BBMP: ಬೆಂಗಳೂರು ಮಳೆ ಅವಾಂತರ: ಬಿಬಿಎಂಪಿಯನ್ನು ದೂರುವ ಮುನ್ನ ಈ ಪತ್ರಿಕಾ ಪ್ರಕಟಣೆ ಓದಿ...
ಬೆಂಗಳೂರು ಅಕ್ಟೋಬರ್ 23: ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಜನರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಬಿಬಿಎಂಪಿ ಸ್ಪಂದಿಸಿದೆ. ಮಳೆಯಿಂದಾಗಿ ನೀರು ತುಂಬಿಕೊಂಡ ಪ್ರದೇಶಗಳಿಗೆ ತಲುಪಿ ಪೀಡಿತ ಪ್ರದೇಶದಲ್ಲಿರುವ ಜನರ ರಕ್ಷಣೆ ಮಾಡುವ ಕಾರ್ಯಗಳಲ್ಲಿ ಬಿಬಿಎಂಪಿ ಬಹುತೇಕ ಯಶಸ್ವಿಯಾಗಿದೆ. ಈ ಬಗ್ಗೆ ಬಿಬಿಎಂಪಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.
ಹಾಗಾದರೆ ನಗರದ ಯಾವೆಲ್ಲಾ ಪ್ರದೇಶಗಳಲ್ಲಿ ಮಳೆ ನೀರು ಆವರಿಸಿದೆ. ಬಿಬಿಎಂಪಿ ಸ್ಪಂದಿಸಿರುವ ಪ್ರದೇಶಗಳೆಷ್ಟು? ಇನ್ನೂ ಎಷ್ಟು ಪ್ರದೇಶಗಳು ಬಾಕಿ ಇವೆ. ಮಳೆಯಿಂದಾದ ಸಮಸ್ಯೆಗಳನ್ನು ನಿವಾರಿಸಲು ಸಹಾಯಕ್ಕಾಗಿ ಎಷ್ಟು ಜನರನ್ನು ಬಳಸಿಕೊಳ್ಳಲಾಗಿದೆ ಎಲ್ಲದರ ಬಗ್ಗೆ ಬಿಬಿಎಂಪಿ ಪ್ರಕಟಣೆಯಲ್ಲಿ ವಿವರಿಸಿದೆ.

ಬೆಂಗಳೂರು ನಗರದ ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯಗಳಲ್ಲಿ ಭಾರೀ ಮಳೆಯಾಗಿದ್ದು, ಇದರಿಂದ ಕೆರೆಗಳೆಲ್ಲಾ ತುಂಬಿ ಕೋಡಿಗಳಲ್ಲಿ ಹೆಚ್ಚು ನೀರು ಹರಿದಿರುವ ಪರಿಣಾಮ ವಿವಿಧ ಪ್ರದೇಶಗಳು ಜಲಾವೃತವಾಗಿದೆ. ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಹಾಗೂ ಯಾವುದೇ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಸಲುವಾಗಿ ಪಾಲಿಕೆಯ ಅಧಿಕಾರಿ/ನೌಕರರ ತಂಡಗಳ ಜೊತೆ ಎನ್.ಡಿ.ಆರ್.ಎಫ್, ಎಸ್.ಡಿ.ಆರ್ಎಫ್, ಅಗ್ನಿ ಶಾಮಕ ದಳ ಹಾಗೂ ಸಿವಿಲ್ ಡಿಫೆನ್ಸ್ ತಂಡಗಳು ದಿನದ 24*7 ಕಾರ್ಯನಿರ್ವಹಿಸುತ್ತಿವೆ ಎಂದು ಬಿಬಿಎಂಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದ್ದು, ಹಲವೆಡೆ ನೀರು ತುಂಬಿಕೊಂಡು ಜನ ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಯಲಹಂಕ ವಲಯದ ಕೇಂದ್ರೀಯ ವಿಹಾರ್, ಜಕ್ಕೂರು ಬಳಿಯ ಡೈನಸ್ಟಿ ಲೇಔಟ್ ನಲ್ಲಿ ನೀರು ನಿಂತಿದ್ದು, ಅದನ್ನು ತೆರವುಗೊಳಿಸುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ. ಜಲಾವೃತವಾಗಿದ್ದ ಉಳಿದೆಲ್ಲಾ ಪ್ರದೇಶಗಳಲ್ಲಿ ನೀರು ನಿಂತಿರುವುದನ್ನು ಇಡೀ ರಾತ್ರಿ ಪಂಪ್ಗಳ ಮೂಲಕ ನೀರನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೂ ಮಹದೇವಪುರ ವಲಯದ ಬೆಸ್ಲಿಂಗ್ ವಾರ್ಡನ್, ಚಿನ್ನಪ್ಪನಹಳ್ಳಿ, ಸಮಪ್ತಗಿರಿ ಲೇಔಟ್, ಮಧುರಾನಗರ, ಚಿನ್ನಸಂದ್ರ ಮುಖ್ಯ ರಸ್ತೆ, ಗ್ರೀನ್ ಲೇಔಟ್ ನಲ್ಲಿ ನೀರು ನಿಂತಿರುವುದನ್ನು ತೆರವುಗೊಳಿಸಲಾಗಿದೆ. ಸಾಯಿ ಲೇಔಟ್, ವಡ್ಡರಪಾಳ್ಯದಲ್ಲಿ ನೀರು ಹೊರಹಾಕುವ ಕಾರ್ಯ ಮಾಡಲಾಗಿದೆ. ಅಲ್ಲದೆ ದಾಸರಹಳ್ಳಿ ವಲಯದ ನಿಸರ್ಗ ಲೇಔಟ್, ಪಾರ್ವತಿ ಲೇಔಟ್, ಮಿತ್ರಾ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ, ಬೆಲ್ಮಾರ್ಗ್ ಲೇಔಟ್ ನಲ್ಲಿ ನೀರು ನಿಂತಿರುವುದನ್ನು ತೆರವುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಳೆಯಿಂದಾಗಿ ಉಂಟಾಗಿರುವ ಪ್ರಮುಖ ಸಮಸ್ಯೆಗಳು ಹಾಗೂ ಪರಿಹಾರ
ನಗರದಲ್ಲಿ 1079 ಮನೆಗಳಿಗೆ ನೀರು ನುಗ್ಗಿದೆ. ಈ ಎಲ್ಲಾ ಮನೆಗಳಿಗೆ ನುಗ್ಗಿದ ನೀರನ್ನು ತೆಗೆದು ಹಾಕಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನೂ ನೀರು ನಿಂತಿರುವ ಒಟ್ಟು ಪ್ರದೇಶಗಳ ಸಂಖ್ಯೆ 30 ಇದೆ. ಇದರಲ್ಲಿ 29 ಸ್ಥಳಗಳಲ್ಲಿ ನೀರು ತೆಗೆದು ಹಾಕಲಾಗಿದೆ. ಜೊತೆಗೆ ಮರ ಹಾಗೂ ರೆಂಬೆ ಕೊಂಬೆಗಳನ್ನು ಬಿದ್ದಿರುವ ಸಂಖ್ಯೆ 85 ಇದ್ದು 52 ಕಡೆ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. ಉಳಿದವುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿಕೊಂಡಿದೆ.
ಜೊತೆಗೆ ಮಳೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಅರಣ್ಯ ವಿಭಾಗದಿಂದ 30 ತಂಡಗಳು, ಅಗ್ನಿ ಶಾಮಕ ದಳದಿಂದ 1 ತಂಡ, ಜನರನ್ನು ಸ್ಥಳಾಂತಸಲು ಒಂದು ಬೋಟ್ಗಳ ನಿಯೋಜನೆ ಮಾಡಲಾಗಿದ್ದು, ಮಳೆಯ ಮುಂಜಾಗೃತ ಕ್ರಮವಾಗಿ ನೀರು ಹೊರ ಹಾಕಲು ಬಳಸಲಾಗಿರುವ ಸಂಖ್ಯೆ 15 ಇದೆ. ಇನ್ನೂ ನೀರುಗಾಲುವೆಗಳ ಪ್ರಮುಖ ಸ್ಥಳಗಳಲ್ಲಿ ಹೂಳೆತ್ತಿ ಸ್ವಚ್ಚಗೊಳಿಸಲು 10 ಜೆಸಿಬಿಗಳನ್ನು ಬಳಸಲಾಗಿದೆ. ಮಹದೇವಪುರ ವಲಯದ ಸಾಯಿ ಲೇಔಟ್ನಲ್ಲಿ ಸುಮಾರು 300 ಜನ ನಾಗರೀಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಊಟ, ರಾತ್ರಿಯ ಊಟದ 900 ಪ್ಯಾಕೆಟ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 7 ಜನರಿಗೆ ಹೋಟೆಲ್ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications