ಬೆಂಗಳೂರು ಸುದ್ದಿ: ಬಿಬಿಎಂಪಿ ವ್ಯಾಪ್ತಿಗೆ ಐದು ಗ್ರಾಮಗಳ ಸೇರ್ಪಡೆ
ಬೆಂಗಳೂರು, ಡಿಸೆಂಬರ್ 14: ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ, ಮೆಟ್ರೋ ನಗರಿ ಎನಿಸಿಕೊಂಡಿರುವ ಬೆಂಗಳೂರಿನ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಮೂಲಕ ಅಭಿವೃದ್ಧಿಗೆ ಪೂರಕ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದೇ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ.
ಬೆಂಗಳೂರಿನ ಉತ್ತರ ಭಾಗ ಹಾಗೂ ದಕ್ಷಿಣ ಭಾಗದಲ್ಲಿರುವ ಐದು ಗ್ರಾಮಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಪ್ರದೇಶ ಈಗ ನಾಲ್ಕು ಚದರ ಕಿಲೋಮೀಟರ್ಗಳಷ್ಟು ಹೆಚ್ಚಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಬಾಹ್ಯ ಗ್ರಾಮಗಳನ್ನು ಸೇರಿಸುವ ಶಾಸಕರ ಪ್ರಸ್ತಾವನೆಗೆ ಡಿಲಿಮಿಟೇಶನ್ ಸಮಿತಿಯ ಮುಖ್ಯಸ್ಥರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹೆಮ್ಮಿಗೆಪುರ (ವಾರ್ಡ್ 198)ಕ್ಕೆ ಎರಡು ಗ್ರಾಮಗಳನ್ನು ಮತ್ತು ಉತ್ತರ ಬೆಂಗಳೂರಿನ ಒಂದು ವಾರ್ಡ್ಗೆ ಇನ್ನೂ ಮೂರು ಗ್ರಾಮಗಳನ್ನು ಸೇರಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಓಮಿಕ್ರಾನ್ ಭೀತಿ; ಕ್ರಿಸ್ಮಸ್ ಹಬ್ಬಕ್ಕೆ ಮಾರ್ಗಸೂಚಿ
ಈ ಮೊದಲು 712 ಚದರ ಕಿಲೋಮೀಟರ್ ಇದ್ದ ಬಿಬಿಎಂಪಿ ವ್ಯಾಪ್ತಿಯು ಇದರಿಂದ 716 ಚದರ ಕಿಲೋಮೀಟರ್ಗೆ ವಿಸ್ತರಿಸಿಕೊಂಡಿದೆ. ಕಳೆದ 2021ರ ಮಾರ್ಚ್ ತಿಂಗಳಿನಲ್ಲಿಯೇ ಐದು ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದಕ್ಕೂ ಒಂದು ತಿಂಗಳ ಮೊದಲು ಡಿಲಿಮಿಟೇಶನ್ ಸಮಿತಿಯ ಸಭೆ ನಡೆಸಲಾಗಿತ್ತು.
ಹೆಮ್ಮಿಗೆಪುರ ವಾರ್ಡ್ 198ಕ್ಕೆ ಎರಡು ಗ್ರಾಮ ಸೇರ್ಪಡೆ:
ಸರ್ಕಾರದ ಅಧಿಸೂಚನೆ ಪ್ರಕಾರ, ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರ ಗ್ರಾಮ ಪಂಚಾಯತಿ ಸರ್ವೇ ನಂಬರ್ ಮಲ್ಲಸಂದ್ರ ಮತ್ತು ಉತ್ತರಹಳ್ಳಿ ಮನವರ್ತಿಕಾವಲ್ ಗ್ರಾಮವನ್ನು ಹೆಮ್ಮಿಗೆಪುರ ವಾರ್ಡ್ ಸಂಖ್ಯೆ 198ಕ್ಕೆ ಸೇರಿಸಲಾಗಿದೆ. ಅದೇ ರೀತಿ ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮಿಪುರ ಗ್ರಾಮ, ಕಾಂಶಿರಾಮ್ ನಗರ ಮತ್ತು ಲಕ್ಷ್ಮಿಪುರ ಗ್ರಾಮದ ಎಲ್ಲಾ ಲೇಔಟ್ ಅನ್ನು ಇನ್ನೊಂದು ವಾರ್ಡಿಗೆ ಸೇರ್ಪಡೆ ಮಾಡಲಾಗಿದೆ.
ಈ ಗ್ರಾಮಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಲು ನಗರಾಭಿವೃದ್ಧಿ ಇಲಾಖೆ ಹಲವು ವರ್ಷಗಳ ಹಿಂದೆಯೇ ಚಿಂತನೆ ನಡೆಸಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ಗ್ರಾಮಗಳನ್ನು 243 ವಾರ್ಡ್ಗಳಿಗೆ ವಸತಿ ಕಲ್ಪಿಸುವ ಹಾಗೂ ವಾರ್ಡ್ ಗಡಿಯನ್ನು ವಿಂಗಡಿಸುವ ಸಮಯದಲ್ಲಿ ಅವುಗಳ ಜನಸಂಖ್ಯೆ ವೈಶಿಷ್ಟ್ಯಗಳ ಆಧಾರದ ಮೇಲೆ ವಿವಿಧ ವಾರ್ಡ್ಗಳಿಗೆ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.
''ಈ ಗ್ರಾಮಗಳನ್ನು ಬಿಬಿಎಂಪಿಗೆ ಸೇರಿಸುವಂತೆ ಹಲವು ವರ್ಷಗಳಿಂದ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕ ಬೇಡಿಕೆಯ ಆಧಾರದ ಮೇಲೆ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಕಾಯ್ದೆ ಮತ್ತು ಹೊಸದಾಗಿ ಜಾರಿಗೆ ತಂದಿರುವ ಬಿಬಿಎಂಪಿ ಕಾಯ್ದೆಯಡಿಯಲ್ಲಿ ಸರಿಯಾದ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಅವುಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲಾಗಿದೆ, "ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಗೆ ಗ್ರಾಮಗಳ ಸೇರ್ಪಡೆಗೆ ಪರ-ವಿರೋಧ:
ಬಿಬಿಎಂಪಿ ವ್ಯಾಪ್ತಿಗೆ ಹೊಸ ಗ್ರಾಮಗಳನ್ನು ಸೇರಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಒತ್ತಡಗಳು ಬಂದಿದ್ದವು. ಈ ಪ್ರಸ್ತಾವನೆಯನ್ನು ಸ್ವೀಕರಿಸುವಂತೆ ಕೆಲವರು ಒತ್ತಡ ಹಾಕಿದರೆ, ಮತ್ತೆ ಕೆಲವರು ಈ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಒತ್ತಡ ಹೇರಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಗೆ ಗ್ರಾಮಗಳನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ರಚಿಸಿದ ಡಿಲಿಮಿನೇಷನ್ ಸಮಿತಿಗೆ ಮಹದೇವಪುರ, ಯಲಹಂಕ, ಯಶವಂತಪುರ ಮತ್ತು ಬೆಂಗಳೂರು ದಕ್ಷಿಣದ ಶಾಸಕರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ರಾಜ್ಯ ಸರ್ಕಾರ ರಚಿಸಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ರಾಮಗಳನ್ನು ಸೇರಿಸುವ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಿದ್ದರು. ಇತ್ತೀಚಿಗಷ್ಟೇ ಪ್ರಸ್ತಾವನೆಗಳ ಕುರಿತು ಚರ್ಚಿಸಲು ಸಮಿತಿಯ ಅಧಿಕಾರಾವಧಿಯನ್ನು ವಿಸ್ತರಿಸಲಾಗಿತ್ತು.