ಬಿಬಿಎಂಪಿ ಕೇಂದ್ರ ಕಚೇರಿ ಈಗ 'ಜೀರೋ ವೇಸ್ಟ್ ಕ್ಯಾಂಪಸ್'
ಬೆಂಗಳೂರು, ಆಗಸ್ಟ್ 19 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯನ್ನು 'ಜೀರೋ ವೇಸ್ಟ್ ಕ್ಯಾಂಪಸ್' ಎಂದು ಘೋಷಣೆ ಮಾಡಲಾಗಿದೆ. ಕಸ ವಿಂಗಡನೆ, ಸಂಸ್ಕರಣೆಗೆ ಇದು ನಗರಕ್ಕೆ ಮಾದರಿಯಾಗಲಿದೆ.
ಬಿಬಿಎಂಪಿ ಮೇಯರ್ ಗಂಗಾಬಿಕೆ ಕೇಂದ್ರ ಕಚೇರಿ ಆವರಣವನ್ನು 'ಜೀರೋ ವೇಸ್ಟ್ ಕ್ಯಾಂಪಸ್' ಎಂದು ಘೋಷಣೆ ಮಾಡಿದರು. ಈ ಯೋಜನೆ ಅನ್ವಯ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಉತ್ಪತ್ತಿ ಆಗುವ ಕಸವನ್ನು ಅಲ್ಲೇ ಸಂಸ್ಕರಿಸಲಾಗುತ್ತದೆ.
"ನಮ್ಮ ಕಸ ನಮ್ಮ ಜವಾಬ್ದಾರಿ" ಎಂಬ ಘೋಷಣೆಯೊಂದಿಗೆ ಪಾಲಿಕೆ ಕಚೇರಿ ಇನ್ನು ಮುಂದೆ ಕಾರ್ಯ ನಿರ್ವಹಣೆ ಮಾಡಲಿದೆ. ಬಿಬಿಎಂಪಿ ಆವರಣದಲ್ಲಿ ಉತ್ಪತ್ತಿ ಆಗುವ ಹಸಿ ಕಸವನ್ನು ಆವರಣದಲ್ಲೇ ಸಂಸ್ಕರಣೆ ಮಾಡಲು ಘಟಕ ನಿರ್ಮಿಸಲಾಗಿದೆ.
ಪಾಲಿಕೆ ಕೇಂದ್ರ ಕಚೇರಿಯೊಳಗಿರುವ ಉಪ ಕಚೇರಿಗಳು ಕಸ ವಿಂಗಡನೆ ಮಾಡಿ ಕೊಡದಿದ್ದರೆ ಕಚೇರಿ ಮುಖ್ಯಸ್ಥರು ನೇರ ಹೊಣೆಯಾಗುತ್ತಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಎಷ್ಟು ಕಸ ಸಂಗ್ರಹವಾಗುತ್ತದೆ?
ಬಿಬಿಎಂಪಿ ಕೇಂದ್ರ ಕಚೇರಿ, ಕೌನ್ಸಿಲ್ ಕಟ್ಟಡ ಸೇರಿ 4 ಕಟ್ಟಡಗಳು, ಉದ್ಯಾನ, ಕ್ಯಾಂಟೀನ್ ಹಾಗೂ ರಸ್ತೆಯಿಂದ ನಿತ್ಯ 50 ಕೆಜಿ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಲು 70 ಕೆಜಿ ಸಾಮರ್ಥ್ಯದ ಎರಡು ಕಾಂಪೋಸ್ಟರ್ ಅಳವಡಿಸಲಾಗಿದೆ.

ಮರದ ಎಲೆ, ಹೂವು
ದೇವಸ್ಥಾನದಲ್ಲಿ ಸಂಗ್ರಹವಾಗುವ ಹೂವನ್ನು ಅಲ್ಲೇ ಸಂಸ್ಕರಿಸಲು ಒಂದು ಕಾಂಪೋಸ್ಟರ್ ಅಳವಡಿಸಲಾಗಿದೆ. ಮರದ ಎಲೆ ಸಂಸ್ಕರಿಸಲು ಎರಡು ಕಾಂಪೋಸ್ಟರ್ ಸಿದ್ಧವಾಗಿದೆ. ಕಚೇರಿ ಆವರಣದಲ್ಲಿ ಸಂಗ್ರಹವಾಗುವ ಒಣಕಸವನ್ನು ಚಿಂದಿ ಆಯುವವರು ವಾರಕ್ಕೊಮ್ಮೆ ಒಣ ಕಸ ಸಂಸ್ಕರಣಾ ಘಟಕಗಳಿಗೆ ತೆಗೆದುಕೊಂಡು ಹೋಗಲಿದ್ದಾರೆ.

ಡಬ್ಬಿಗಳ ವಿತರಣೆ
ಬಿಬಿಎಂಪಿ ಆವರಣದಲ್ಲಿ 134 ವಿಭಾಗೀಯ ಕಚೇರಿಗಳಿದ್ದು, ಎಲ್ಲಾ ಕಚೇರಿಗಳಿಗೂ ಹಸಿ ತ್ಯಾಜ್ಯಕ್ಕೆ ಹಸಿರು, ಒಣ ಕಸಕ್ಕೆ ನೀಲಿ ಬಣ್ಣದ ಡಬ್ಬಿಗಳನ್ನು ವಿತರಿಸಲಾಗಿದೆ. ಎಲ್ಲಾ ಶೌಚಾಲಯಗಳಲ್ಲೂ ಸ್ಯಾನಿಟರಿ ಕಸ ಸಂಗ್ರಹಕ್ಕೆ ಕೆಂಪು ಬಣ್ಣದ ಡಬ್ಬಿ ಇಡಲಾಗುತ್ತದೆ. ಕಚೇರಿಗಳಲ್ಲೂ ಕಸವನ್ನು ಕಡ್ಡಾಯವಾಗಿ ವಿಂಗಡಿಸಿಯೇ ಕೊಡಬೇಕು.

ಪೌರ ಕಾರ್ಮಿಕರಿಗೆ ತರಬೇತಿ
ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಹಸಿ, ಒಣ ಕಸವನ್ನು ಯಾವ ರೀತಿ ಸಂಗ್ರಹಿಸಬೇಕು ಎಂಬುದರ ಬಗ್ಗೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಈಗಾಗಲೇ ತರಬೇತಿ ನೀಡಿದ್ದಾರೆ. ಎಲ್ಲಾ ಕಚೇರಿ ಸಿಬ್ಬಂದಿಗಳಿಗೂ ಕಸ ವಿಂಗಡಿಸಿ ಕೊಡುವಂತೆ ಸೂಚನೆ ನೀಡಿದ್ದಾರೆ. ಪಾಲಿಕೆ ಕಚೇರಿ, ಆವರಣದಲ್ಲಿ ಉತ್ಪತ್ತಿ ಆಗುವ ಹಸಿ ಕಸವನ್ನು ಆವರಣದಲ್ಲೇ ಸಂಸ್ಕರಿಸಿ ಗೊಬ್ಬರ ತಯಾರಿಸಲಾಗುತ್ತದೆ.












Click it and Unblock the Notifications