ಕೊವಿಡ್ 19 ಕಾಲದಲ್ಲಿ ಕಲಾಕಾರರಿಗೆ ಪ್ರೋತ್ಸಾಹ ಅಗತ್ಯ: ಮನೋಹರ್
ಬೆಂಗಳೂರು, ಜನವರಿ 3: ಕೊರೊನಾವೈರಸ್ ಸಾಂಕ್ರಾಮಿಕದಿಂದ ತೊಂದರೆಗೀಡಾಗಿರುವ ದೇಶದ ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡುವುದು ಬಹಳ ಅಗತ್ಯವಾಗಿದೆ ಎಂದು ಸಂಗೀತ ನಿರ್ದೇಶಕ ವಿ ಮನೋಹರ್ ಹೇಳಿದರು.
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ಬೆಂಗಳೂರು - ಆರ್ಟ್ಸ್ & ಕ್ರಾಫ್ಟ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಜನವರಿ 10 ರವರೆಗೆ ಈ ಪ್ರದರ್ಶನವು ನಡೆಯಲಿದ್ದು, ಪ್ರತಿದಿನ 11 ರಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಅಪ್ಪಾಜಯ್ಯ, ಚಿತ್ರ ನಟ ನಿರಂಜನ್, ರೂಪದರ್ಶಿ ಐಶಾನ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ವಿ. ಮನೋಹರ್ ಮಾತನಾಡಿ, "ಕರೋನಾ ಸಂಕಷ್ಟ ಕಾಲದಲ್ಲಿ ಕಲಾವಿದರುಗಳು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಲಾಕ್ ಡೌನ್ ನಂತರದಲ್ಲೂ ಪರಿಸ್ಥಿತಿ ಬದಲಾಗಿಲ್ಲ. ಇಂತಹ ಕರಕುಶಲಕಾರರಿಗೆ ಹಾಗೂ ಅವರ ಕಲೆಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಂತಹ ಸಂಸ್ಥೆಗಳು ಒಳ್ಳೆಯ ಕಾರ್ಯವನ್ನು ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಸಕಾರಾತ್ಮಕವಾಗಿ ಬದಲಾಗುವ ಮೂಲಕ ನಿರೀಕ್ಷೆಯಿದ್ದು, ಕಲಾವಿದರುಗಳಿಗೆ ಒಳ್ಳೆಯ ದಿನಗಳು ಮರಳಲಿವೆ" ಎಂದು ಆಶಿಸಿದರು.

ಈ ಕಲಾವಸ್ತು ಪ್ರದರ್ಶನ ಹಾಗೂ ಮೇಳದಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್ಗಳಲ್ಲಿ ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ನಿಮ್ಮ ಮನೆಯ ಗಾರ್ಡನ್ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್ ಲೂಮ್ ಸ್ಯಾರಿಯನ್ನು ಸೆಲೆಕ್ಟ್ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ.

ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳ ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂಥ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುಲಿವೆ.












Click it and Unblock the Notifications