ರಾಜಕಾಲುವೆ ಒತ್ತುವರಿ ತೆರವು ಎಂಬ ನಿಗೂಢ ರಹಸ್ಯ!
ಬೆಂಗಳೂರು, ಆಗಸ್ಟ್, 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜಕಾಲುವೆ ಒತ್ತುವರಿ ತೆರವು ಎಲ್ಲಿಗೆ ಬಂತು? ದೊಡ್ಡವರ ಹೆಸರು ಕೇಳಿ ಬಂದಿದ್ದೆ ತಡ ಬಿಬಿಎಂಪಿ ಕಾರ್ಯಾಚರಣೆಗೆ ಯಾಕೆ ಹಿಂದೇಟು ಹಾಕುತ್ತಿದೆ? ದೊಡ್ಡವರಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಒಂದು ನ್ಯಾಯವೇ? ಸದ್ಯ ಇದು ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆ.
ಈ ಪ್ರಶ್ನೆಗೆ ಬಿಬಿಎಂಪಿ ಅಧಿಕಾರಿಗಳ ಬಳಿ ಮಾತ್ರ ಸಮರ್ಪಕ ಉತ್ತರ ಇಲ್ಲ. ಬಿಬಿಎಂಪಿ ಕೇಳಿದರೆ ಕಂದಾಯ ಇಲಾಖೆ ಕಡೆ ಬೆರಳು ತೋರಿಸುತ್ತದೆ. ಕಂದಾಯ ಇಲಾಖೆಯವರನ್ನು ಪ್ರಶ್ನೆ ಮಾಡಿದರೆ ಜಯನಗರ ಬಿಡಿಎ ಕಾಂಪ್ಲೆಕ್ಸ್ ನ 9 ನೇ ಮಹಡಿಯಲ್ಲಿರುವ ಕಚೇರಿಗೆ ತೆರಳಿ ಎಂಬ ಉತ್ತರ ಬರುತ್ತದೆ[ಒತ್ತುವರಿ ತೆರವಿಗೆ ತೊಂದರೆ ಇಲ್ಲ ಎಂದ ದರ್ಶನ್]
ಬಿಡಿಎ ಕಾಂಪ್ಲೆಕ್ಸ್ ನ 9 ನೇ ಮಹಡಿಯಲ್ಲಿರುವ ಬೃಹತ್ ನೀರುಗಾಲುವೆ ಕಚೇರಿಗೆ ತೆರಳಿದರೆ ಅಧಿಕಾರಿಗಳು ನಿಮ್ಮ ಕೈಗೆ ಸಿಗಲ್ಲ. ಮೀಟಿಂಗ್ ಎಂಬ ಕಾರಣದಲ್ಲಿ ಪೋನ್ ಸಹ ಎತ್ತಲ್ಲ. ಒಟ್ಟಿನಲ್ಲಿ ಸದ್ಯ ರಾಜಕಾಲುವೆ ಒತ್ತುವರಿ ಯಾವ ಹಂತದಲ್ಲಿದೆ? ಏನು ನಡೆಯುತ್ತಿದೆ ಎಂಬುದೆಲ್ಲ ಸ್ದದ್ಯದ ಮಟ್ಟಿಗೆ ನಿಗೂಢ ರಹಸ್ಯ!
ರಾಜರಾಜೇಶ್ವರಿ ನಗರದ ಐಡಿಯಲ್ ಹೋಂನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಸಂಬಂಧಿಸಿದ 5 ಅಡಿ ಜಾಗ, ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ಎಸ್ ಎಸ್ ಆಸ್ಪತ್ರೆಯ ಸ್ವಲ್ಪ ಜಾಗ, ಒರಾಯನ್ ಮಾಲ್, ಮಾನ್ಯತಾ ಟೆಕ್ ಪಾರ್ಕ್ ಹೆಸರುಗಳು ರಾಜಕಾಲುವೆಗೆ ಲಿಂಕ್ ಆಗಿದ್ದೆ ಒತ್ತುವರಿ ತೆರವು ಕಾರ್ಯಾಚರಣೆ ವೇಗ ಕಳೆದುಕೊಂಡಿದೆ.[ಮನೆ ಕಳೆದುಕೊಂಡವರಿಂದ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆ]

ಜಂಟಿ ಸರ್ವೆ ಹೆಸರು
ಬಲಿಷ್ಠರ ಆಸ್ತಿಯ ಹೆಸರು ಕೇಳಿಬಂದಿದ್ದೇ ಜಂಟಿ ಸರ್ವೆ ಎಂಬ ನೆಪ ಉದ್ಭವವಾಗಿದೆ. ನಮಗಿಲ್ಲದ ಜಂಟಿ ಸರ್ವೆ ದೊಡ್ಡವರ ಆಸ್ತಿಗೆ ಏಕೆ ಎಂದು ತೆರವು ಕಾರ್ಯಾಚರಣೆ ವೇಳೆ ಜಾಗ ಕಳೆದುಕೊಂಡ ಮಹದೇವಪುರ ವ್ಯಾಪ್ತಿಯ ರವಿಚಂದ್ರ ರೆಡ್ಡಿ ಪ್ರಶ್ನೆ ಮಾಡುತ್ತಾರೆ.

ನಮಗೆ ಏನು ಗೊತ್ತಿಲ್ಲ
ನಮಗೆ ಏನೂ ಗೊತ್ತಿಲ್ಲ. ಅಂತಿಮ ನಕಾಶೆ ನೀಡಿದ ನಂತರ ಕೆಲಸ ಮುಂದುವರಿಸುತ್ತೇವೆ, ನಿಮಗೆ ಏನೇ ಮಾಹಿತಿ ಬೇಕಿದ್ದರೂ ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಕೇಳಿ ಎಂಬ ಉತ್ತರವನ್ನು ಬೃಹತ್ ನೀರುಗಾಲುವೆ ಇಲಾಖೆ ಅಧಿಕಾರಿಗಳು ನೀಡುತ್ತಾರೆ

ಯಾವ ಹಂತದಲ್ಲಿದೆ?
ಬಲಿಷ್ಠರಿಗೆ ಸೇರಿದ ಆಸ್ತಿ ಇದ್ದರೂ ತೆರವು ಮಾಡುವುದು ಖಂಡಿತ ಎಂದು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಆದರೆ ಸದ್ಯ ತೆರವು ಕಾರ್ಯಾಚರಣೆ ಯಾವ ಹಂತದಲ್ಲಿದೆ ಎಂಬುದು ಮಾತ್ರ ಯಕ್ಷ ಪ್ರಶ್ನೆ.

ತೆರವು ಖಚಿತ
ಆಸ್ತಿ ಯಾರದ್ದೇ ಆದರೂ ಅಕ್ರಮ ಎಂದಾದರೆ ತೆರವು ಖಚಿತ. ಬಲಿಷ್ಠರ ಆಸ್ತಿ ಎಂಬ ಕಾರಣಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಸಕಲ ದಾಖಲೆಗಳನ್ನು ಸ್ಪಷ್ಟವಾಗಿ ಹಿಡಿದುಕೊಂಡು ಬಿಬಿಎಂಪಿ ಕಾರ್ಯಾಚರಣೆ ಮಾಡುವುದು ನಿಶ್ಚಿತ ಎಂದು ಹೆಸರು ಹೇಳಲು ಬಯಸದ ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡುತ್ತಾರೆ.












Click it and Unblock the Notifications