ಬಿಬಿಎಂಪಿ: ದಕ್ಷಿಣ ವಲಯ ವ್ಯಾಪ್ತಿಯಲ್ಲಿ 'ಮುಖ್ಯ ಆಯುಕ್ತರ ನಡೆ ವಲಯದ ಕಡೆ'
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳು:
1. ದಕ್ಷಿಣ ವಲಯ ವ್ಯಾಪ್ತಿಯ ಆಯಾ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ಸಿಗುವ ಸಮಯದ ನಾಮಫಲಕವನ್ನು ಅಳವಡಿಸಲು ಮನವಿ ಮಾಡಿದರು. ಈ ಪೈಕಿ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಾಹ್ನ 3.00 ರಿಂದ ಸಂಜೆ 5.00 ರವರೆಗೆ ಸಾರ್ವಜನಿಕರಿಗೆ ಲಭ್ಯವಿರುವ ಬಗ್ಗೆ ನಾಮಫಲಕ ಅಳವಡಿಸಿ, ಎಲ್ಲ ಅಧಿಕಾರಿಗಳೂ ಸಮಸ್ಯೆಗಳನ್ನು ಆಲಿಸುವಂತೆ ಕ್ರಮ ಕೈಗೊಳ್ಳಲು ವಲಯ ಜಂಟಿ ಆಯುಕ್ತರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.
ವರ್ಕ್ ಫ್ರಂ ಪ್ಲೈಓವರ್: ಬೆಂಗಳೂರು ಟೆಕ್ಕಿಗೆ ಸರಿಸಾಟಿಯಿಲ್ಲ
2. ವಾರ್ಡ್ ಸಮಿತಿ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಅದನ್ನು ಸರಿಪಡಿಸಲು ಮನವಿ. ಈ ಸಂಬಂಧ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಹಿರಿಯ ಅಧಿಕಾರಿಗಳನ್ನು ವಾರ್ಡ್ ಸಮಿತಿಗೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಿ ಸರಿಯಾಗಿ ವಾರ್ಡ್ ಸಮತಿ ಸಭೆಗಳು ನಡೆಯುವಂತೆ ಮಾಡಬೇಕು. ಸಭೆ ನಡೆಸುವ ಬಗ್ಗೆ ನೋಡಲ್ ಅಧಿಕಾರಿಗಳಿಗೆ ತರಬೇತಿ ನೀಡಿ ಸರಿಯಾಗಿ ಸಭೆ ನಡೆಯುವಂತೆ ಮಾಡಿ. ವಾರ್ಡ್ ಸಮಿತಿ ಸಭೆಯಲ್ಲಿ ನಡೆಯುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಂಡು ಅವುಗಳನ್ನು ತ್ವರಿತವಾಗಿ ಬಹೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚಿಸಿದರು.
3. ಬಸವನಗುಡಿ ವಾರ್ಡ್ ಸಂ. 154 ಮನೆ ಪಕ್ಕದಲ್ಲಿ ಕಟ್ಟಡ ತೆರವುಗೊಳಿಸುವ ವೇಳೆ ಮನೆ ಬಿರುಕು ಬಿಟ್ಟಿದ್ದು, ಪಾಲಿಕೆಗೆ ದೂರು ನೀಡಲಾಗಿತ್ತು. ಈ ಪೈಕಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಂದ ಮನೆ ಸರಿಪಡಿಸಿಕೊಡಬೇಕು. ಕೆಲಸ ಆಗಿಲ್ಲವೆಂದರೆ 15 ದಿನಗಳ ನಂತರ ವಲಯ ಆಯುಕ್ತರನ್ನು ಭೇಟಿ ಮಾಡಲು ತಿಳಿಸಿದರು.
4. ಬಸವನಗುಡಿ ವ್ಯಾಪ್ತಿಯಲ್ಲಿ ಒಎಫ್ಸಿ ಕೇಬಲ್ ನವರು ಅನಧಿಕೃತವಾಗಿ ರಸ್ತೆಯನ್ನು ಹಗೆದು ಹಾಳುಮಾಡಿದ್ದು, ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ. ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೇಬಲ್ ಗಳನ್ನು ಕೂಡಲೆ ಸೀಜ್ ಮಾಡಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳಲು ಸೂಚಿಸಿದರು.
5. ಬಸವನಗುಡಿ ವ್ಯಾಪ್ತಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಡಾಂಬರೀಕರಣ ಮಾಡುವ ಅನಾಥ ವಾಹನ ನಿಲ್ಲಿಸಿರುವ ಸ್ಥಳದಲ್ಲಿ ಮಾತ್ರ ಡಾಂಬರೀಕರಣ ಮಾಡಿಲ್ಲ. ಇದೀಗ ವಾಹನ ತೆರವುಗೊಳಿಸಿದ್ದು, ಒಂದು ವಾರದೊಳಗಾಗಿ ಡಾಂಬರೀಕರಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
6. ಗಿರಿನಗರ ವಾರ್ಡ್ ವ್ಯಾಪ್ತಿಯಲ್ಲಿ ಕಸದ ಲಾರಿ ಪಾಯಿಂಟ್(ಕಸ ಸಂಗ್ರಹಿಸುವ ಸ್ಥಳ)ನಿಂದ ಸುತ್ತಮುತ್ತಲಿನ ಮನೆಗಳಿಗೆ ವಾಸನೆ ಬರುತ್ತಿದ್ದು, ಅದನ್ನು ಕೂಡಲೆ ಸ್ಥಳಾಂತರಿಸಲು ಮನವಿ. ಈ ಪೈಕಿ ಮುಂದಿನ 10 ದಿನದಲ್ಲಿ ಲಾರಿ ಪಾಯಿಂಟ್ ಅನ್ನು ಸ್ಥಳಾಂತರಿಸಿ ಸಮಸ್ಯೆ ಬಗೆಹರಿಸಲು ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
7. ಮಂಜುನಾಥ ದೇವಸ್ಥಾನ ಉದ್ಯಾನ(ಸೀತಾ ದೇವಸ್ಥಾನದ ಬಳಿ)ವನ್ನು ಸರಿಯಾಗಿ ನಿರ್ವಹಣೆ ಮಾಡಲು ಮನವಿ. ಸಂಬಂಧಪಟ್ಟ ತೋಟಗಾರಿಕಾ ಅಧಿಕಾರಿಗಳು ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಿದರು.
8. ವಿಲ್ಸನ್ ಗಾರ್ಡನ್ ರಸ್ತೆ ಬದಿಗಳಲ್ಲಿ ಹೂವುಗಳು ಮಾರಾಟ ಮಾಡಿ ಅದರಿಂದ ಉತ್ಪತ್ತಿ ಆಗುವ ಕಸವನ್ನು ರಸ್ತೆ ಬದಿ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಈ ಸಂಬಂಧ ಹಸಿ ಕಸ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ನೀಡಬೇಕು. ಅದಕ್ಕಾಗಿ ಜಂಟಿ ಆಯುಕ್ತರು, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಆಟೊ ಟಿಪ್ಪರ್ ಗುತ್ತಿಗೆದಾರರು ಸ್ಥಳಕ್ಕೆ ಭೇಟಿ ನೀಡಿ ಹೂವು ಮಾರಾಟಗಾರರಿಗೆ ಹೂವಿನಿಂದ ಉತ್ಪತ್ತಿಯಾಗುವ ಕಸ ತೆರವುಗೊಳಿಸುವ ಬಗ್ಗೆ ಮಾರಾಟಗಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಸೂಚಿಸಿದರು.
9. ದಕ್ಷಿಣ ವಲಯದಲ್ಲಿ ಒಂಟಿ ಮನೆಗೆ ಸಾಕಷ್ಟು ಅರ್ಜಿಗಳನ್ನು ನೀಡಲಾಗಿದ್ದು, ಅನುದಾನ ಬಿಡುಗಡೆ ಮಾಡಲು ಮನವಿ. ಈ ಸಂಬಂಧ ಕಲ್ಯಾಣ ವಿಭಾಗದಿಂದ ವಿಧಾನಸಭಾ ಕ್ಷೇತ್ರವಾರು 2,000 ಒಂಟಿ ಮನೆಗಳ ನಿರ್ಮಾಣಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಶೀಘ್ರ ಅನುದಾನವನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಡಿ ನೀಡುತ್ತಿರುವ ಹಲವಾರು ಯೋಜನೆಗಳನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದರು.
10. ಚಿಕ್ಕನಾಗಮಂಗಲ ಪ್ಲಾಂಟ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಹುಚ್ಚಪ್ಪ ಎಂಬುವವರು ದಿ:11.11.2021 ರಂದು ಕಾರ್ಯನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟಿದ್ದು, ಅವರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಗುತ್ತಿಗೆದಾರರಿಂದ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
11. ಪೌರಕಾರ್ಮಿಕರು ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಅದನ್ನು ಬೇಗ ಕೊಡಲು ಮನವಿ. ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
12. ಪದ್ಮನಾಭ ನಗರ ವಾರ್ಡ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಅದನ್ನು ತೆರವುಗೊಳಿಸಲು ಮನವಿ. ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
13. ಕೋರಮಂಗಲ 100ಅಡಿ ರಸ್ತೆಯ ಈಜೀಪುರ ಸಿಗ್ನಲ್ - ಕೇಂದ್ರಿಯ ಸದನ ಮಡಿವಾಳ ಮೇಲುಸೇತುವೆ ಕಾಮಗಾರಿ ಸ್ಥಳದಲ್ಲಿ ಪಾದಚಾರಿ ಮಾರ್ಗ ದುರಸ್ತಿ, ಚರಂಡಿಗಳ ಸ್ವಚ್ಚತೆ, ರಸ್ತೆ ಮಧ್ಯೆ ಮಣ್ಣು ಹಾಗೂ ಭಗ್ನಾವಶೇಷಗಳನ್ನು ತೆರವುಗೊಳಿಸಲು ಮನವಿ. ಈ ಪೈಕಿ ಕೂಡಲೆ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
14. ಕೋರಮಂಗಲ 07ನೇ ಕ್ರಾಸ್ ರಸ್ತೆ - ಬಿಡಿಎ ಕಾಂಪ್ಲೆಕ್ಸ್ ಸಿಗ್ನಲ್ - ವಿಪ್ರೊ ಪಾರ್ಕ್ ಸಿಗ್ನಲ್ ವರೆಗೆ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು, ಬಿಡಿಎ ಕಾಂಪ್ಲೆಕ್ 8ನೇ ಮುಖ್ಯ ರಸ್ತೆಯವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮನವಿ. ಈ ಸಂಬಂಧ ಬಾಕಿ ಕಾಮಾಗರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
15. ಕಲ್ಯಾಣ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಆಟೋಗಳನ್ನು ಖರೀದಿಸಿದ್ದು, ಸಬ್ಸಿಡಿ ಕೊಡುವುದು ಬಾಕಿಯಿದೆ. ಅದನ್ನು ಕೂಡಲೆ ಬಿಡುಗಡೆ ಮಾಡಲು ಮನವಿ. ಈ ಸಂಬಂಧ ವಲಯ ಜಂಟಿ ಆಯುಕ್ತರು ಪರಿಶೀಲಿಸಿ ಒಂದು ದಿನ ನಿಗಧಿಪಡಿಸಿ ಕ್ಯಾಂಪ್ ಮಾಡಿ ಬಾಕಿಯಿರುವ ಸಬ್ಸಿಡಿ ಬಿಡುಗಡೆ ಮಾಡಲು ಸೂಚಿಸಿದರು.
16. ಕೋರಮಂಗಲ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಇಲ್ಲದೆ ನಿರ್ಮಾಣ ಮಾಡಿಕೊಳ್ಳದೆ ಕಟ್ಟಡ ಉಲ್ಲಂಘನೆ ಮಾಡಿರುವವರ ಮೇಲೆ ಶಿಸ್ತು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
17. ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ನಾಗರಿಕರ ಓಡಾಟಕ್ಕೆ ಸಮಸ್ಯೆ ಆಗುತ್ತಿದ್ದು, ಒತ್ತುವರಿ ತೆರವು ಮಾಡಲು ಮನವಿ. ಎಲ್ಲೆಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ ಅಂತಹ ಸ್ಥಳಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
18. ಕಲ್ಯಾಣ ವಿಭಾಗದಡಿ ವಿಕಲಚೇತನರಿಗೆ ಸ್ವ-ಉದ್ಯೋಗಕ್ಕಾಗಿ ಸಹಾಯ ಧನ ಬಿಡುಗಡೆ ಮಾಡಲು ಮನವಿ. ಈ ಸಂಬಂಧ ವಿಕಲಚೇತನರು ಯಾವ ಕೆಲಸದಲ್ಲಿ ಉತ್ಸುಕರಾಗಿದ್ದಾರೆ ಆ ಬಗ್ಗೆ ಎನ್.ಜಿ.ಒಗಳ ಸಹಯೋಗದಲ್ಲಿ ತರಬೇತಿ ನೀಡಿ ಸಹಾಯ ಧನ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ವಲಯ ಆಯುಕ್ತರಿಗೆ ಸೂಚಿಸಿದರು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಕಲ್ಯಾಣ ಕಾರ್ಯಕ್ರಮದಡಿ ಒಂಟಿ ಮೆನೆ ಯೋಜನೆ, ವಿದ್ಯಾರ್ಥಿ ವೇತನ ಯೋಜನೆ ಹಾಗೂ ಕಲ್ಯಾಣ ಕಾರ್ಯಕ್ರಮದಡಿ ಸಿಗಬೇಕಿರುವ ಎಲ್ಲಾ ರೀತಿಯ ಸೌಲಭ್ಯಗಳು ಸಿಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಕಲ್ಯಾಣ ವಿಭಾಗದ ಅಧಿಕಾರಿಗೆ ಸೂಚಿಸಿದರು.
Recommended Video
ದಕ್ಷಿಣ ವಲಯ ವ್ಯಾಪ್ತಿಯಲ್ಲಿ 'ವಲಯದ ಕಡೆ ಮುಖ್ಯ ಆಯುಕ್ತರ ನಡೆ'ಯ ದಿನದಂದು ಆಲಿಸಿದ ಎಲ್ಲಾ ಸಾರ್ವಜನಿಕರ ಅಹವಾಲುಗಳಲ್ಲಿ ತ್ವರಿತವಾಗಿ ಬಗೆಹರಿಯುವಂತಹ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಲು ಮುಖ್ಯ ಆಯುಕ್ತರು ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಆಯುಕ್ತರಾದ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತರಾದ ಜಗದೀಶ್ ನಾಯಕ್, ವಲಯ ಮುಖ್ಯ ಅಭಿಯಂತರರಾದ ನರಸಾರಾಮ್ ರಾವ್, ವಲಯ ಉಪ ಆಯುಕ್ತರಾದ ಲಕ್ಷ್ಮೀ ದೇವಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.