ಬಿಬಿಎಂಪಿಯಿಂದ ಕೆಂಪೇಗೌಡ ದಿನಾಚರಣೆ: ಪ್ರಶಸ್ತಿಗೆ 123 ಅರ್ಜಿ ಸಲ್ಲಿಕೆ
ಬೆಂಗಳೂರು, ಜು.3: ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ 123 ಅರ್ಜಿಗಳು ಸಲ್ಲಿಕೆಯಾಗಿದೆ. ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿ ಆಚರಣೆ ಮಾಡಿದ ನಂತರ ಬಿಬಿಎಂಪಿಯು ಕೂಡ ಆಚರಿಸಲು ನಿರ್ಧರಿಸಿದೆ.
ಪ್ರತಿವರ್ಷವು ಬೆಂಗಳೂರು ಕರಗ ನಡೆಯುವ ದಿನ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಈ ವರ್ಷ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಮುಂದೂಡಲಾಗಿತ್ತು. ಇದೀಗ ಜುಲೈ ಅಂತ್ಯದೊಳಗೆ ಕೆಂಪೇಗೌಡ ದಿನಾಚರಣೆಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.
ಕೆಂಪೇಗೌಡ ಹೆಸರಿನಲ್ಲಿ ವಿಶ್ವವಿದ್ಯಾನಿಲಯ: ಸಿಎಂ ಕುಮಾರಸ್ವಾಮಿ
ಅಂದು ನೀಡಲಾಗುವ ಕೆಂಪೇಗೌಡ ಪ್ರಶಸ್ತಿಗೆ ಈವರೆಗೆ 123 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ವರ್ಷದ ಕಾರ್ಯಕ್ರಮದಲ್ಲಿ 200 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ ಎಷ್ಟು ಮಂದಿಗೆ ಪ್ರಶಸ್ತಿ ನೀಡಬೇಕು ಎಂಬುದನ್ನು ಬಿಬಿಎಂಪಿ ನಿರ್ಧರಿಸಿಲ್ಲ. ಆದರೆ ಈ ಬಾರಿಯೂ 200 ಸಾಧಕರಿಗೆ ಪ್ರಶಸ್ತಿ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಶಸ್ತಿಗಾಘಿ ಈವರೆಗೆ ಕ್ರೀಡಾ ಕ್ಷೇತ್ರದಿಂದ 26, ರಂಗಭೂಮಿ ಯಿಂದ 21, ಸಮಾಜಸೇವೆಯಿಂದ 19 ಸೇರಿ ಒಟ್ಟು 16 ಕ್ಷೇತ್ರಗಳಿಂದ ಅರ್ಜಿ ಸಲ್ಲಿಎಕಯಾಗಿದೆ. ಕೆಂಪೇಗೌಡ ದಿನಾಚರಣೆಯನ್ನು ನಡೆಸಲು 8 ಸಮಿತಿಗಳನ್ನು ರಚಿಸಲಾಗಿದೆ. ಆಯೋಜನೆಯ ಉಸ್ತುವಾರಿಗೆ ರಚಿಸಿರುವ ಸ್ವಾಗತ ಮತ್ತು ಸನ್ಮಾನ ಸಮಿತಿಗೆ ಮೇಯರ್ ಅಧ್ಯಕ್ಷರಾಗಿರುತ್ತಾರೆ.