ಬೆಂಗಳೂರು: ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವು, ಆಗಿದ್ದೇನು?
ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನಲ್ಲಿ ವಿದ್ಯುತ್ ಸ್ಪರ್ಶದಿಂದ ಈ ಹಿಂದೆ ತಾಯಿ ಮಗು ಸಾವಾಗಿತ್ತು. ಇದೀಗ ವರ್ತೂರಿನಲ್ಲೂ ವಿದ್ಯುತ್ ತಂತಿ ಸ್ಪರ್ಶದಿಂದ ಹತ್ತು ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಬೆಂಗಳೂರಿನ ವರ್ತೂರಿನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್ ಒಂದರಲ್ಲಿ ಗುರುವಾರ ಸಂಜೆ ವಿದ್ಯುತ್ ಸ್ಪರ್ಶದಿಂದ 10 ವರ್ಷದ ಬಾಲಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಆಸ್ತಿ ನಿರ್ವಹಣಾ ಏಜೆನ್ಸಿಯೇ ಕಾರಣ ಎಂದು ವಸತಿ ಸಮುಚ್ಚಯದ ನಿವಾಸಿಗಳು ಆರೋಪಿಸಿದ್ದಾರೆ.

ಈ ಸಾವಿನ ಘಟನೆ ಹಾಗೂ ನಿರ್ಲಕ್ಷ್ಯ ವಿರುದ್ಧ ನಿವಾಸಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಸದ್ಯ ಪ್ರಕರಣವು ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸಾವಿನ ಕುರಿತು ತನಿಖೆ ಆರಂಭವಾಗಿದೆ.
ಮೃತಳನ್ನು 10 ವರ್ಷದ ಬಾಲಕಿಯನ್ನು ಮಾನ್ಯ ಎಂದು ಗುರುತಿಸಲಾಗಿದೆ. ವರ್ತೂರಿನ ಪ್ರೆಸ್ಟೀಜ್ ಲೇಕ್ಸೈಡ್ ಹ್ಯಾಬಿಟೇಟ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ 7.30ರ ಸುಮಾರಿಗೆ ಬಾಲಕಿಗೆ ವಿದ್ಯುತ್ ಸ್ಪರ್ಶವಾಗಿದದೆ. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಸಹಿತ ದುರದೃಷ್ಟವಶಾತ್ ಬದುಕುಳಿಯಲಿಲ್ಲ.
ಸ್ವಿಮ್ಮಿಂಗ್ ಫೂಲ್ ಬಳಿ ಅವಘಡ
ಎಂದಿನಂತೆ ಬಾಲಕಿ ಗುರುವಾರ ಸಂಜೆ ಸಹಿತ ಅಪಾರ್ಟ್ಮೆಂಟ್ನ ನಲ್ಲಿ ಸಂಚರಿಸಿದ್ದಾಳೆ. ಈ ವೇಳೆ ಸ್ವಿಮ್ಮಿಂಗ್ ಪೂಲ್ ಸಮೀಪವೇ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿ ಶಾಕ್ಗೆ ಒಳಗಾಗಿದ್ದಾರೆ. ವಿದ್ಯುತ್ ತಂತಿ ಸ್ಪರ್ಶಿಸುತ್ತಿದ್ದಂತೆ ಬಾಲಕಿ ಈಜುಕೊಳಕ್ಕೆ ಬಿದ್ದಿದ್ದಾಳೆ. ಸ್ಥಳೀಯರು ಕೂಡಲೇ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ, ಅಷ್ಟರಲ್ಲಾಗಲೇ ಬಾಲಕಿ ಅಸುನೀಗಿದ್ದರು ಎನ್ನಲಾಗಿದೆ.
ಈಜುಕೊಳದ ಬಳಿ ವಿದ್ಯುತ್ ಅವಘಡ ಸಂಭವಿಸುತ್ತಿದೆ ಎಂದು ಹಲವು ಬಾರಿ ದೂರು ನೀಡಿದರೂ ನಿರ್ವಹಣಾ ಸಂಸ್ಥೆ ಸರಿಪಡಿಸಿಲ್ಲ. ಈ ನಿರ್ಲಕ್ಷ್ಯದಿಂದಲೇ ಇಂದು ದೊಡ್ಡ ಅವಘಡ ನಡೆಯಲು ಕಾರಣವಾಗಿದೆ ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಆರೋಪಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಬಾಲಕಿಯ ಸಾವಿಗೆ ಕಾರಣರಾದ ನಿರ್ವಹಣಾ ವ್ಯವಸ್ಥಾಪಕರು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಪ್ರತಿಭಟನೆ ನಡೆಸಿ ಪೊಲೀಸರಿಗೆ ಒತ್ತಾಯಿಸಿದರು.
ಬಾಲಕಿ ಸಾವಿನ ಕುರಿತು ಮೃತಳ ಪೋಷಕರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ದೂರು ನೀಡಿದ್ದಾಗ ವಿದ್ಯುತ್ ನಿರ್ವಹಣಾಕಾರರುಎಚ್ಚೆತ್ತು ಸೂಕ್ತ ಸೇವೆಯ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೊಪಿಸಿದ್ದಾರೆ. ಈ ದುರಂತಕ್ಕೆ ಆಸ್ತಿ ನಿರ್ವಹಣಾ ಏಜೆನ್ಸಿಯೇ ಹೊಣೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ನಿಖರ ಕಾರಣ ಏನೆಂಬುದು ತಿಳಿದು ಬರಲಿದೆ ಎಂದು ಪ್ರಾಪರ್ಟಿ ಮಾಲೀಕರು ತಿಳಿಸಿದರು.
ಈ ಹಿಂದೆ ವಿದ್ಯುತ್ ತಂತಿ ತಗುಲಿ ತಾಯಿ ಮಗು ಸಾವಿಗೀಡಾದ ಬಳಿಕ ಬೆಸ್ಕಾಂ ಅಭಿಯಾನ ಹಮ್ಮಿಕೊಂಡಿತ್ತು. ನಗರದಲ್ಲಿ ಸಾವಿರಾರು ಅಪಾಯಕಾರಿ ಸ್ಥಳಗಳನ್ನು ಗುರುತಿಸಿದ್ದು, ಅವುಗಳ ದುರಸ್ತಿ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದೆ.












Click it and Unblock the Notifications