ಬೆಂಗಳೂರಿನ 73 ಕಿ. ಮೀ. ಉದ್ದದ ರಸ್ತೆ ಯೋಜನೆ ಟೆಂಡರ್ಗೆ ಮತ್ತೆ ವಿಘ್ನ
ಬೆಂಗಳೂರು, ಫೆಬ್ರವರಿ 23: ಕರ್ನಾಟಕ ಸರ್ಕಾರ ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ಜಾರಿಗೊಳಿಸಲು ಉತ್ಸುಕವಾಗಿದೆ. ಆದರೆ ದಶಕಗಳ ಹಿಂದಿನ ಯೋಜನೆಯ ಟೆಂಡರ್ ಕರೆಯಲು ವಿವಿಧ ಅಡೆ-ತಡೆಗಳು ಎದುರಾಗುತ್ತಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ 73 ಕಿ. ಮೀ. ಉದ್ದದ ಈ ರಸ್ತೆಯ ಯೋಜನಾ ವೆಚ್ಚ 27,000 ಕೋಟಿ ರೂ.ಗಳು.
2007ರಲ್ಲಿ ಪ್ರಸ್ತಾಪವಾಗಿದ್ದ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆಯನ್ನು ಕರ್ನಾಟಕ ಸರ್ಕಾರ ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕಾರಣ ಮಾಡಿ ಜಾರಿಗೊಳಿಸುತ್ತಿದೆ. ಈ ಯೋಜನೆಗೆ ಅನುದಾನ ನೀಡಲು ಹುಡ್ಕೋ ಸಹ ಒಪ್ಪಿಗೆಯನ್ನು ನೀಡಿದೆ.

ಆದರೆ ಬಿಬಿಸಿ ಯೋಜನೆ ಜಾರಿಗೊಳಿಸಲು ಟೆಂಡರ್ ಕರೆಯಲು ಭೂ ಸ್ವಾಧೀನವೇ ಅಡ್ಡಿಯಾಗುತ್ತಿದೆ. ಮೊದಲ ಹಂತದಲ್ಲಿ ಯೋಜನೆ ವ್ಯಾಪ್ತಿಗೆ ಒಳಪಡುವ ಆಸ್ತಿ ಮಾಲೀಕರಿಗೆ ಬಿಡಿಎ ನೋಟಿಸ್ ನೀಡುತ್ತಿದೆ. ಯೋಜನೆಯ ಭೂ ಸ್ವಾಧೀನಕ್ಕೆ 9 ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸರ್ಕಾರದ ಮಟ್ಟದ ಸಮಿತಿಯೊಂದು ಈ ಕುರಿತ ಸಮಸ್ಯೆಗಳನ್ನು ಬಗೆಹರಿಸಲಿದೆ.
ಟೆಂಡರ್ ಕರೆಯುವುದು ವಿಳಂಬ: ಈಗಾಗಲೇ ಬಿಬಿಸಿ ಯೋಜನೆ ಟೆಂಡರ್ ಕರೆಯುವುದು ವಿಳಂಬವಾಗಿದೆ. ಭೂ ಸ್ವಾಧೀನದ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಕೊಂಡು ಟೆಂಡರ್ ಕರೆಯಲು ಸರ್ಕಾರ ಬಯಸಿದೆ. ಆದರ ವಿವಿಧ ಕಾರಣಕ್ಕೆ ಭೂ ಸ್ವಾಧೀನ ವಿಳಂಬವಾಗುತ್ತಿದ್ದು, ಯೋಜನೆಯ ಟೆಂಡರ್ ಸಹ ಇನ್ನೂ ತಡವಾಗಲಿದೆ.
ಬಿಬಿಸಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯ ಕುರಿತು ಸ್ವತಃ ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಬಿಬಿಸಿ ಯೋಜನೆಗೆ 2,560 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಯೋಜನೆ ವ್ಯಾಪ್ತಿಗೆ ಒಳಪಡುವ ಆಸ್ತಿ ಮಾಲೀಕರು ಬಿಡಿಎ ಹೇಳುದಕ್ಕಿಂತ ಹೆಚ್ಚಿನ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಭೂ ಸ್ವಾಧೀನ ಅಂತಿಮಗೊಳಿಸುವುದು ವಿಳಂಬವಾಗುತ್ತಿದೆ.
ತುಮಕೂರು ರಸ್ತೆ-ಹೊಸೂರು ರಸ್ತೆ ಸಂಪರ್ಕಿಸುವ ಈ ಬಿಬಿಸಿ ಯೋಜನೆ ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮೂಲಕ ಹಾದು ಹೋಗುತ್ತದೆ. ಈ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ಸರ್ಕಾರ ಬಯಸಿದ್ದು, ಭೂ ಸ್ವಾಧೀನವೇ ಸರ್ಕಾರಕ್ಕೆ ತಲೆ ನೋವು ತಂದಿದೆ.
ಬಿಡಿಎ ಮೊದಲ ಹಂತದಲ್ಲಿ ಈಗಾಗಲೇ ಬಿಬಿಸಿ ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಭೂಮಿಯ ಮಾಲೀಕರಿಗೆ ನೋಟಿಸ್ ನೀಡುತ್ತಿದೆ. ಯೋಜನೆಯ ಭೂ ಸ್ವಾಧೀನಕ್ಕೆ ಅಧಿಕ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಭೂ ಸ್ವಾಧೀನ ಕಾರ್ಯದಲ್ಲಿ ವಿಳಂಬವಾಗಬಾರದು ಎಂದು ಡಿ. ಕೆ. ಶಿವಕುಮಾರ್ ಬಿಡಿಎ ಅಧಿಕಾರಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಿದ್ದಾರೆ.
ಭೂ ಸ್ವಾಧೀನ ಅಧಿಕಾರಿಗಳು ಮೊದಲ ಹಂತದಲ್ಲಿ ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿ ಆಸ್ತಿಯ ಹಕ್ಕು ಕುರಿತು ಅವರ ಬಳಿ ಇರುವ ದಾಖಲೆಗಳು, ಯೋಜನೆಗೆ ಭೂಮಿ ನೀಡಲು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚನೆ ನೀಡುತ್ತಿದ್ದಾರೆ. ಈ ವೇಳೆ ಪರಿಹಾರದ ಕುರಿತು ಮಾಹಿತಿ ನೀಡುತ್ತಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಭೂ ಮಾಲೀಕರು ಪಟ್ಟು ಹಿಡಿಯುತ್ತಿದ್ದಾರೆ.












Click it and Unblock the Notifications