ಮಳೆಗಾಲ ಎದುರಿಸಲು ಇನ್ನೂ ಸಿದ್ಧವಾಗದ ಬಿಬಿಎಂಪಿ
ಬೆಂಗಳೂರು, ಮೇ 17: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಂಕಿ ಬಂದ ಮೇಲೆ ಬಾವಿ ತೋಡಿದಂತೆ ಮಳೆ ಬಂದ ಮೇಲೆ ಅನಾಹುತ ತಪ್ಪಿಸಲು ಕಾಮಗಾರಿ ಕೈಗೊಳ್ಳುವ ಆಲೋಚನೆಯಲ್ಲಿ ಬಿಬಿಎಂಪಿ ಇದ್ದಂತಿದೆ.
ಪ್ರತಿ ವರ್ಷವೂ ಮಳೆಗಾಲ ಬಂದರೂ ಮಳೆಗಾಲವನ್ನು ಬರಮಾಡಿಕೊಳ್ಳಲು ಬಿಬಿಎಂಪಿ ಸಿದ್ಧವಾಗಿರುವುದಿಲ್ಲ. ಈ ಬಾರಿ ಅವಧಿಗೂ ಮುನ್ನವೇ ಮುಂಗಾರು ಪೂರ್ವ ಮಳೆ ಆರಂಭವಾಗಿದೆ.
ಮೇಲ್ಮೈ ಸುಳಿಗಾಳಿ: ರಾಜ್ಯದಲ್ಲಿ ಇಂದು ಮಳೆ ಸಾಧ್ಯತೆ
ಕಳೆದ ಒಂದೂವರೆ ತಿಂಗಳಿನಿಂದ ಮಳೆ ಬರಲಾರಂಭಿಸಿದೆ, ಆದರೂ ಒಂದು ಮಳೆ ಬಂದರೆ ಸಾಕು ಹಲವು ಪ್ರದೇಶಗಳು ಜಲಾವೃತಗೊಂಡು, ಭಾರಿ ಅನಾಹುತ ಸೃಷ್ಟಿಯಾಗುತ್ತದೆ. ಮಿಲಿಮೀಟರ್ ಲೆಕ್ಕದಲ್ಲಿ ಮಳೆ ಹೊಯ್ದರು ರಸ್ತೆಗಳು ನದಿ, ಹೊಳೆ ರೂಪ ತಾಳುತ್ತವೆ. ಮಳೆಗಾಲ ಹೊಸ್ತಿಲಲ್ಲಿರುವಾಗ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ರಾಜಕಾಲುವೆಗಳಲ್ಲಿ ಹೂಳು ತೆಗೆಯುವ ಶಾಸ್ತ್ರ ಮುಗಿಸಿ, ಜಾಣಮೌನ ವಹಿಸುತ್ತಿರುವ ಪರಿಣಾಮ ಪ್ರತಿ ವರ್ಷವೂ ಜನರು ಸಂಕಷ್ಟಕ್ಕೆ ಸಿಲುಕುವುದು ತಪ್ಪುತ್ತಿಲ್ಲ. ಅಂಡರ್ಪಾಸ್ಗಳಲ್ಲಿ ಅಡಿಗಟ್ಟಲೇ ನೀರು ನಿಲ್ಲುತ್ತದೆ.
ಇದರಿಂದ ವಾಹನ ಸವಾರರು ಇನ್ನಿಲ್ಲದ ಪಡಿಪಾಟಲು ಪಡುವಂತಾಗುತ್ತದೆ. ಅವೈಜ್ಞಾನಿಕ ಅಂಡರ್ಪಾಸ್ಗಳನ್ನು ನಿರ್ಮಿಸಿರುವುದೇ ಇದಕ್ಕೆ ಕಾರಣ. ಇಂತಹ ಕಡೆ ಮಳೆ ನೀರು ಸರಾಗವಾಗಿ ಚರಂಡಿಗಳ ಮೂಲಕ ಹರಿದು ಹೋಗುವಂತೆ ಮಾಡಿಲ್ಲ. ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಜೋರು ಮಳೆ ಬಂದಾಗ ರಾಜಕಾಲುವೆ ಉಕ್ಕಿ ಹರಿಯುತ್ತದೆ. ಅಕ್ಕಪಕ್ಕದಲ್ಲಿರುವ ನಿವಾಸಿಗಳ ಮನೆಗೆ ನೀರುನುಗ್ಗುತ್ತದೆ.
ರಾಜಧಾನಿಯಲ್ಲಿ 842 ಕಿ.ಮೀ ಉದ್ದದ ರಾಜಕಾಲುವೆಯ ಜಾಲವಿದೆ. ಈ ಪೈಕಿ 2017 ರಜನವರಿವರೆಗೆ 142 ಕಿ.ಮೀ ರಾಜಕಾಲುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 192 ಕಿ.ಮೀ ಉದ್ದದ ರಾಜಕಾಲುವೆಗಳ ಅಭಿವೃದ್ಧಿಗಾಗಿ 1100 ಕೋಟಿ ರೂ. ಅನುದಾನ ನೀಡಿದೆ.
ಒಟ್ಟು ಆರು ಪ್ಯಾಕೇಜ್ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್ ವೇಳೆಗೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಈವರೆಗೆ 110 ಕಿ.ಮೀ ಉದ್ದದಷ್ಟು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.