ನವರಾತ್ರಿ, ದುರ್ಗಾಪೂಜೆಗೆ ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ
ಬೆಂಗಳೂರು, ಅಕ್ಟೋಬರ್ 06: ಕೊರೊನಾ ಸಾಂಕ್ರಾಮಿಕದ ಕಾರಣವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನವರಾತ್ರಿ, ದುರ್ಗಾ ಪೂಜೆಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಪಾಲಿಕೆಯ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 11ರಿಂದ 15ರವರೆಗೆ ದುರ್ಗಾ ಉತ್ಸವವನ್ನು ನಡೆಸಬೇಕೆಂದು ನಾಗರಿಕರಿಗೆ ಸೂಚನೆ ನೀಡಲಾಗಿದೆ. ಈ ಬಾರಿ ನವರಾತ್ರಿಯು ಅಕ್ಟೋಬರ್ 7 ರಂದು ಗುರುವಾರದಿಂದ ಆರಂಭವಾಗುತ್ತಿದೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಇದಾಗ್ಯೂ ಹಬ್ಬದ ಸಮಯದಲ್ಲಿ ಮೈಮರೆತು ಕೊರೊನಾ ಹರಡುವಿಕೆಗೆ ಕಾರಣವಾಗಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ನವರಾತ್ರಿ ಆಚರಣೆಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.

ಬಿಬಿಎಂಪಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಏನಿದೆ? ಮುಂದಿದೆ ವಿವರ...
* ದೇವಿ ವಿಗ್ರಹದ ಗಾತ್ರ ನಾಲ್ಕು ಅಡಿಗಳಿಗಿಂತ ಹೆಚ್ಚಿರಬಾರದು.
* ವಿಗ್ರಹ ಪ್ರತಿಷ್ಠಾಪನೆಗೆ ಮುನ್ನ ವಿಗ್ರಹಗನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು.
* ಆಯಾ ವಲಯದ ಜಂಟಿ ಆಯುಕ್ತರ ಅನುಮತಿಯೊಂದಿಗೆ ಪ್ರತಿ ವಾರ್ಡ್ಗೆ ಕೇವಲ ಒಂದು ವಿಗ್ರಹ ಸ್ಥಾಪನೆ ಮಾಡಬೇಕು.
* ಪ್ರಾರ್ಥನೆ ಸಮಯದಲ್ಲಿ 50ಕ್ಕಿಂತಲೂ ಹೆಚ್ಚಿನ ಜನರಿಗೆ ಅನುಮತಿ ನೀಡಲಾಗಿಲ್ಲ.
* ಸಿಹಿ ತಿಂಡಿಗಳು, ಹಣ್ಣುಗಳು ಹಾಗೂ ಹೂವುಗಳ ವಿತರಣೆಯನ್ನು ನಿಷೇಧಿಸಲಾಗಿದೆ.
* ಸಂಘದ ವ್ಯವಸ್ಥಾಪಕರು ಕೊರೊನಾ ಸೂಕ್ತ ನಡವಳಿಕೆ ಕುರಿತು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವತ್ತ ಗಮನ ಹರಿಸಬೇಕು.
* ಸರಳ ಪ್ರಾರ್ಥನೆ ಹಾಗೂ ಪುನಸ್ಕಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
* ಸಿಂಧೂರ್ ಖೇಲಾ ಆಚರಣೆಯಲ್ಲಿ ಒಂದು ಬಾರಿಗೆ 10 ಜನರಿಗೆ ಮಾತ್ರ ಅವಕಾಶ ನೀಡಬೇಕು.
* ವಿಸರ್ಜನೆ ಸಂದರ್ಭ ಡಿಜೆ/ಡ್ರಮ್ಸ್ ಕಾರ್ಯಕ್ರಮ ಆಯೋಜಿಸುವಂತಿಲ್ಲ.
ಅಕ್ಟೋಬರ್ 7ರಿಂದ ನವರಾತ್ರಿ ಆರಂಭವಾಗಲಿದ್ದು, ಅಕ್ಟೋಬರ್ 15ರವರೆಗೆ ಉತ್ಸವ ನಡೆಯಲಿದೆ. ಅಕ್ಟೋಬರ್ 15ರಂದು ವಿಜಯದಶಮಿ ಆಚರಿಸಲಾಗುತ್ತದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು:
ಕರ್ನಾಟಕದಲ್ಲಿ ಮಂಗಳವಾರ 523 ಹೊಸ ಕೋವಿಡ್ ಪ್ರಕರಣ ದೃಢವಾಗಿದ್ದು, ಬೆಂಗಳೂರಿನಲ್ಲಿ 201 ಹೊಸ ಪ್ರಕರಣಗಳು ಪತ್ತೆಯಾಗಿde. ರಾಜ್ಯದಲ್ಲಿ 575 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಂಗಳವಾರ ರಾಜ್ಯದಲ್ಲಿ 14 ಮಂದಿ ಸಾವನ್ನಪ್ಪಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11,926 ಆಗಿದೆ.
ಕೊರೊನಾ ಮೂರನೇ ಅಲೆ ಭೀತಿ ನಡುವೆ ಬಿಬಿಎಂಪಿ ಮಕ್ಕಳಿಗೆ ಲಸಿಕೆ ಹಾಕುವ ಸಂಬಂಧ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
'ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕುರಿತು ನಮಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಆದರೆ ಕೊರೊನಾ ಲಸಿಕೆಗೆ ಅಗತ್ಯ ಅನುಮೋದನೆ ದೊರಕಿರುವುದರಿಂದ ಈ ಸಂಬಂಧ ಮಾರ್ಗಸೂಚಿಗಳು ಶೀಘ್ರದಲ್ಲೇ ಹೊರಬೀಳುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ ಮತ್ತು ಸಿದ್ಧತೆಗಳನ್ನು ಆರಂಭಿಸಿದ್ದೇವೆ' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
'ಮೊದಲ ಹಂತದಲ್ಲಿ 12-18 ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ಸರ್ಕಾರದಿಂದ ಸೂಕ್ತ ನಿರ್ದೇಶನ, ಮಾರ್ಗಸೂಚಿಗಳು ಬಂದ ನಂತರ ನಾವು ಲಸಿಕಾ ಅಭಿಯಾನವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಬೇಕೇ ಇಲ್ಲ, ವಾರ್ಡ್ ಮಟ್ಟದ ಶಿಬಿರಗಳಲ್ಲಿ ನಡೆಸಬೇಕೇ ಎಂಬುದನ್ನು ನಿರ್ಧರಿಸುತ್ತೇವೆ. ಮಕ್ಕಳಿಗೆ ಅವರ ಶಾಲೆಗಳಲ್ಲಿಯೇ ಲಸಿಕೆ ಹಾಕುವ ಆಯ್ಕೆಯ ಕುರಿತು ಕೂಡ ನಾವು ಯೋಚಿಸುತ್ತಿದ್ದೇವೆ' ಎಂದು ಗುಪ್ತಾ ತಿಳಿಸಿದ್ದಾರೆ.
ಜೊತೆಗೆ ಕೊರೊನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲಾಗಿದೆ. ವಾರ್ಡ್ವಾರು ಲಸಿಕಾ ಶಿಬಿರಗಳು ಹಾಗೂ ವಿಶೇಷ ಅಭಿಯಾನಗಳ ಮೂಲಕ ಬೆಂಗಳೂರು ನಗರದ ಎಲ್ಲಾ 198 ವಾರ್ಡ್ಗಳಲ್ಲಿ ಸುಮಾರು 84% ಜನಸಂಖ್ಯೆಗೆ ಬಿಬಿಎಂಪಿ ಕೊರೊನಾ ಲಸಿಕೆ ಹಾಕಿದ್ದು, ಇದೀಗ ಲಸಿಕೆ ಪಡೆದುಕೊಳ್ಳದವರಿಗೆ ಮನೆ ಬಾಗಿಲಿಗೇ ಲಸಿಕೆ ನೀಡುವತ್ತ ಬಿಬಿಎಂಪಿ ಮುಂದಿನ ಯೋಜನೆ ರೂಪಿಸುತ್ತಿದೆ.












Click it and Unblock the Notifications