Bengaluru Bandh: ಪ್ರತಿಭಟನೆ ಆರಂಭಕ್ಕೆ ಮುನ್ನವೇ ಕುರುಬೂರು ಪೊಲೀಸರ ವಶಕ್ಕೆ
ಬೆಂಗಳೂರು, ಸೆ 26: ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕರೆಯಲಾಗಿರುವ ಬೆಂಗಳೂರು ಬಂದ್ ಗೆ ಪ್ರಾಥಮಿಕ ಮಾಹಿತಿಯ ಪ್ರಕಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಸ್, ಆಟೋ ಸಂಚಾರ ವಿರಳವಾಗಿದ್ದು, ಅಂಗಡಿ ಮುಂಗಟ್ಟುಗಳು ಅಲ್ಲಲ್ಲಿ ತೆರೆದಿವೆ.
ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರತಿಭಟನಾಕಾರರು ಸಿದ್ದತೆಯನ್ನು ನಡೆಸಿಕೊಂಡಿದ್ದಾರೆ. ಈ ಸಂಬಂಧ ವಿವಿಧ ಸಂಘಟನೆಗಳು ಸದಸ್ಯರು, ಮುಖಂಡರು ಮೈಸೂರು ಬ್ಯಾಂಕ್ ವೃತ್ತದತ್ತ ಜಮಾಯಿಸುತ್ತಿದ್ದಾರೆ.

ಆದರೆ, ಪ್ರತಿಭಟನಾ ಮೆರವಣಿಗೆ ಆರಂಭ ಆಗುವುದಕ್ಕೂ ಮುನ್ನವೇ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ಪ್ರತಿಭಟನಾಕಾರರನ್ನು ಪೊಲೀಸರು ಮೈಸೂರು ಬ್ಯಾಂಕ್ ವೃತ್ತದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿಭಟನಾ ಮೆರವಣಿಗೆ ನಡೆಸುವ ವಿಚಾರದಲ್ಲಿ ಪೊಲೀಸರು ಮತ್ತು ಕುರುಬೂರು ಮತ್ತು ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಇದಾದ ನಂತರ, ಪೊಲೀಸರು ರೈತ ಸಂಘಟನೆಯವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ನಗರಕ್ಕೆ ನಲವತ್ತು ಟಿಎಂಸಿ ನೀರು ಬೇಕಿದೆ, ಇದರಿಂದ ಗೊತ್ತಾಗುತ್ತದೆ ಕಾವೇರಿ ನೀರು ಬೆಂಗಳೂರಿಗೆ ಎಷ್ಟು ಮುಖ್ಯ ಎಂದು. ಹಾಗಾಗಿ, ನಾವು ಬಂದ್ ಕರೆಯೋದಲ್ಲ, ಬೆಂಗಳೂರು ನಿವಾಸಿಗರೇ ಸ್ವಯಂಪ್ರೇರಿತರಾಗಿ ಬಂದ್ ನಲ್ಲಿ ಪಾಲ್ಗೊಳ್ಳಬೇಕು"ಎಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.
ರಾಮನಗರ, ಮಂಡ್ಯ, ಮೈಸೂರು ವ್ಯಾಪ್ತಿಯಲ್ಲಿಯೂ ಸಹ ಪ್ರತಿಭಟನೆಗಳು ನಡೆಯುತ್ತಿವೆ. ರಾಮನಗರದಲ್ಲಿ ಪ್ರತಿಭಟನಾಕಾರರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಪ್ರತಿಕ್ರಿತಿಯನ್ನು ದಹಿಸಿ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications