಯ್ಯ ಅವರ ಗ್ಯಾರಂಟಿ ಅಲೆ ಜೋರಾಗಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. ಎಂಟು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿರುವ ಬೆಂಗಳೂರು ಕೇಂದ್ರದಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ಶಾಸಕರೇ ಇದ್ದಾರೆ. ಇನ್ನೂ ಐವರು ಕಾಂಗ್ರೆಸ್ ಶಾಸಕರ ಫೈಕಿ ನಾಲ್ವರು ಸಿದ್ದರಾಮಯ್ಯ ಅವರ ಸಂಪುಟದ ಸಚಿವರಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.
ಈ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಐದೂವರೆ ಲಕ್ಷ ತಮಿಳಿಗರು, ನಾಲ್ಕೂವರೆ ಲಕ್ಷ ಮುಸಲ್ಮಾನರು, ಎರಡು ಲಕ್ಷ ಕ್ರೈಸ್ತರು ಮತದಾರರಾಗಿದ್ದಾರೆ. 2019 ರ ಚುನಾವಣಾ ಸಮೀಕ್ಷೆ ಪ್ರಕಾರ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2204817.
ಚಿಕ್ಕಪೇಟೆ ಮತ್ತು ಗಾಂಧಿ ನಗರದಲ್ಲಿ ಗುಜರಾತಿಗಳು ಮತ್ತು ಮಾರವಾಡಿಗಳ ಸಂಖ್ಯೆ ಹೆಚ್ಚಾಗಿದೆ. ಶಿವಾಜಿನಗರ ಚಾಮರಾಜಪೇಟೆಯಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಿದೆ. ಶಿವಾಜಿನಗರ, ಗಾಂಧಿನಗರ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಮತದಾರರನ್ನು ಈ ಕ್ಷೇತ್ರ ಹೊಂದಿದೆ.
ಇನ್ನೂ ಬಿಜೆಪಿಯ ಹಾಲಿ ಸಂಸದ ಪಿಸಿ ಮೋಹನ್ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತವನ್ನ ಹೊಂದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ವಿರುದ್ದ ಪಿ ಸಿ ಮೋಹನ್ ಜಯಗಳಿಸಿದ್ದರು. ಈ ಸಲ ಬಿಜೆಪಿಯ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದರು. ಸಹ ಕಾಂಗ್ರೆಸ್ ತನ್ನ ಗ್ಯಾರಂಟಿ ಅಸ್ತ್ರಗಳ ಪ್ರಯೋಗದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನ ವಶಪಡಿಸಿಕೊಳ್ಳಲು ಕೈ ಪಡೆ ಹಲವು ತಂತ್ರಗಳನ್ನ ಪ್ರಯೋಗಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಅಲೆಯಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು, ಅದೇ ಹುಮ್ಮಸ್ಸಿನಲ್ಲಿ ಲೋಕಸಭಾ ಕ್ಷೇತ್ರವನ್ನೂ ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಈ ಬಾರಿ ಮೋದಿ ಅಲೆ ನಾ ಅಥವಾ ಗ್ಯಾರಂಟಿಯ ಲಾಭನಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಮತ್ತೊಮ್ಮೆ ಪಾರ್ಲಿಮೆಂಟ್ ಪ್ರವೇಶದ ಉತ್ಸಾಹದಲ್ಲಿ ಪಿಸಿ ಮೋಹನ್ ಇದ್ದರೆ, ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯ ಪಾತಕೆ ಹಾರಲಿದೆ ಎಂಬ ತವಕದಲ್ಲಿ ಕಾಂಗ್ರೆಸ್ ಇದೆ...ಆದರೆ, ಈ ಕ್ಷೇತ್ರದಲ್ಲಿ ಪಿ ಸಿ ಮೋಹನ್ ವೈಯಕ್ತಿಕ ವರ್ಚಸ್ಸು ಹೊಂದಿದ್ದು, ಈ ಬಾರಿಯೂ ಬೆಂಗಳೂರು ಕೇಂದ್ರದ ಜನತೆ ಕೈ ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.












Click it and Unblock the Notifications