ಸಾಲುಮರದ ತಿಮ್ಮಕ್ಕಗೆ ಬಿಡಿಎಯಿಂದ 50X80 ಅಳತೆಯ ನಿವೇಶನ ಹಂಚಿಕೆ
ಬೆಂಗಳೂರು, ಜೂನ್ 21: ಸಾಲು ಮರದ ತಿಮ್ಮಕ್ಕ ಯಾರಿಗೆ ತಾನೇ ತಿಳಿದಿಲ್ಲ. ಪುಟ್ಟ ಮಕ್ಕಳಿಂದ ರಾಷ್ಟ್ರದ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಲು ಮರದ ತಿಮ್ಮಕ್ಕನ ಹೆಸರು ಪಸರಿಸಿದೆ. ಪರಿಸರ ಉಳಿವಿಗಾಗಿ ಮರಗಳನ್ನೇ ಮಕ್ಕಳಂತೆ ಸಾಕಿದಾಕೆ. ಆ ಪರಿಸರ ಯಜ್ಞವೇ ಸಾಲು ಮರದ ತಿಮ್ಮಕ್ಕನ್ನು ಸಲಹುತ್ತಿದೆ. ಇದೀಗ ಶತಾಯುಷಿ ಸಾಲುಮರದ ತಿಮ್ಮಕ್ಕಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50X80 ಅಳತೆಯ ನಿವೇಶನವನ್ನು ಬುಧವಾರ ನೀಡಲಾಗಿದೆ.
ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತರಾದ ರಾಜೇಶ್ ಗೌಡ ಅವರು ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರ ಮಾಡಿದ್ದಾರೆ. ಬಿಡಿಎ ವತಿಯಿಂದ ಸಿಕ್ಕ ನಿವೇಶನವನ್ನು ಪಡೆದಿರುವ ಸಾಲು ಮರದ ತಿಮ್ಮಕ್ಕ ತನ್ನ ಇಳಿ ವಯಸ್ಸಿನಲ್ಲಿ ಮನೆಯನ್ನು ಕಟ್ಟುವ ಬಯಕೆಯನ್ನು ಸಹ ಹೊಂದಿದ್ದಾರೆ. ಸಾಲು ಮರದ ತಿಮ್ಮಕ್ಕ ನಿವೇಶನವನ್ನು ಪಡೆದು ಸಂತಸವನ್ನು ಎಸ್.ಆರ್. ವಿಶ್ವನಾಥ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಬುಧವಾರ ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್ನಲ್ಲಿರುವ ನಿವೇಶನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ನಂತರ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಪರಿಸರ ಪ್ರೇಮಿ, ಶತಾಯುಷಿ ತಿಮ್ಮಕ್ಕರನ್ನು ಸನ್ಮಾನಿಸಿ ನಿವೇಶನದ ನೋಂದಣಿ ಪತ್ರವನ್ನು ವಿತರಿಸಿದರು.
ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು
ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ನನಗೆ ಬಿಡಿಎ ವತಿಯಿಂದ ನಿವೇಶನವನ್ನು ನೀಡಿರುವುದಕ್ಕೆ ಸಂತಸವಾಗುತ್ತಿದೆ. ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಲ್ಲಿ ಪರಿಸರ ಕಾಳಜಿ ಮೂಡುವಂತೆ ಮಾಡಬೇಕೆಂದು ಹಾರೈಸಿದರು.
ತಿಮ್ಮಕ್ಕನಿಗೆ ನಿವೇಶನ ನೀಡಿರುವುದು ಸಂತೋಷ ತಂದಿದೆ
ಇದೇ ವೇಳೆ ಮಾತನಾಡಿದ ವಿಶ್ವನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆ ಮೇರೆಗೆ ಬಿಡಿಎ ವತಿಯಿಂದ ನಮ್ಮೆಲ್ಲರ ಮಾರ್ಗದರ್ಶಿಯಾಗಿರುವ ಸಾಲು ಮರದ ತಿಮ್ಮಕ್ಕ ಅವರಿಗೆ ನಿವೇಶನ ನೀಡಿರುವುದು ಸಂತೋಷ ತಂದಿದೆ ಎಂದರು.
ವೃಕ್ಷಮಾತೆಗೆ ಒಲಿದ ಸಾವಿರಾರು ಪ್ರಶಸ್ತಿ ಪುರಸ್ಕಾರ
ಸಾಲು ಮರದ ತಿಮ್ಮಕ್ಕ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ಬಿಕ್ಕಲುಚಿಕ್ಕಯ್ಯರನ್ನು ಮದುವೆಯಾಗಿದ್ದ ತಿಮ್ಮಕ್ಕನಿಗೆ ಮಕ್ಕಳಾಗಿರಲಿಲ್ಲ. ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ನೆಟ್ಟು ತಮ್ಮ ಮಕ್ಕಳೆಂತೆ ಪೋಷಿಸಿ ಹೆಮ್ಮರವಾಗಿಸಿದ್ದರು. ವೃಕ್ಷ ಮಾತೆ , ನಾಡೋಜ ನಾಲು ಮರದ ತಿಮ್ಮಕ್ಕನಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50X80 ಅಳತೆಯ ನಿವೇಶನ
ಸಾಲು ಮರದ ತಿಮ್ಮಕ್ಕ ತನ್ನ ಸಾಕು ಮಗ ಉಮೇಶ್ ಜೊತೆಯಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಸಾಕು ಮಗ ಉಮೇಶ್ ಜೊತೆಯಲ್ಲಿ ಜೂನ್ 21ರಂದು ಸಿಎಂ ಮನೆಗೆ ತೆರಳಿದ್ದರು. ಈ ವೇಳೆ ಸಿಎಂ ಜೊತೆ ಉಭಯ ಕುಶಲೋಪರಿಯನ್ನು ವಿಚಾರಿಸಿದರು. ತಿಮ್ಮಕ್ಕನ ವಾಸಕ್ಕೆ ಬೆಂಗಳೂರಿನಲ್ಲಿ ಸೂಕ್ತ ನಿವೇಶನ ಇಲ್ಲದಿರುವುದನ್ನು ಮನಗಂಡ ಸಿಎಂ ತಕ್ಷಣವೇ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ಗೆ ಕರೆಯನ್ನು ಮಾಡಿದ್ದಾರೆ. ವಿಶ್ವನಾಥ್ ಜೊತೆ ಮಾತನಾಡಿ ಸಾಲು ಮರದ ತಿಮ್ಮಕ್ಕನಿಗೆ ಬೆಂಗಳೂರಿನಲ್ಲಿ ನಿವೇಶನವನ್ನು ನೀಡುವಂತೆ ತಿಳಿಸಿದ್ದಾರೆ. ಇದರಿಂದಾಗಿ ಶತಾಯುಷಿಯಾಗಿರುವ ಸಾಲುಮರದ ತಿಮ್ಮಕ್ಕನಿಗೆ ಇಳಿವಯಸ್ಸಿನಲ್ಲಿ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50X80 ಅಳತೆಯ ನಿವೇಶನವನ್ನು ಮಂಜೂರು ಮಾಡಿದೆ. ನಿವೇಶನದ ನೊಂದಣಿ ಪತ್ರದೊಂದಿದೆ ಎಸ್ಆರ್ ವಿಶ್ವನಾಥ್ ಹಸ್ತಾಂತರಿಸಿದ್ದಾರೆ.
ಬಿಡಿಎ ಅಧ್ಯಕ್ಷ ಎಸ್. ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರು ಬಿಡಿಎ ವತಿಯಿಂದ ನೀಡಲಾದ ನಿವೇಶನದ ನೋಂದಣಿ ಪತ್ರವನ್ನು ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಆನಂದ್, ಉಪಕಾರ್ಯದರ್ಶಿ ಡಾ.ಮಧು, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.
Recommended Video