ಅಶೋಕ್ ವಿರುದ್ದ ತಿರುಗಿಬಿದ್ದರೇ ನಗರದ ಬಿಜೆಪಿ ಶಾಸಕರು?
ಬೆಂಗಳೂರು, ಸೆ 4: ಜನಾದೇಶ ಪಕ್ಷದ ಪರವಾಗಿದ್ದರೂ ಬಹುಮತ ಸಾಬೀತು ಪಡಿಸುವಲ್ಲಿ ಹಿನ್ನಡೆ ಅನುಭವಿಸುತ್ತಿರುವ ಬಿಜೆಪಿ, ಮೇಯರ್ ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿತೇ ಎನ್ನುವ ಅನುಮಾನ ಬಿಜೆಪಿ ಕಾರ್ಯಕರ್ತರಲ್ಲಿ ಕಾಡಲಾರಂಭಿಸಿದೆ.
ಇದಕ್ಕೆ ಪೂರಕ ಎನ್ನುವಂತೆ ಬಿಬಿಎಂಪಿ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿರುವ ಆರ್ ಅಶೋಕ್, ಗುರುವಾರ (ಸೆ 4) ಬಿಬಿಎಂಪಿ ಚುನಾಯಿತ ಸದಸ್ಯರ ಸಭೆಯಲ್ಲಿ ಮಾತನಾಡಿದ ವೈಖರಿ ಇದಕ್ಕೆ ಪುಷ್ಟಿ ನೀಡುವಂತಿತ್ತು.
ಇದಕ್ಕಿಂತ ಹೆಚ್ಚಾಗಿ ಬೆಂಗಳೂರು ನಗರದ ಪಕ್ಷದ ಪ್ರಮುಖ ಶಾಸಕರಾದ ವಿ ಸೋಮಣ್ಣ ಮತ್ತು ಅರವಿಂದ ಲಿಂಬಾವಳಿ ಸಭೆಯಲ್ಲಿ ಹಾಜರಾಗದೇ ಅಶೋಕ್ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನಲಾಗುತ್ತಿದೆ. (ಬಿಬಿಎಂಪಿ ಮೈತ್ರಿ: ಗೌಡ್ರಿಗೆ ಲಾಭ ಜಾಸ್ತಿ)
ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎನ್ನುವ ವಿಷಾದದಲ್ಲಿರುವ ಬೆಂಗಳೂರಿನ ಬಿಜೆಪಿ ಶಾಸಕರು, ಇದಕ್ಕೆ ಕಾರಣ ಆರ್ ಅಶೋಕ್ ಅವರೇ ಎನ್ನುವ ಅಂತಿಮ ತೀರ್ಮಾನಕ್ಕೆ ಬಂದಂತಿದೆ.
ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ದೂರಿದರೆ ಏನು ಪ್ರಯೋಜನ? ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅಶೋಕ್ ಸರಿಯಾಗಿ ರಣತಂತ್ರ ರೂಪಿಸಬೇಕಿತ್ತು ಎನ್ನುವ ಮಾತೂ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಸದಾನಂದ ಗೌಡ, ದೇವೇಗೌಡ್ರನ್ನು ಭೇಟಿಯಾಗಿದ್ದು ಬಿಟ್ಟರೆ
ಸದಾನಂದ ಗೌಡ ಒಮ್ಮೆ ಜೆಡಿಎಸ್ ವರಿಷ್ಠರನ್ನು ಭೇಟಿಯಾಗಿದ್ದು ಬಿಟ್ಟರೆ, ಬಿಜೆಪಿಯ ಹಿರಿಯ ನಾಯಕರು ಮೇಯರ್ ಗೊಂದಲದ ಬಗ್ಗೆ ಹೇಳಿಕೆ ನೀಡಿತ್ತಿಲ್ಲ. ಪ್ರಲ್ಹಾದ್ ಜೋಷಿ ಮತ್ತು ಜಗದೀಶ್ ಶೆಟ್ಟರ್ ಕಳಸಾ ಬಂಡೂರಿ ಹೋರಾಟದಲ್ಲಿ ಕಾಣಿಸಿಕೊಂಡಿದ್ದರೆ, ಯಡಿಯೂರಪ್ಪ ರಾಜ್ಯಾದ್ಯಂತ ಚೈತನ್ಯ ಯಾತ್ರೆಯಲ್ಲಿದ್ದಾರೆ.

ಅರವಿಂದ್ ಲಿಂಬಾವಳಿ ಮತ್ತು ಸೋಮಣ್ಣ
ಗುರುವಾರ ನಡೆದ ಬಿಜೆಪಿಯ ಬಿಬಿಎಂಪಿ ಚುನಾಯಿತ ಸದಸ್ಯರ ಸಭೆಯಲ್ಲಿ ಅರವಿಂದ್ ಲಿಂಬಾವಳಿ ಮತ್ತು ಸೋಮಣ್ಣ ಗೈರು ಎದ್ದು ಕಾಣುತ್ತಿತ್ತು. ಜಯನಗರದ ಶಾಸಕ ವಿಜಯ್ ಕುಮಾರ್ ಸಭೆಯಲ್ಲಿ ಹಾಜರಿದ್ದರು.

ಆಪರೇಶನ್ ಕಮಲ
ಈ ಹಿಂದೆ ನಾವು ಆಪರೇಶನ್ ಕಮಲ ಮಾಡಿದಾಗ ಬಿಜೆಪಿಯ ವಿರುದ್ಧ ತುಂಬಾ ಅಪವಾದ ಕೇಳಿ ಬಂತು. ಆ ಕಾರಣಕ್ಕಾಗಿ ನಾವು ಬಿಬಿಎಂಪಿ ಚುನಾವಣಾ ಫಲಿತಾಂಶದ ನಂತರ ಮೇಯರ್ ಪಟ್ಟಕ್ಕಾಗಿ ಅದನ್ನು ಪ್ರಯೋಗ ಮಾಡಲು ಹೋಗಲಿಲ್ಲ ಎಂದು ಅಶೋಕ್ ಗುರುವಾರದ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಹೈಜಾಕ್
ಸಿದ್ದರಾಮಯ್ಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೈಜಾಕ್ ಮಾಡಿದ್ದಾರೆ. ಚುನಾವಣಾ ಸೋಲಿಗೆ ನಾನೇ ನೇರ ಹೊಣೆಯೆಂದಿದ್ದ ಮುಖ್ಯಮಂತ್ರಿಗಳು ಅಧಿಕಾರದ ಆಸೆಗಾಗಿ ಹಿಂಬಾಗಿಲಿನ ಮೂಲಕ ರಾಜಕೀಯ ಮಾಡುತ್ತಿದ್ದಾರೆಂದು ಅಶೋಕ್ ಕಿಡಿಕಾರಿದ್ದಾರೆ.

ಕುಮಾರಸ್ವಾಮಿ ಮತ್ತು ಪರಮೇಶ್ವರ್
ಕುಮಾರಸ್ವಾಮಿ ಮತ್ತು ಪರಮೇಶ್ವರ್ ಜೊತೆ ನಡೆಯ ಬೇಕಾಗಿದ್ದ ಮಾತುಕತೆ ಗುರುವಾರವೂ ನಡೆಯಲಿಲ್ಲ. ಎಚ್ಡಿಕೆಗೆ ಅನಾರೋಗ್ಯದ ಕಾರಣವಾದರೆ ಪರಮೇಶ್ವರ್ ರೈಲು ಅಪಘಾತದಲ್ಲಿ ಮೃತ ಪಟ್ಟ ದೇವದುರ್ಗದ ಶಾಸಕರ ಪುಣ್ಯತಿಥಿ ಕಾರ್ಯಕ್ರಮಕ್ಕೆ ತೆರಳಿದ್ದರು.












Click it and Unblock the Notifications