ಕೈ ತಪ್ಪಿದ ಸಚಿವ ಸ್ಥಾನ: ಪಕ್ಷ ತೊರೆಯುವ ಸೂಚನೆ ನೀಡಿದ ಬಿಸಿ.ಪಾಟೀಲ್
ಬೆಂಗಳೂರು, ಜೂನ್ 08: ಸಚಿವ ಸಂಪುಟ ವಿಸ್ತರಣೆ ದಿನಾಂಕ ಅಂತಿಮಗೊಳ್ಳುತ್ತಿದ್ದಂತೆ ಕಾಂಗ್ರೆಸ್ ನ ಅತೃಪ್ತ ಶಾಸಕರ ಅಸಮಾಧಾನ ಬುಗಿಲೆದ್ದಿದೆ.
ಇಬ್ಬರು ಪಕ್ಷೇತರ ಶಾಸಕರ ಜೊತೆ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದೆ. ಹಾಗಾಗಿ ಸಚಿವಾಕಾಂಕ್ಷಿಗಳಾಗಿದ್ದ ಶಾಸಕರಿಗೆ ಅತೃಪ್ತಿ ಹೆಚ್ಚಾಗಿದೆ.
ಸರ್ಕಾರ ರಚನೆ ಆದಾಗಿನಿಂದಲೂ ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದ ಬಿ.ಸಿ.ಪಾಟೀಲ್ ಅವರು ಬಂಡಾಯ ಹೊರಹಾಕಿದ್ದು, ಪಕ್ಷವನ್ನು ಬಿಡುವ ಸೂಚನೆಯನ್ನು ನೀಡಿದ್ದಾರೆ.
ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್ ಅವರು, ಕಾಂಗ್ರೆಸ್ ನಾಯಕರೇ ಬಂದು ಸಚಿವ ಸ್ಥಾನ ನೀಡಿದರೂ ನನಗೆ ಈಗ ಬೇಕಾಗಿಲ್ಲ, ಮಾಡುವ ಅವಮಾನ ಈಗಾಗಲೇ ಮಾಡಿಬಿಟ್ಟಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷ ಬಿಡುವ ಸೂಚನೆ ನೀಡಿದ ಬಿ.ಸಿ.ಪಾಟೀಲ್
ಪಕ್ಷ ಬಿಡುವ ಬಗ್ಗೆ ಸೂಚ್ಯವಾಗಿ ಮಾತನ್ನಾಡಿದ ಬಿ.ಸಿ.ಪಾಟೀಲ್, ಸೂಕ್ತ ಸಮಯದಲ್ಲಿ ಸೂಕ್ತವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

'ಹಿರಿತನದ ಹೆಸರಲ್ಲಿ 15 ಮಂದಿ ಸಚಿವರಾಗುತ್ತಾರೆ'
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿರಿಯರು ಎಂಬ ಹೆಸರಿನಲ್ಲಿ 15 ಮಂದಿ ಸಚಿವರಾಗಲು ಸಿದ್ಧರಾಗಿ ನಿಂತುಬಿಡುತ್ತಾರೆ. ಉಳಿದವರೆಲ್ಲರೂ ಸ್ಪೇರ್ ಪಾರ್ಟ್ಸ್ಗಳಂತೆ ಎಂದು ಸಿಟ್ಟಿನಿಂದಲೇ ಹೇಳಿದ ಅವರು, ರಾಮಲಿಂಗಾ ರೆಡ್ಡಿ ಮಾತ್ರವನ್ನೇ ಏಕೆ ಬೊಟ್ಟು ಮಾಡಲಿ ಹೇಳಲಿ ಎಲ್ಲರದ್ದೂ ಅದೇ ಕತೆಯೇ ಎಂದು ಹಿರಿಯನ್ನು ಅವರು ದೂರಿದರು.

'ನನಗೆ ಸಚಿವ ಸ್ಥಾನ ಕೊಡುವ ಭರವಸೆ ನೀಡಿದ್ದರು'
ಬಹಳಷ್ಟು ಮಂದಿ ಪದೇ-ಪದೇ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ, ಹೀಗಾದರೆ ನನ್ನಂತವರು ಏನು ಮಾಡಬೇಕು, ಕಳೆದ ಬಾರಿ ಸಂಪುಟ ವಿಸ್ತರಣೆ ಮಾಡಿದಾಗ ನನ್ನನ್ನು ಕರೆದು ಮಾತನಾಡಿ, ಸಚಿವ ಸ್ಥಾನದ ಭರವಸೆ ನೀಡಿದ್ದರು. ನಾನು ನಿರೀಕ್ಷೆಯಲ್ಲಿದೆ ಆದರೆ ವರಿಷ್ಠರು ಮೋಸ ಮಾಡಿದ್ದಾರೆ ಎಂದು ಬಿ.ಸಿ.ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.

ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ: ಬಿ.ಸಿ.ಪಾಟೀಲ್
ತೋಳ ಬಂತು ತೋಳ ಕತೆಯಂತೆ ಆಗಿದೆ. ಈಗಾಗಲೇ ಸಾಕಷ್ಟು ಅವಮಾನ ಮಾಡಿದ್ದಾರೆ. ಇನ್ನು ಸಂಪುಟ ಸೇರಬಾರದು ಎಂದು ನಾನೇ ನಿರ್ಣಯ ಮಾಡಿದ್ದೇನೆ, ಇನ್ನು ಮುಂದೆಯೂ ಸಚಿವ ಸ್ಥಾನ ಬೇಡುವುದಿಲ್ಲ, ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ, ಅವರೇ ಬಂದರೂ ಒಪ್ಪಿಕೊಳ್ಳುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.












Click it and Unblock the Notifications