'ಅಂದರ್ ಬಾಹರ್' ಮೇಲೆ ಸಿಸಿಬಿ ದಾಳಿ; 10 ಜನ ಅಂದರ್
ಬೆಂಗಳೂರು, ಜನವರಿ 19: ಪ್ರತ್ಯೇಕ ಪ್ರಕರಣಗಳಲ್ಲಿ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 4 ಲಕ್ಷ ನಗದು ಹಾಗೂ ಹಲವು ವಸ್ತುಗಳನ್ನು ವಶಕ್ಕೆ ಪಡಯಲಾಗಿದೆ.[ಕೆಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಹುಬ್ಬಳ್ಳಿಯಲ್ಲಿ ನಾಲ್ವರ ಬಂಧನ]
'ಅಂದರ್ ಬಾಹರ್' ಆಡುತ್ತಿದ್ದ 9 ಜನ ಅಂದರ್
ರಾಜಾಜಿನಗರ ಪೊಲೀಸ್ ಠಾಣಾ ಸರಹದ್ದಿನ ಮನೆಯೊಂದರಲ್ಲಿ ಹಣ ಇಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 9 ಜನರನ್ನು ನಗರದ ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರಿಂದ 2,97,000 ರೂಪಾಯಿ ಹಣ, ಇಸ್ಪೀಟು ಕಾರ್ಡುಗಳು ಮತ್ತು ಇತರ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜಾಜಿನಗರ ಪೊಲೀಸ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಟ್ಟಿಂಗ್ ಅಸಾಮಿಯ ಬಂಧನ:
ಮತ್ತೊಂದು ಪ್ರಕರಣದಲ್ಲಿ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಪ್ರಭಾಕರ್ ಅಲಿಯಾಸ್ ತಿರುಪತಯ್ಯನನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈತ ಹಣ ಇಟ್ಟು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ. ಈತನಿಂದ 1,16,000 ರೂಪಾಯಿ ಹಣ, ಎರಡು ಮೊಬೈಲ್, ಬೆಟ್ಟಿಂಗ್ ವಿವರಗಳಿದ್ದ ಪೇಪರುಗಳು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈತನ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿದಿದೆ.