ಬೆಡ್ ಬ್ಲಾಕಿಂಗ್ ಹಗರಣ; ತನಿಖೆ ನಡೆಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಮೇ 12; ಬೆಂಗಳೂರು ನಗರದಲ್ಲಿನ ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಈಗಾಗಲೇ ಸರ್ಕಾರದ ಈ ಬಗ್ಗೆ ಸಿಸಿಬಿ ತನಿಖೆಗೆ ಆದೇಶ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ ರೂಂ ಸಿಬ್ಬಂದಿಯೇ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಆರೋಪ. ಸಂಸದ ತೇಜಸ್ವಿ ಸೂರ್ಯ ಈ ಪ್ರಕರಣವನ್ನು ಬಯಲು ಮಾಡಿದ್ದರು.
ಬುಧವಾರ ಕರ್ನಾಟಕ ಹೈಕೋರ್ಟ್ ತಕ್ಷಣ ಸರ್ಕಾರ ಈ ಪ್ರಕರಣದ ತನಿಖೆಗೆ ಪೊಲೀಸ್ ಅಧಿಕಾರಿಗಳ ತಂಡ ರಚನೆ ಮಾಡಬೇಕು ಎಂದು ಆದೇಶಿಸಿದೆ. ತಂಡದಲ್ಲಿ ಸೈಬರ್ ಕ್ರೈಂ ಪೊಲೀಸರು ಇರಬೇಕು. ಹಿರಿಯ ಐಪಿಎಸ್ ಅಧಿಕಾರಿ ತನಿಖೆಗೆ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಹೇಳಿದೆ.

ಕೋರ್ಟ್ಗೆ ಮಾಹಿತಿ ನೀಡಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರಕರಣದ ತನಿಖೆಗೆ ಈಗಾಗಲೇ ತಂಡವನ್ನು ರಚನೆ ಮಾಡಲಾಗಿದೆ. ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದರು.
ಅರ್ಜಿ ವಿಚಾರಣೆ ಇಲ್ಲ; ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಕಾಂಗ್ರೆಸ್ ಯುವ ಘಟಕದ ವೈ. ಬಿ. ಶ್ರೀವತ್ಸ ಅರ್ಜಿಯನ್ನು ಸಲ್ಲಿಸಿದ್ದರು. ಹಗರಣ ಬೆಳಕಿಗೆ ಬಂದ ಬಳಿಕ ಕೆಲಸ ಕಳೆದುಕೊಂಡವರಿಗೆ ಅನ್ಯಾಯವಾಗಿದ್ದರೆ ಅವರು ಕೋರ್ಟ್ಗೆ ಬರಲಿ.
ಈ ಅರ್ಜಿಯನ್ನು ಸಲ್ಲಿಸಿದವರು ರಾಜಕೀಯ ಪಕ್ಷದ ಮುಖಂಡರು. ಅವರು ಸದುದ್ದೇಶ ಹೊಂದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇದನ್ನು ರಾಜಕೀಯ ಪ್ರೇರಿತ ಅರ್ಜಿ ಎಂದು ಭಾವಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿತು.
ಈ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆದಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ ಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿತು.











Click it and Unblock the Notifications