BDA: ಬೆಂಗಳೂರಿನ ಮಹತ್ವದ ಯೋಜನೆಗೆ ಹುಡ್ಕೋದಿಂದ ಸಿಕ್ಕಿತು ಸಾಲ
ಬೆಂಗಳೂರು, ಜನವರಿ 02: ಬೆಂಗಳೂರು ನಗರದ ಮಹತ್ವದ ಯೋಜನೆಯಾದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಶೀಘ್ರವೇ ಆರಂಭವಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಳ್ಳಲಿರುವ ಯೋಜನೆ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯ ವೆಚ್ಚ ಸುಮಾರು 27,000 ಕೋಟಿ ರೂ.ಗಳು.
73 ಕಿ. ಮೀ. ಉದ್ದದ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕಾರಣ ಮಾಡಿ, ಚಾಲನೆಗೊಳಿಸುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ಈಗಾಗಲೇ ಬಿಡಿಎ ಪ್ರಾಥಮಿಕ ಕಾರ್ಯವನ್ನು ಆರಂಭಿಸಿದೆ.

ರಾಜ್ಯ ಸರ್ಕಾರವೇ ಸಂಪೂರ್ಣ ಅನುದಾನದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಿದೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಅಗತ್ಯವಿರುವ ಶೇ 100ರಷ್ಟು ಅನುದಾನವನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೋ) ನೀಡಲಿದೆ. ಅನುದಾನಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಅಧಿಕೃತ ಒಪ್ಪಂದವಾಗುವುದು ಬಾಕಿ ಇದೆ.
ನಗರದ ಮಹತ್ವ ಯೋಜನೆ: ನಗರದಲ್ಲಿ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಬಹಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆದರೆ ವಿವಿಧ ಕಾರಣಕ್ಕೆ ಯೋಜನೆ ಜಾರಿಯಾಗಲೇ ಇಲ್ಲ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅನುಕೂಲವಾಗುವಂತೆ ಈಗ ಯೋಜನೆಯನ್ನು ರೂಪಿಸಲಾಗುತ್ತಿದೆ.
ಈ ಯೋಜನೆಗೆ 2,560 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಎರಡು ತಿಂಗಳಿನಲ್ಲಿ ಅನುದಾನದ ಒಪ್ಪಂದ ಮಾಡಿಕೊಂಡು ಕಾಮಗಾರಿ ಆರಂಭಿಸಲು ಬಿಡಿಎ ತಯಾರಿ ನಡೆಸಿದೆ. ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಮುಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬಿಡಿಎಗೆ ಗಡುವು ನೀಡಿದ್ದಾರೆ.
ಯೋಜನೆಯ ಭೂ ಸ್ವಾಧೀನಕ್ಕೆ ಹುಡ್ಕೋ 21,000 ಕೋಟಿ ಮತ್ತು ರಸ್ತೆ ನಿರ್ಮಾಣಕ್ಕೆ 6000 ಕೋಟಿ ರೂ. ಅನುದಾನ ನೀಡಲಿದೆ. ಬೆಂಗಳೂರು ನಗರದ ಎರಡು ದಶಕದ ಹಿಂದಿನ ಯೋಜನೆ ಜನವರಿ ಅಂತ್ಯ ಅಥವ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ ಎಂದು ಬಿಡಿಎ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಬಿಸಿ ಯೋಜನೆ 73 ಕಿ. ಮೀ. ರಸ್ತೆಯಾಗಿದೆ. 100 ಮೀಟರ್ ಅಗಲದ ಈ ರಸ್ತೆ ತುಮಕೂರು ರಸ್ತೆ-ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. 77 ಗ್ರಾಮಗಳ ಮೂಲಕ ಹಾದು ಹೋಗುವ ರಸ್ತೆ ಹೆಸರಘಟ್ಟ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ವೈಟ್ಫೀಲ್ಡ್, ಹೊಸೂರು ಮೂಲಕ ಸಾಗಲಿದೆ.
ಬಿಡಿಎ ಈಗಾಗಲೇ ಈ ಯೋಜನೆಯ ಭೂ ಸ್ವಾಧೀನಕ್ಕೆ 8 ಕೆಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಭೂ ಮಾಲೀಕರ ಜೊತೆ ಅಧಿಕಾರಿಗಳು ಸಭೆಗಳನ್ನು ನಡೆಸುತ್ತಿದ್ದು, ಪರಿಹಾರದ ಕುರಿತು ಅವರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ರಸ್ತೆ ನಿರ್ಮಾಣದ ಬಳಿಕ ಟೋಲ್ ಸಂಗ್ರಹ ಮಾಡಿ ಅನುದಾನ ಪಡೆದ ಸಾಲವನ್ನು ತೀರಿಸಲಾಗುತ್ತದೆ.
ಈ ಯೋಜನೆಗೆ ಭೂ ಸ್ವಾಧೀನ ಪೂರ್ಣಗೊಂಡ ಬಳಿಕ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆ ಅಕ್ಕಪಕ್ಕದಲ್ಲಿ ಲೇಔಟ್ಗಳನ್ನು ನಿರ್ಮಾಣ ಮಾಡಿ 50 ಸಾವಿರ ಸೈಟುಗಳನ್ನು ಮಾರಾಟ ಮಾಡಿ, ಅದರಿಂದಲೂ ಆದಾಯ ಸಂಗ್ರಹ ಮಾಡಲು ಬಿಡಿಎ ಯೋಜನೆ ರೂಪಿಸಿದೆ.
ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳಲು ಮಾಲೀಕರಿಗೆ ಭೂ ಸ್ವಾಧೀನ ಕಾಯ್ದೆ, 1984ರ ಅಡಿ ನೋಟಿಸ್ ನೀಡಲಾಗುತ್ತಿದೆ. ಯೋಜನೆಗೆ ಭೂಮಿ ನೀಡುವ ರೈತರು 2013ರ ನಿಯಮಗಳ ಅನ್ವಯ ಪರಿಹಾರಕ್ಕಾಗಿ ಬೇಡಿಕೆಯನ್ನು ಸಲ್ಲಿಸಬಹುದು. ಸುಮಾರು 4 ಸಾವಿರ ಭೂ ಮಾಲೀಕರು ಯೋಜನೆ ವ್ಯಾಪ್ತಿಯಲ್ಲಿ ಇದ್ದಾರೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.












Click it and Unblock the Notifications