Namma Raste: ಬಿಬಿಎಂಪಿ 3 ದಿನದ ಮಹತ್ವದ 'ನಮ್ಮ ರಸ್ತೆ' ಕಾರ್ಯಾಗಾರ, ಏನಿದು?
ಬೆಂಗಳೂರು, ಫೆಬ್ರವರಿ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಮೂರು ದಿನದ ಮಹತ್ವ 'ನಮ್ಮ ರಸ್ತೆ' ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಒಂದೇ ಸೂರಿನಡಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಂಚಾರ ದಟ್ಟಣೆ ನಿಯಂತ್ರಣದ ಕುರಿತು ಪರಿಹಾರಗಳನ್ನು ಕಂಡುಕೊಳ್ಳಲು ಈ ಕಾರ್ಯಕ್ರಮ ರೂಪಿಸಲಾಗಿದೆ.
ಬಿಬಿಎಂಪಿವತಿಯಿಂದ ಫೆಬ್ರವರಿ 20, 21 ಹಾಗೂ 22 ರಂದು ನಡೆಯಲಿರುವ 'ನಮ್ಮ ರಸ್ತೆ-2025' ಕಾರ್ಯಗಾರ, ಪ್ರದರ್ಶನ ಹಾಗೂ ಸಮಾವೇಶಕ್ಕೆ ಇಂದು ಗುರುವಾರ ಉಪ ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಚಾಲನೆ ನೀಡಿದರು.

"ನಮ್ಮ ರಸ್ತೆ 2025" ಸುಸ್ಥಿರ ನಗರ ವಿನ್ಯಾಸ ಸೃಷ್ಟಿಸುವಲ್ಲಿ ಬಹುಮುಖ್ಯ ಪಾತ್ರವಹಿಸಲಿರುವ ಸಮಗ್ರ ಬಹು ಮಾದರಿಯ ಸಾರಿಗೆ ವ್ಯವಸ್ಥೆಗಳ ಕುರಿತಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೋಟಾರು ರಹಿತ ಸಾರಿಗೆಗಳನ್ನೊಳಗೊಂಡಂತೆ ಭವಿಷ್ಯದ ಯೋಜನಾಬದ್ಧ ನಗರವನ್ನು ರೂಪಿಸುವಲ್ಲಿ ವಿಶ್ವಾಸಾರ್ಹ ಮಾಹಿತಿ ಹೇಗೆ ಸಹಾಯಕವಾಗಲಿದೆ ಎನ್ನುವುದನ್ನು ತಿಳಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ವಿಸ್ತರಿಸುತ್ತಿರುವ ಮೆಟ್ರೋ, ಉಪ ನಗರ ರೈಲು ಮತ್ತು ಬಸ್ಸುಗಳ ಜಾಲಗಳು ಸಮಗ್ರ ಚಲನಶೀಲ ಪರಿಸರ ವ್ಯವಸ್ಥೆಯನ್ನು ರೂಪಿಸಲು ಅನನ್ಯವಾದ ಅವಕಾಶವನ್ನು ಒದಗಿಸುತ್ತಿರುವ ಹಂತದಲ್ಲಿ, ಬೆಂಗಳೂರು ನಗರವು ತನ್ನ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸುವಲ್ಲಿ ಒಂದು ನಿರ್ಣಾಯಕ ಘಟ್ಟದಲ್ಲಿದೆ. 'ನಮ್ಮ ರಸ್ತೆ-2025' ಪರಿಪೂರ್ಣ ಹಂತದ ಸಂಪರ್ಕವನ್ನು ಖಚಿತಪಡಿಸಿಕೊಳ್ಳುತ್ತಾ, ನಗರದ ಚಲನತೆಯನ್ನು ಪುನರ್ ರೂಪಿಸಲು, ಸಂಪರ್ಕ ಸಾಧ್ಯತೆಯನ್ನು ಹೆಚ್ಚಿಸಲು ಮತ್ತು ಪಾದಚಾರಿಗಳು ಮತ್ತು ಸೈಕಲ್ ಸವಾರರ ಸುರಕ್ಷಿತತೆಯಲ್ಲಿನ ಸವಾಲುಗಳನ್ನು ಸ್ವೀಕರಿಸಲು ಪ್ರಮುಖ ಬಾಧ್ಯಸ್ಥರನ್ನು ಒಟ್ಟಿಗೆ ತರುವ ವೇದಿಕೆ ಇದಾಗಿದೆ.
ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ, ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ), ನಮ್ಮ ಮೆಟ್ರೋ, ಕೆರೈಡ್(KRide)ನ ಅಧಿಕಾರಿಗಳು, ಡಲ್ಟ್ ಇಲಾಖೆಯ ತಜ್ಞರುಗಳು, ವಿಶೇಷವಾಗಿ ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಗಳು, ನಾಗರಿಕ ಸಮೂಹ, ನಗರ ಯೋಜಕರು, ಸ್ಟಾರ್ಟಪ್ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಚಾರ ಪರಿಣಿತರು ಕಾರ್ಯಾಗಾರದಲ್ಲಿ ಇರಲಿದ್ದಾರೆ. ರಸ್ತೆ ಸಮಸ್ಯೆ ಪರಿಹಾರ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ.

'ನಮ್ಮ ರಸ್ತೆ ಕೈಪಿಡಿ' ಪುಸ್ತಕ ಬಿಡುಗಡೆ
'ನಮ್ಮ ರಸ್ತೆ-2025'ರ ಪ್ರಮುಖವಾದ ಅಂಶವೆಂದರೆ, 'ನಮ್ಮ ರಸ್ತೆ ಕೈಪಿಡಿ'ಯ ಬಿಡುಗಡೆ. ಇದು, ರಸ್ತೆಯ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿನ ಅತ್ಯುತ್ತಮ ವಾಡಿಕೆಗಳ ವಿವರಗಳನ್ನು ನೀಡುವ ಸಚಿತ್ರ ಕೈಪಿಡಿಯಾಗಿದೆ.
ಈ ಕೈಪಿಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 12,878.78 ಕಿ.ಮೀ. ಉದ್ದ ರಸ್ತೆಗಳು, ಪ್ರಮಾಣಿತ ಕಾರ್ಯವಿಧಾನ(SOP) ಪ್ರಕಾರ ಯಾವ ರೀತಿ ಇರಬೇಕೆಂಬುದನ್ನು ತಿಳಿಸಲಿದೆ. ರಸ್ತೆಯ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿನ ಉತ್ತಮ ಅಭ್ಯಾಸಗಳನ್ನು ವಿವರಣಾತ್ಮಕವಾಗಿ ವಿವರಿಸುತ್ತದೆ. ಜೊತೆಗೆ ಇಂಜಿಯರ್ ಗಳು, ನಾಗರಿಕರು ಹಾಗೂ ಯುವ ಜನರಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಜ್ಞಾನ ನೀಡಲಿದೆ.
ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ಬಿ.ಎಂ.ಆರ್.ಡಿ.ಎ ಕಾರ್ಯದರ್ಶಿಯಾದ ರಾಜೇಂದ್ರ ಚೋಳನ್ ಮತ್ತಿತರರು ಕಾರ್ಯಕ್ರಮ ಕುರಿತು ಗಣ್ಯರಿಗೆ ಮಾಹಿತಿ ನೀಡಿದರು.
"ನಮ್ಮ ರಸ್ತೆ - ವಿನ್ಯಾಸ ಕಾರ್ಯಾಗಾರ" ಉದ್ಘಾಟಿಸಿದ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೇ ಬೆಂಗಳೂರಿಗೆ ನಾವುಗಳು ಮೋಸ ಮಾಡಿದಂತೆ ಎಂದು ಅವರು ಹೇಳಿದರು.












Click it and Unblock the Notifications