ಮನೆ ಬಾಗಿಲಿಗೆ ಶೀಟ್ ಮುದ್ರೆ: ತಪ್ಪು ಮಾಡಿ ತಪ್ಪಾಯ್ತು ಎಂದ ಬಿಬಿಎಂಪಿ!
ಬೆಂಗಳೂರು, ಜುಲೈ.24: ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಆದರೆ ಇದೇ ನೆಪದಲ್ಲಿ ಬಿಬಿಎಂಪಿ ಅಧಿಕಾರಿಗಳು ಮಾನವೀಯತೆ ಮರೆತು ವರ್ತಿಸಿರುವುದ ಘಟನೆ ವರದಿಯಾಗಿದೆ.
Recommended Video
ಬೆಂಗಳೂರಿನ ಅಪಾರ್ಟ್ ಮೆಂಟ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತಗಡಿನ ಶೀಟ್ ಗಳನ್ನು ಬಳಸಿ ಎರಡು ಮನೆ ಬಾಗಿಲನ್ನು ಸೀಲ್ ಮಾಡಿದ್ದಾರೆ. ಈ ಬಗ್ಗೆ ಸತೀಶ್ ಸಂಗಮೇಶ್ವರನ್ ಎನ್ನುವವರ ಬಿಬಿಎಂಪಿ ಹಿರಿಯ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದರು.
ಕೋವಿಡ್ ಪರೀಕ್ಷೆಗೆ ನಕಲಿ ವಿಳಾಸ; 4,500 ಜನರ ಪತ್ತೆಗೆ ಮುಂದಾದ ಬಿಬಿಎಂಪಿ
ಅಪಾರ್ಟ್ ಮೆಂಟ್ ನಲ್ಲಿರುವ ಎರಡು ಮನೆಗಳಿಗೆ ಸೀಲ್ ಮಾಡಿರುವ ಫೋಟೋಗಳನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದು, ಇದು ಅತಿರೇಕದ ಪರಮಾವಧಿ ಎಂದು ಟೀಕಿಸಿದ್ದರು. ಹಿರಿಯ ಅಧಿಕಾರಿಗಳು ಈ ಬಗ್ಗೆ ಲಕ್ಷ್ಯ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಮನೆ ಬಾಗಿಲಿಗೆ ಶೀಟ್ ಮುದ್ರೆ ಹಾಕಿ ಬಿಬಿಎಂಪಿ
ಅಪಾರ್ಟ್ ಮೆಂಟ್ ನಲ್ಲಿ ವಾಸವಿರುದ ಎರಡು ಮನೆಗಳ ಎದುರಿಗೆ ತಗಡಿನ ಶೀಟ್ ಗಳನ್ನು ಹಾಕಲಾಗಿದೆ. ಒಂದು ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳ ಜೊತೆಗೆ ತಾಯಿಯೊಬ್ಬರೇ ವಾಸವಾಗಿದ್ದಾರೆ. ಇನ್ನೊಂದು ಮನೆಯಲ್ಲಿ ವೃದ್ಧ ದಂಪತಿ ವಾಸವಾಗಿದ್ದು, ಬಿಬಿಎಂಪಿ ಅಧಿಕಾರಿಗಳ ಕ್ರಮ ಸೂಕ್ತವಲ್ಲ. ಅಗತ್ಯ ವಸ್ತುಗಳಿಲ್ಲದೇ ಮನೆಯವರು ಪರದಾಡುವಂತಾ ಪರಿಸ್ಥಿತಿ ಎದುರಿಸಿದ್ದಾರೆ ಎಂದು ಟ್ವಿಟರ್ ನಲ್ಲಿ ಕಿಡಿ ಕಾರಿದ್ದರು.
ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ
ಕೊರೊನಾವೈರಸ್ ಸೋಂಕು ಹರಡುವಿಕೆಗೆ ಸಂಬಂಧಿಸಿದಂತೆ ಬಿಬಿಎಂಪಿ ಪೂರ್ವ ವಲಯದ ರಂಕಾ ಹೈಟ್ಸ್ 853 ಮತ್ತು 854 ಪ್ಲಾಟ್ ನಲ್ಲಿ ಕೊವಿಡ್ ಸೋಂಕಿತರು ಪತ್ತೆಯಾಗಿದ್ದರು. ಈ ಹಿನ್ನೆಲೆ ಸದರಿ ಪ್ರದೇಶ ಮತ್ತು ಕಟ್ಟಡವನ್ನು ಸೀಲ್ ಡೌನ್ ಮಾಡಬೇಕಾದ ಅನಿವಾರ್ಯತೆಯಿತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಬೇಜವಾಬ್ದಾರಿತನ ಮರೆದಿದ್ದಾರೆ. ಹೀಗಾಗಿ ಸಾಂಕ್ರಾಮಿಕ ರೋಗ ಕಾಯ್ದೆ-1897, ವಿಪತ್ತು ನಿರ್ವಹಣ ಕಾಯ್ದೆ 2005 ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲೇ ಲಿಖಿತ ರೂಪದಲ್ಲಿ ಸಮಜಾಯಿಜಿ ನೀಡಬೇಕು ಎಂದು ನೋಟಿಸ್ ಜಾರಿಗೊಳಿಸಲಾಗಿದೆ.
ಶೀಟ್ ಗಳನ್ನು ತೆಗೆಸಿದ ಬಿಬಿಎಂಪಿ ಅಧಿಕಾರಿಗಳು
ಅಪಾರ್ಟ್ ಮೆಂಟ್ ಗಳ ಎರಡು ಮನೆಗಳಿಗೆ ಈ ರೀತಿ ತಗಡಿನ ಶೀಟ್ ಗಳನ್ನು ಹಾಕಿರುವುದು ಗಮನಕ್ಕೆ ಬರುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಮನೆಗಳ ಎದುರಿನಲ್ಲಿ ಹಾಕಲಾಗಿದ್ದ ಶೀಟ್ ಗಳನ್ನು ತೆಗೆದು ಹಾಕಲಾಗಿದೆ. ಹಿರಿಯ ಅಧಿಕಾರಿಗಳ ತುರ್ತು ಕ್ರಮವು ಪ್ರಶಂಸಾರ್ಹವಾಗಿದೆ ಎಂದು ಸತೀಶ್ ಸಂಗಮೇಶ್ವರನ್ ಟ್ವೀಟ್ ಮಾಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ 11,638 ಕಂಟೇನ್ಮೆಂಟ್ ಝೋನ್
ಬೆಂಗಳೂರಿನಲ್ಲಿ ಪ್ರತಿನಿತ್ಯ 2000ಕ್ಕಿಂತ ಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರಲ್ಲಿ ಆತಂಕ ಇಮ್ಮಡಿಯಾಗುತ್ತಿವೆ. ನಗರದಲ್ಲಿ ಈಗಾಗಲೇ 11,638 ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಗಳೆಂದು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಮಮೂರ್ತಿ ನಗರ, ಮಲ್ಲೇಶ್ವರಂ, ಹೆಚ್ಎಎಲ್ ಏರ್ ಪೋರ್ಟ್ ವಾರ್ಡ್, ಚಿಕ್ಕಪೇಟೆ, ಶಾಂತಲಾ ನಗರ, ಕೋರಮಂಗಲ, ಕೆ.ಆರ್.ಮಾರುಕಟ್ಟೆ, ಪಾದರಾಯನಪುರ, ರಾಜರಾಜೇಶ್ವರ ನಗರ, ಚಾಮರಾಜಪೇಟೆ, ಬೇಗೂರು ಮತ್ತು ಅರಕೆರೆ ಪ್ರದೇಶಗಳಲ್ಲಿ 50ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ.