ಬಿಡಿಎ ಕಚೇರಿಗೆ ಹೋಗಲು ಕೆಲವು ನಿಯಮಗಳು!
ಬೆಂಗಳೂರು, ಜೂ.25: ಲೋಕಾಯುಕ್ತ ಪೊಲೀಸರ ದಾಳಿ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಎಚ್ಚೆತ್ತುಕೊಂಡಿದೆ. ಇನ್ನು ಮುಂದೆ ಪ್ರತಿಯೊಬ್ಬ ಸಿಬ್ಬಂದಿ ಮತ್ತು ಸಾರ್ವಜನಿಕರು ಬಿಡಿಎ ಆವರಣ ಪ್ರವೇಶಿಸುವ ಮುನ್ನ ನೋಂದಣಿ ಪುಸ್ತಕದಲ್ಲಿ ದಾಖಲಾತಿ ಮಾಡಿ ಪ್ರವೇಶಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಕಚೇರಿ ಪ್ರವೇಶಿಸುವ ಮುನ್ನ ಐಡಿ ಕಾರ್ಡ್ನ್ನು ಧರಿಸಿ ಪ್ರವೇಶಿಸಬೇಕು ಮತ್ತು ತಮ್ಮ ಬಳಿ ಇರುವ ಹಣದ ವಿವರವನ್ನು ಬಿಡಿಎ ಪೊಲೀಸರ ಬಳಿ ನಮೂದಿಸಿ ಹೋಗಬೇಕು ಎಂದು ಸಿಬ್ಬಂದಿಗಳಿಗೆ ಬಿಡಿಎ ಆಯುಕ್ತ ಟಿ ಶ್ಯಾಮ್ ಭಟ್ ಅವರು ನಿರ್ದೇಶನ ನೀಡಿದ್ದಾರೆ.
ಅಧಿಕಾರಿಗಳು ಊಟ ಹಾಗೂ ಕಾಫಿಗೆಂದು ಕಚೇರಿಯಿಂದ ಹೊರ ಹೋಗುವುದನ್ನು ಕಡಿಮೆ ಮಾಡಬೇಕು. ಅನಗತ್ಯವಾಗಿ ಕಚೇರಿಯಿಂದ ಹೊರಗೆ ಹೋಗುವಂತಿಲ್ಲ ಎಂದು ಆಯುಕ್ತರು ಸೂಚಿಸಿದ್ದಾರೆ.

ಸಾರ್ವಜನಿಕರು ಸಹ ಕಚೇರಿಯ ಗೇಟ್ನಲ್ಲಿ ನೀಡುವ ಚೀಟಿಯಲ್ಲಿ ತಾವು ಸಂಪರ್ಕಿಸುವ ಅಧಿಕಾರಿ ಸಿಬ್ಬಂದಿ ಹೆಸರು ನಮೂದಿಸಿ ಹೋಗಬೇಕು. ಹಿಂತಿರುಗುವ ವೇಳೆಯಲ್ಲಿ ಸಾರ್ವಜನಿಕರು ಪ್ರವೇಶದ ಪಡೆದ ಚೀಟಿಯಲ್ಲಿ ಸಂಪರ್ಕಿಸಿದ ಅಧಿಕಾರಿಯ ಸಹಿಯನ್ನು ಹಾಕಿ ಗೇಟ್ ಬಳಿಯಿರುವ ಸಿಬ್ಬಂದಿಗೆ ಚೀಟಿಯನ್ನು ನೀಡಿ ತೆರಳಬೇಕು ಎಂದು ಆಯುಕ್ತರು ಆದೇಶಿಸಿದ್ದಾರೆ.[ಅಧಿಕಾರಿಗಳೇ ಕನ್ನಡ ಕಲಿಯಿರಿ, ಇಲ್ಲವೇ ಹೊರಡಿ]
ನಾಲ್ಕು ದಿನಗಳ ಹಿಂದೆ ಲೋಕಾಯುಕ್ತ ಪೊಲೀಸರು ಬಿಡಿಎ ಮೇಲೆ ದಾಳಿ ಮಾಡಿ ದಾಖಲೆ ಇಲ್ಲದ ರು. 6 ಲಕ್ಷ ಹಣವನ್ನು ಅಧಿಕಾರಿಗಳಿಂದ ವಶಪಡಿಸಿಕೊಂಡಿದ್ದರು. ಆವರಣದಲ್ಲಿರುವ ಕ್ಯಾಂಟೀನ್ ಬಳಿ ಇದ್ದ ಹತ್ತಕ್ಕೂ ಹೆಚ್ಚು ಮಧ್ಯವರ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿನಾಕಾರಣ ಸ್ಥಳದಲ್ಲಿದ್ದಕ್ಕೆ ಎಚ್ಚರಿಕೆ ನೀಡಿದ್ದರು.












Click it and Unblock the Notifications