ಬೆಂಗಳೂರು: ಸಿಗರೇಟಿಗೆ 15 ರೂ.ಕೊಡದಿದ್ದಕ್ಕೆ ಇಬ್ಬರ ಹತ್ಯೆ!
ಬೆಂಗಳೂರು, ಜೂನ್ 15: ಅಂಗಡಿಯಲ್ಲಿ ಸಿಗರೇಟ್ ಕೊಂಡು, ಅದಕ್ಕೆ ನೀಡಬೇಕಿದ್ದ 15 ರೂಪಾಯಿಯನ್ನು ಕೊಡುವುದಿಲ್ಲ ಎಂದಿದ್ದಕ್ಕಾಗಿ ಓರ್ವ ವ್ಯಕ್ತಿ ಮತ್ತು ಆತನ ಸಹೋದರನನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆಜಿ ಹಳ್ಳಿ ಸಮೀಪದ ಗೋವಿಂದಪುರ ಮುಖ್ಯರಸ್ಥೆಯ ವೀರಣ್ಣಗುಡ್ಡೆಯಲ್ಲಿ ಈ ಘಟನೆ ನಡೆಸಿದೆ. ಮೃತರನ್ನು ಅಮಿನ್(30) ಮತ್ತು ಮತಿನ್(32) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಸುಮಾರು 7:30 ರ ಸುಮಾರಿಗೆ ಅಲಿ ಎಮಬುವವರ ಅಂಗಡಿಗೆ ಬಂದಿದ್ದ ಅಮಿನ್ ಸಿಗರೇಟ್ ಕೊಡುವಂತೆ ಕೇಳಿದ್ದಾನೆ. ಸಿಗರೇಟ್ ತೆಗೆದುಕೊಂದ ನಂತರ ಹಣ ಪಾವತಿಸದೆ ಹೊರಟಿದ್ದಾನೆ. ಈ ಬಗ್ಗೆ ಅಲಿ, ಅಮಿನ್ ನನ್ನು ವಿಚಾರಿಸಿದ್ದಾನೆ. ಮತ್ತೆ ಯಾವಾಗಲಾದರೂ ಹಣ ಪಾವತಿಸುತ್ತೇನೆ ಎಂದು ಹೇಳಿ ಅಮಿನ್ ಅಲ್ಲಿಂದ ಕಾಲ್ಕಿಳುವ ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ. ನಂತರ ಅಲಿ ಮೇಲೆ ಹಲ್ಲೆ ನಡೆಸಿ ಅಮಿನ್ ಪರಾರಿಯಾಗಿದ್ದಾನೆ.

ಇದರಿಂದ ಕುಪಿತನಾದ ಅಲಿ ತನ್ನ ಬೆಂಬಲಿಗರೊಂದಿಗೆ ಬಂದು ಅಮಿನ್ ನನ್ನು ಹುಡುಕಿ ಮತ್ತೆ ದಾಳಿ ನಡೆಸಿದ್ದಾನೆ. ಸಂದರ್ಭದಲ್ಲಿ ಅಮಿನ್ ನನ್ನು ಕಾಪಾಡಲು ಬಂದ ಆತನ ಸಹೋದರ ಮತಿನ್ ಮೇಲೆಯೂ ದಾಳಿ ನಡೆದಿದ್ದು, ಆತನ ಮೇಲೆ ನಡೆದ ಮಾರಣಾಂತಿಕ ದಾಳಿಯಿಂದ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಅಮಿನ್ ನನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಆತ ಅದಾಗಲೇ ಮೃತಪಟ್ಟಿದ್ದ. ಅಮಿನ್ ಮಾದಕ ದ್ರವ್ಯ ವ್ಯಸನಿಯಾಗಿದ್ದು, ಆತನ ವಿರುದ್ಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಿದ್ದವು ಎಂದು ಪೊಲೀಸರೇ ತಿಳಿಸಿದ್ದಾರೆ.
ಸದ್ಯಕ್ಕೆ ಅಲಿ ಮತ್ತು ತಂಡದ ವಿರುದ್ಧ ಕೆಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.











Click it and Unblock the Notifications