Get Updates
Get notified of breaking news, exclusive insights, and must-see stories!

ಸಾರಿಗೆ ನೌಕರರ ಜೊತೆಗೆ ಮಾತಾಡಿ ಮುಷ್ಕರ ತಪ್ಪಿಸಿ: ಸಿಎಂ ಬಸವರಾಜ ಬೊಮ್ಮಾಯಿಗೆ ಬಸ್ ಪ್ರಯಾಣಿಕರ ವೇದಿಕೆಯಿಂದ ಪತ್ರ

ಮುಷ್ಕರಕ್ಕೆ ಕರೆ ನೀಡಿರುವ ಬೆನ್ನಲ್ಲೇ ಕಾರ್ಮಿಕ ಇಲಾಖೆ ಆಯುಕ್ತರು ರಾಜೀ ಸಂಧಾನ ಸಭೆಯನ್ನು ಆಯೋಜನೆ ಮಾಡಿದ್ದಾರೆ.

ಬೆಂಗಳೂರು, ಮಾರ್ಚ್ 17: ಸಾರಿಗೆ ನಿಗಮಗಳ ನೌಕರರು ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗುತ್ತದೆ. ಸಾರ್ವಜನಿಕರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ, ನಿಗಮವು ಮತ್ತಷ್ಟು ಅಸ್ತವ್ಯಸ್ತವಾಗುತ್ತದೆ ಎಂದು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.

ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಮಾರ್ಚ್ 24 ರಿಂದ ಮುಷ್ಕರಕ್ಕೆ ಕರೆ ನೀಡಿದೆ. ನೌಕರರ ಜಂಟಿ ಕ್ರಿಯಾ ಸಮಿತಿ ಮಾರ್ಚ್ 21 ರಿಂದಲೇ ಮುಷ್ಕರ ನಡೆಸುವುದಾಗಿ ಘೋಷಿಸಿದೆ. ಮಾರ್ಚ್ 22ರಂದು ಯುಗಾದಿ ಹಬ್ಬವಿರುವ ಕಾರಣ ಬಸ್ ಸೌಲಭ್ಯವಿಲ್ಲದೆ ಜನ ಪರದಾಡಬೇಕಾಗುತ್ತದೆ ಹೀಗಾಗಿ ಸರ್ಕಾರವು ಕಾರ್ಮಿಕರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಮಾಧಾನಕರ ನಿರ್ಣಯವನ್ನು ಕಂಡುಕೊಂಡು ಮುಷ್ಕರವನ್ನು ತಪ್ಪಿಸುವುದು ಅತ್ಯಗತ್ಯ ಎಂದು ಬಸ್ ಪ್ರಯಾಣಿಕರ ವೇದಿಕೆ ಮನವಿ ಮಾಡಿದೆ.

BBPV writes letter to CM Basavaraj regarding Transport workers call for indefinite strike

*ಪತ್ರದಲ್ಲೇನಿದೆ...?*

ಕರ್ನಾಟಕದ ಆರ್‌ಟಿಸಿ ನೌಕರರ ಸಂಘಗಳು ಮತ್ತೊಮ್ಮೆ ಮಾರ್ಚ್ 21 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ. ಇದು ಮತ್ತೊಂದು ಸುದೀರ್ಘ ಮುಷ್ಕರವಾಗಿ ಪ್ರಯಾಣಿಕರು ಪರದಾಡುವಂತಾಗುತ್ತದೆ ಮತ್ತು ನಿಗಮವು ಮತ್ತಷ್ಟು ಅಸ್ತವ್ಯಸ್ತವಾಗುತ್ತದೆ ಎಂಬ ಆತಂಕವಿದೆ.

2021 ರಲ್ಲಿ ನಡೆದ 14 ದಿನಗಳ ಮುಷ್ಕರ, ಮತ್ತು ಅದರಿಂದ ಪ್ರಯಾಣಿಕರಿಗೆ ಉಂಟಾದ ಕಷ್ಟವನ್ನು ನಾವು ಇನ್ನೂ ಮರೆತಿಲ್ಲ. ವಾಸ್ತವವಾಗಿ, 2020-21ರಲ್ಲಿ ಸಾರಿಗೆ ನಿಗಮದ ನೌಕರರ ಮುಷ್ಕರಕ್ಕೆ ಕಾರಣವಾದ ಅದೇ ಸಮಸ್ಯೆಗಳು ಪ್ರಸ್ತುತ ಮುಷ್ಕರಕ್ಕೂ ಮತ್ತೊಮ್ಮೆ ಕರೆ ನೀಡಿರುವುದು ಗಮನಾರ್ಹ ಸಂಗತಿ. ಹಲವು ಬಾರಿ ಭರವಸೆ ನೀಡಿ ಎರಡು ವರ್ಷಗಳಿಂದ ಈ ಬೇಡಿಕೆಗಳನ್ನು ಈಡೇರಿಸದೇ ಇರುವುದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾರಣವಾಗಿದೆ. ಇದು ವರ್ಷಾಂತ್ಯದ ಪರೀಕ್ಷೆಯ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ತೀವ್ರ ತೊಂದರೆಗೆ ಸಿಲುಕಿಸುತ್ತದೆ. ಸರ್ಕಾರವು ಕಾರ್ಮಿಕರ ಪ್ರತಿನಿಧಿಗಳೊಂದಿಗೆ ತುರ್ತಾಗಿ ಮಾತುಕತೆಗಳನ್ನು ನಡೆಸುವುದು ಮತ್ತು ಭರವಸೆಯಂತೆ ವೇತನ ಪರಿಷ್ಕರಣೆ ಕುರಿತು ಸಮಾಧಾನಕರ ನಿರ್ಣಯವನ್ನು ಕಂಡುಕೊಳ್ಳುವುದು ಮತ್ತು ಮುಷ್ಕರವನ್ನು ತಪ್ಪಿಸುವುದು ಅತ್ಯಗತ್ಯ.

ಬಿಎಂಟಿಸಿ ಸಿಬ್ಬಂದಿಗೆ ಸಿಗಬೇಕಿದ್ದ 4 ವರ್ಷಗಳಿಗೊಮ್ಮೆ ಆಗುವ ವೇತನ ಪರಿಷ್ಕರಣೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ನೀಡಿಲ್ಲ. ಕಡಿಮೆ ಪ್ರಯಾಣಿಕರು ಮತ್ತು ಅದರ ಪರಿಣಾಮವಾಗಿ ಆರ್ಥಿಕ ಸಂಕಷ್ಟವು ಸಂಬಳ ಪಾವತಿಯಲ್ಲಿ ದೀರ್ಘ ವಿಳಂಬಕ್ಕೆ ಕಾರಣವಾಯಿತು. ಇದು ಡಿಪೋ ಮಟ್ಟದಲ್ಲಿ ಈಗಾಗಲೇ ಇದ್ದ ಒತ್ತಡದ ಕೆಲಸದ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಿತು. ಫ್ರಂಟ್ ಲೈನ್ ನಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಸುರಕ್ಷತಾ ಪರಿಕರಗಳನ್ನು ನೀಡದಿರುವುದು, ಕೋವಿಡ್ ನಿಂದ ಸಾವನ್ನಪ್ಪಿದ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರವನ್ನು ಒದಗಿಸದಿರುವುದು 2020 ರಲ್ಲಿ ಹೆಚ್ಚಿನ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ 2020 ಮತ್ತು 2021 ರಲ್ಲಿಯೂ ಮುಷ್ಕರ ನಡೆಯಿತು.

BBPV writes letter to CM Basavaraj regarding Transport workers call for indefinite strike

ಕೆಲವು ಬೇಡಿಕೆಗಳಿಗೆ ಸರಕಾರ ಮತ್ತು ಆಡಳಿತ ಮಂಡಳಿ ಒಪ್ಪಿಗೆ ನೀಡಿದ್ದರೂ, ಬೇಡಿಕೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಮುಷ್ಕರ ನಡೆಸಿ ಕೆಲಸದಿಂದ ವಜಾಗೊಂಡ ಹಲವು ಸಿಬ್ಬಂದಿಗೆ ಮತ್ತೆ ಕೆಸಲ ನೀಡಿಲ್ಲ. ಕೆಲಸಕ್ಕೆ ಸೇರಿದವರಿಗೆ ಹಲವು ಷರತ್ತುಗಳನ್ನು ಹಾಕಲಾಗಿದೆ. ವೇತನ ಪರಿಷ್ಕರಣೆ ಬೇಡಿಕೆ ಕುರಿತು ಇದುವರೆಗೂ ಸಮಾಧಾನಕರ ಒಪ್ಪಂದಕ್ಕೆ ಬಂದಿಲ್ಲ. ಅವರ ವೇತನ ಪರಿಷ್ಕರಣೆ 3 ವರ್ಷಗಳ ಕಾಲ ಬಾಕಿ ಇದ್ದರೂ, 2016 ರಲ್ಲಿ ಪಡೆಯುತ್ತಿದ್ದ ವೇತನವನ್ನೇ ಇಂದೂ ಪಡೆಯುತ್ತಿದ್ದಾರೆ. ಪರಿಸ್ಥಿತಿ ಈಗ ಅಸಹನೀಯವಾಗುತ್ತಿದೆ. ಕಾರ್ಮಿಕರ ಸಂಘಗಳೊಂದಿಗೆ ತುರ್ತಾಗಿ ಇತ್ಯರ್ಥಕ್ಕೆ ಬರಲು ಸರ್ಕಾರ ಸಾಧ್ಯವಾದ ಎಲ್ಲಾ ಕ್ರಮಗಳನ್ನು ಈಗಲೇ ತೆಗೆದುಕೊಳ್ಳಬೇಕು.

ಯಾವುದೇ ಸಮಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ಮಾದರಿ ನೀತಿ ಸಂಹಿತೆ ತಕ್ಷಣವೇ ಜಾರಿಯಾಗಲಿದೆ. ಹೀಗಾದರೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವ ಪರಿಸ್ಥಿತಿಯಲ್ಲಿ ಸರಕಾರ ಇರುವುದಿಲ್ಲ. 2021 ರ 14 ದಿನಗಳ ಮುಷ್ಕರದ ಸಂದರ್ಭದಲ್ಲಿ ಉಪಚುನಾವಣೆಗಾಗಿ ನೀತಿ ಸಂಹಿತೆ ಪ್ರಾರಂಭವಾದಾಗ ನಾವು ಅದೇ ಪರಿಸ್ಥಿತಿಯನ್ನು ಎದುರಿಸಿದ್ದೇವೆ.

ಇಂದೂ ಸಹ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗುವ ಮುನ್ನವೇ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮವನ್ನು ನಾವು ಎದುರಿಸಬೇಕಾಗುತ್ತದೆ. ಮುಷ್ಕರ ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದು ನೌಕರರು, ನಿಗಮಗಳು ಮತ್ತು ಸರ್ಕಾರದ ನಡುವಿನ ನಂಬಿಕೆಯನ್ನು ಹಾಳುಮಾಡುತ್ತದೆ. ಮುಷ್ಕರವನ್ನು ತಡೆಯಲು, ಸರ್ಕಾರವು ಕಾರ್ಮಿಕರೊಂದಿಗೆ ಸಮಂಜಸವಾದ ಇತ್ಯರ್ಥಕ್ಕೆ ಬರಲು ತುರ್ತಾಗಿ ಮಾತುಕತೆ ನಡೆಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಹೇಳಲಾಗಿದೆ.

ಇನ್ನು, ಮುಷ್ಕರಕ್ಕೆ ಕರೆ ನೀಡಿರುವ ಬೆನ್ನಲ್ಲೇ ಕಾರ್ಮಿಕ ಇಲಾಖೆ ಆಯುಕ್ತರು ರಾಜೀ ಸಂಧಾನ ಸಭೆಯನ್ನು ಆಯೋಜನೆ ಮಾಡಿದ್ದಾರೆ. ಆಡಳಿತ ವರ್ಗ ಮತ್ತು ಕಾರ್ಮಿಕ ಸಂಘದವರ ನಡವೆ ವಿವಾದ ಉದ್ಭವಿಸಿದೆ ಎಂದು ಪರಿಗಣಿಸಿ, ಮಾರ್ಚ್ 20 ರಂದು ಮಧ್ಯಾಹ್ನ 2.30ಗಂಟೆಗೆ ರಾಜೀ ಸಂಧಾನ ಸಭೆಯನ್ನು ನಿಗದಿಪಡಿಸಲಾಗಿದೆ. ಸದರಿ ಸಂಧಾನ ಸಭೆಗೆ ಆಡಳಿತವರ್ಗ ಮತ್ತು ಕಾರ್ಮಿಕ ಸಂಘದವರು ಹಾಜರಿರಬೇಕೆಂದು ಕಾರ್ಮಿಕ ಇಲಾಖೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಈ ಹಿಂದೆ ಶೇ. 15ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಪ್ರಕಟಿಸಿದ್ದಾರೆ. ಆದರೆ, ಸಾರಿಗೆ ನೌಕರರ ಸಂಘದವರು ಇದನ್ನು ಒಪ್ಪುತ್ತಿಲ್ಲ. 2020ರಿಂದ ವೇತನ ಪರಿಷ್ಕರಣೆ ಆಗಿಯೇ ಇಲ್ಲ. ಈಗ ಶೇ. 15ರಷ್ಟು ಹೆಚ್ಚಳ ಮಾಡಿದರೆ ಪ್ರಯೋಜನವಿಲ್ಲ. ವಿದ್ಯುತ್ ಕಂಪನಿ ನೌಕರರಿಗೆ ಶೇ. 20ರಷ್ಟು ಹೆಚ್ಚಳ ಮಾಡಿದ್ದಾರೆ. ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+