ಶಿವರಾಮ ಕಾರಂತ ಬಡಾವಣೆ ಭೂ ಮಾಲೀಕರ ಗಮನಕ್ಕೆ
ಬೆಂಗಳೂರಿನ ಡಾ. ಕೆ. ಶಿವರಾಮ ಕಾರಂತ ಬಡಾವಣೆ ಭೂ ಮಾಲೀಕರಿಗೆ ಬಿಡಿಎ ಸೂಚನೆಯೊಂದನ್ನು ನೀಡಿದೆ.
ಬೆಂಗಳೂರು, ಮಾರ್ಚ್ 08; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ. ಕೆ. ಶಿವರಾಮ ಕಾರಂತ ಬಡಾವಣೆ ಭೂ ಮಾಲೀಕರಿಗೆ ಸೂಚನೆಯೊಂದನ್ನು ನೀಡಿದೆ. ಪತ್ರಿಕಾ ಪ್ರಕಟಣೆ ಮೂಲಕ ಈ ಕುರಿತು ಜನರಿಗೆ ಮಾಹಿತಿ ನೀಡಿದೆ. 15/4/2023ರೊಳಗೆ ಈ ಕುರಿತು ಪ್ರಾಧಿಕಾರಕ್ಕೆ ಮನವಿ ಸಲ್ಲಿಕೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಬಿಡಿಎ ತನ್ನ ಪ್ರಕಟಣೆಯಲ್ಲಿ ಡಾ. ಕೆ. ಶಿವರಾಮಕಾರಂತ ಬಡಾವಣೆಯನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ರಚಿಸಲಾಗುತ್ತಿದ್ದು, ಭೂಮಾಲೀಕರಿಗೆ ನಗದು ಪರಿಹಾರ ಅಥವಾ 40:60 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳ ರೂಪದಲ್ಲಿ ಎಕರೆ ಒಂದಕ್ಕೆ 9583 ಚ.ಅಡಿಗಳಂತೆ ಭೂಪರಿಹಾರ ಲೆಕ್ಕಚಾರ ಮಾಡಿ ಪರಿಹಾರ ನೀಡಲು ಆದೇಶವಾಗಿರುತ್ತದೆ ಎಂದು ಹೇಳಿದೆ.

ಭೂಮಾಲೀಕರು, ಮೇಲ್ಕಂಡ ಆಯ್ಕೆಗಳ ಪೈಕಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರವಾಗಿ ಪಡೆಯಲು ಇಚ್ಛೆ ವ್ಯಕ್ತಪಡಿಸಿ, ಸಂಬಂಧಪಟ್ಟ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದಲ್ಲಿ, ಅಂತಹ ಭೂಮಾಲೀಕರಿಗೆ ಭೂಸ್ವಾಧೀನವಾದ ಜಮೀನಿನ ವಿಸ್ತೀರ್ಣಕ್ಕೆ ನೀಡಬಹುದಾದ ಅಭಿವೃದ್ಧಿಪಡಿಸಿದ ನಿವೇಶನಗಳ ಬಾಬು ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಆದ್ದರಿಂದ, ಐತೀರ್ಪು ಅನುಮೋದನೆಯಾದ ಪ್ರಕರಣಗಳಲ್ಲಿ ಭೂಸ್ವಾಧೀನ ಕಾಯ್ದೆ 1894ರ ಕಲಂ 12(2)ರಡಿ ನೋಟೀಸ್ ನೀಡಿರುವ ಪ್ರಕರಣಗಳಲ್ಲಿ ಭೂಮಾಲೀಕರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ, ವಿಶೇಷ ಭೂಸ್ವಾಧೀನಾಧಿಕಾರಿಗಳು, ಡಾ|| ಕೆ. ಶಿವರಾಮಕಾರಂತ ಬಡಾವಣೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರಿಗೆ ತಮ್ಮ ಮನವಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ಈಗಾಗಲೇ ಕಾಳತಮ್ಮನಹಳ್ಳಿ, ಗಾಣಿಗರಹಳ್ಳಿ, ರಾಮಗೊಂಡನಹಳ್ಳಿ, ಗುಣಿ ಅಗ್ರಹಾರ, ಮೇಡಿ ಅಗ್ರಹಾರ, ವೀರಸಾಗರ, ದೊಡ್ಡಬೆಟ್ಟಹಳ್ಳಿ ಮತ್ತು ಬ್ಯಾಲಕೆರೆ ಗ್ರಾಮಗಳಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿರುತ್ತದೆ. ಅಭಿವೃದ್ಧಿಪಡಿಸಿದ ನಿವೇಶನಗಳ ಭೂಪರಿಹಾರವನ್ನು ಆಯ್ಕೆ ಮಾಡಿಕೊಂಡ ಉಳಿಕೆ ಭೂಮಾಲೀಕರಿಗೆ ಆದ್ಯತೆಯ ಮೇರೆಗೆ ಪ್ರಮಾಣ ಪತ್ರಗಳನ್ನು ಅವರ ವಿಳಾಸಕ್ಕೆ ತಲುಪಿಸಲಾಗುವುದು ಹಾಗೂ ಭೂಮಾಲೀಕರಿಗೆ ಬಡಾವಣೆ ರಚನೆಯ ನಂತರ ಆದ್ಯತೆಯ ಮೇರೆಗೆ ನಿವೇಶನಗಳನ್ನು ನೋಂದಾಯಿಸಿ ಕೊಡಲಾಗುವುದು ಎಂದು ತಿಳಿಸಲಾಗಿದೆ.
ಅಭಿವೃದ್ಧಿಪಡಿಸಿದ ನಿವೇಶಗಳ ಭೂಪರಿಹಾರಕ್ಕಾಗಿ ದಿನಾಂಕ 15/04/2023ರ ಒಳಗಾಗಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಕೋರಲಾಗಿದೆ. ಸದರಿ ದಿನಾಂಕದ ಒಳಗಾಗಿ ಮನವಿ ಸಲ್ಲಿಸದೇ ಇರುವ ಪ್ರಕರಣಗಳಲ್ಲಿ, ಐತೀರ್ಪಿನಲ್ಲಿ ನಿಗದಿಪಡಿಸಿರುವ ನಗದು ಭೂಪರಿಹಾರವನ್ನು ಮಾನ್ಯ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ನಿಯಮಾನುಸಾರ ಜಮಾ ಮಾಡಲಾಗುವುದು ಎಂದು ಭೂಮಾಲೀಕರ ಮಾಹಿತಿಗಾಗಿ ಇದನ್ನ ಪ್ರಕಟಿಸಲಾಗಿದೆ ಎಂದು ಬಿಡಿಎ ಹೇಳಿದೆ.
ನಿರ್ಮಾಣಕ್ಕೆ ಚಾಲನೆ; ಡಾ. ಕೆ. ಶಿವರಾಮ ಕಾರಂತ ಬಡಾವಣೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವದ ಯೋಜನೆಯಾಗಿದೆ. ಆದರೆ ಬಡಾವಣೆ ಘೋಷಣೆ ಮಾಡಿದ ಬಳಿಕ ಹಲವಾರು ವಿವಾದಗಳು ಉಂಟಾಗಿ ಇದು ವಿವಿಧ ಕೋರ್ಟ್ಗಳ ಮೆಟ್ಟಿಲೇರಿದೆ. ಅಂತಿಮವಾಗಿ 2022ರ ಡಿಸೆಂಬರ್ನಲ್ಲಿ ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಬಡಾವಣೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರದ 17 ಗ್ರಾಮಗಳ 3546 ಎಕರೆ ಪ್ರದೇಶದಲ್ಲಿ 2600 ಕೋಟಿ ರೂ. ವೆಚ್ಚದಲ್ಲಿ 18 ತಿಂಗಳಿನಲ್ಲಿ 22 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುವ ಗುರಿಯನ್ನು ಬಿಡಿಎ ಹೊಂದಿದೆ. ಬಡಾವಣೆ ಭೂ ವಿವಾದದ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಮಿತಿಯೊಂದನ್ನು ರಚನೆ ಮಾಡಿ, ಬಡಾವಣೆ ನಿರ್ಮಾಣ ಮಾಡಲು ಅನುಮತಿಯನ್ನು ಕೊಟ್ಟಿದೆ.
ಹಾರೋಹಳ್ಳಿ, ಆವಲಹಳ್ಳಿ, ರಾಮಗೊಂಡನಹಳ್ಳಿ, ಕೆಂಪನಹಳ್ಳಿ, ಜಾರಕಬಂಡೆ ಕಾವಲ್, ವೀರಸಾಗರ, ದೊಡ್ಡಬೆಟ್ಟಹಳ್ಳಿ, ಶಾಮರಾಜಪುರ, ವಡೇರಹಳ್ಳಿ, ಮೇಡಿ ಅಗ್ರಹಾರ, ಬ್ಯಾಲಕೆರೆ, ಕಾಳತಮ್ಮನಹಳ್ಳಿ, ಗುಣಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ಲಕ್ಷ್ಮೀಪುರ, ಗಾಣಿಗರಹಳ್ಳಿ, ಕೆಂಪಾಪುರ ಗ್ರಾಮಗಳಲ್ಲಿ ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣವಾಗಲಿದೆ.











Click it and Unblock the Notifications