ಕೊರೊನಾವೈರಸ್ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದೆಯಾ ಬಿಬಿಎಂಪಿ?
ಬೆಂಗಳೂರು, ಜುಲೈ.31: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲೇ ಬೆಂಗಳೂರಿನಲ್ಲಿ 2220 ಮಂದಿಗೆ ಕೊವಿಡ್-19 ಸೋಂಕು ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 55544ಕ್ಕೆ ಏರಿಕೆಯಾಗಿದೆ.
ಮಹಾಮಾರಿಗೆ ಒಂದೇ ದಿನ 20 ಮಂದಿ ಪ್ರಾಣ ಬಿಟ್ಟಿದ್ದು, ಇದುವರೆಗೂ ಸಿಲಿಕಾನ್ ಸಿಟಿಯೊಂದರಲ್ಲೇ ಹೆಮ್ಮಾರಿಗೆ 1029 ಜನರು ಉಸಿರು ಚೆಲ್ಲಿದ್ದಾರೆ. ಇಷ್ಟೆಲ್ಲಾ ಆದರೂ ಕೊವಿಡ್-19 ನಿರ್ವಹಣೆಯಲ್ಲಿ ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪ ಮೇಲಿಂದ ಮೇಲೆ ಕೇಳಿ ಬರುತ್ತಿದೆ.
ಬಯೋಟೆಕ್ ಫಾರ್ಮ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಬಾಗಲಗುಂಟೆ ನಿವಾಸಿ ನರೇಂದ್ರ ಜೆ ನೆರೆಹೊರೆಯವರಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕು ದಿನಗಳ ಹಿಂದೆಯೇ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇಂದಿನವರೆಗೂ ಅವರ ನಿವಾಸದ ಸುತ್ತ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿಲ್ಲ.
Breking: ಕರ್ನಾಟಕದಲ್ಲಿ ಒಂದೇ ದಿನ 5483 ಮಂದಿಗೆ ಕೊರೊನಾವೈರಸ್
ಸುತ್ತಮುತ್ತಲಿನ ಪ್ರದೇಶದಲ್ಲಿ ಕೊರೊನಾವೈರಸ್ ಸೋಂಕು ಹರಡುವ ಆತಂಕ ಹೆಚ್ಚಾಗಿದ್ದು, ಈ ಬಗ್ಗೆ ನರೇಂದ್ರ ಎನ್ನುವವರು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ವೈದ್ಯರಿಗೆ ಕೊರೊನಾವೈರಸ್ ಅಂಟಿದರೂ ಕ್ರಮವಿಲ್ಲ
ಬಾಗಲಗುಂಟೆ ವಾರ್ಡ್ ವೊಂದರಲ್ಲಿ ವಾಸವಿರುವ ವೈದ್ಯರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿ ನಾಲ್ಕು ದಿನಗಳೇ ಕಳೆದಿವೆ. ಇದುವರೆಗೂ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಲ್ಲ. ಸೋಂಕಿತ ಪತ್ತೆಯಾದ ಪ್ರದೇಶದಲ್ಲಿ ಬಿಬಿಎಂಪಿಯ ಯಾವುದೇ ಸಿಬ್ಬಂದಿ ಭೇಟಿ ನೀಡಿ ಸ್ಯಾನಿಟೈಸ್ ಮಾಡಿಲ್ಲ. ಅಲ್ಲದೇ ಸೋಂಕಿತ ವ್ಯಕ್ತಿಯಿರುವ ಮನೆಯ ಸದಸ್ಯರು ಎಂದಿನಂತೆ ತಮ್ಮ ಉದ್ಯೋಗಕ್ಕಾಗಿ ಹೊರಗಡೆ ಓಡಾಡುತ್ತಿದ್ದಾರೆ, ಎಂದು ಅದೇ ವಾರ್ಡ್ ನಲ್ಲಿ ವಾಸವಿರುವ ಉಪನ್ಯಾಸಕ ನಾಗೇಂದ್ರ ಶ್ರೇಯಸ್ ಕಾರ್ನಿಕ್ ದೂರಿದ್ದಾರೆ.
ಸಿಲಿಕಾನ್ ಸಿಟಿಯ ಅಪಾರ್ಟ್ ಮೆಂಟ್ ನಲ್ಲೂ ಇದೇ ಕಥೆ
ಬೆಂಗಳೂರಿನ ಬಲಗೇರಿ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ನಲ್ಲೂ ಇಂಥದ್ದೇ ಘಟನೆ ವರದಿಯಾಗಿದೆ. ಅಪಾರ್ಟ್ ಮೆಂಟ್ ನಿವಾಸಿಯೊಬ್ಬರಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡರೂ ಬಿಬಿಎಂಪಿ ಅಧಿಕಾರಿಗಳು ತೆಲೆ ಕೆಡಿಸಿಕೊಂಡಿಲ್ಲ. ನಾವು ಬಾರಿ ಬಾರಿ ದೂರು ನೀಡಿದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಅಪಾರ್ಟ್ ಮೆಂಟ್ ನಿವಾಸಿ ಗುರು ಕೋಮಲ್ ಎನ್ನುವವರು ಆರೋಪಿಸಿದ್ದಾರೆ.
ಸಾಲು ಸಾಲು ಸಬೂಬು ಕೊಡುತ್ತಿದ್ದೆಯಾ ಬಿಬಿಎಂಪಿ?
ಕೊರೊನಾವೈರಸ್ ಸೋಂಕಿತರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಐಟಿ ಕಂಪನಿ ಉದ್ಯೋಗಿ ನಿತಿನ್ ಜೋಶಿ ಎನ್ನುವವರು ಆರೋಪಿಸಿದ್ದಾರೆ. ನಮ್ಮ ಮನೆಯವರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದರೂ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸಲಿಲ್ಲ. ಮೊದಲು ಕೊವಿಡ್-19 ತಪಾಸಣೆ ವರದಿ ಬರಲಿ ಎಂದು ಹೇಳಿದರು. ಕೊವಿಡ್ ವರದಿ ಬಂದ ನಂತರದಲ್ಲಿ ಬಿಯು ರಿಪೋರ್ಟ್ ಬರುವವರೆಗೂ ಕಾಯಿರಿ ಎಂದರು. ಅದಾದ ಮೇಲೆ ತಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ ಎಂದು ಸಾಲು ಸಾಲು ಸಬೂಬು ನೀಡುತ್ತಿದ್ದಾರೆ ಎಂದು ನಿತಿನ್ ಜೋಶಿ ದೂರಿದ್ದಾರೆ. ಇನ್ನು, ನಮ್ಮ ಮನೆಯ ಸುತ್ತಮುತ್ತ ಯಾವುದೇ ರೀತಿ ಸ್ಯಾನಿಟೈಸ್ ಮಾಡಿಲ್ಲ, ಕಂಟೇನ್ಮೆಂಟ್ ಝೋನ್ ಎಂದು ಗರುತಿಸಿಲ್ಲ, ಸೂಚನಾ ಫಲಕಗಳನ್ನು ಹಾಕಿಲ್ಲ ಎಂದು ಆರೋಪಿಸಿದ್ದಾರೆ.
ಕೊರೊನಾವೈರಸ್ ಸೋಂಕು ಹರಡುವಿಕೆಗಿದೇ ಕಾರಣ?
ಬೆಂಗಳೂರಿನ ವಿವೇಕಾನಂದ ನಗರ, ಮಾರುತಿ ಸೇವಾ ನಗರ ವಾರ್ಡ್ ನಲ್ಲಿರುವ ನೆರೆಹೊರೆಯ ನಿವಾಸಿಯು ಉಸಿರಾಟ ತೊಂದರೆಯಿಂದಾಗಿ ಜುಲೈ.12ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ.18ರಂದು ಅವರನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತಿತ್ತು. ತಮಗೆ ಕೊರೊನಾವೈರಸ್ ಸೋಂಕು ಅಂಟಿರುವ ಬಗ್ಗೆ ಸ್ಥಳೀಯ ಬಿಬಿಎಂಪಿ ಸದಸ್ಯರಿಗೆ ಸೋಂಕಿತ ವ್ಯಕ್ತಿಯು ಜುಲೈ.23ರಂದು ಮಾಹಿತಿ ನೀಡಿದರು. ಅದಾಗಿ ನಾಲ್ಕೇ ದಿನಕ್ಕೆ ಅಂದರೆ ಜುಲೈ.27ರಂದು ಸೋಂಕಿತ ವ್ಯಕ್ತಿಯು ಕೊರೊನಾವೈರಸ್ ನಿಂದಾಗಿ ಪ್ರಾಣ ಬಿಟ್ಟರು. ಆದರೆ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಒಬ್ಬರೇ ಒಬ್ಬ ಶಂಕಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿಲ್ಲ. ಇದರಿಂದಾಗಿಯೇ ಕೊರೊನಾವೈರಸ್ ಸೋಂಕು ಸಮುದಾಯಕ್ಕೆ ಹರಡುತ್ತಿದೆ ಎಂದು ಆರೋಪಿಸಿದ್ದಾರೆ.