ಬಿಬಿಎಂಪಿ ಕಸದ ಲಾರಿ ಡಿಕ್ಕಿಗೆ ಮಹಿಳೆ ಸಾವು: ತಿಂಗಳಲ್ಲಿ ಮೂರನೇ ಬಲಿ ಇದು
ಬೆಂಗಳೂರು, ಏಪ್ರಿಲ್ 19 : ಬೆಂಗಳೂರಿನ ನಾಯಂಡನಹಳ್ಳಿ ಬಳಿ ಸೋಮವಾರ ಬಿಬಿಎಂಪಿ ಕಸದ ಲಾರಿಯೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 39 ವರ್ಷದ ಪದ್ಮಿನಿ ಮೃತ ದುರ್ದೈವಿ.
ನಿನ್ನೆ ಸೇಂಟ್ ಮಾರ್ಕ್ಸ್ ರಸ್ತೆಯಿಂದ ಆರ್ ಆರ್ ನಗರಕ್ಕೆ ಸ್ಕೂಟರ್ನಲ್ಲಿ ಪದ್ಮಿನಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಸದ ಲಾರಿ ಮಹಿಳೆ ಮೇಲೆ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತ ಮಾಡಿದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದ. ಈ ವೇಳೆ ಸ್ಥಳದಲ್ಲಿದ್ದ ಆಟೋ ಚಾಲಕರೊಬ್ಬರು ಲಾರಿಯನ್ನು ತಡೆಹಿಡಿದ್ದಾರೆ. ಆದರೆ ಚಾಲಕ ಶಿವರಾಜ್ ಮಾತ್ರ ಲಾರಿಯಿಂದ ಇಳಿದು ಪರಾರಿಯಾಗಿದ್ದ.
ಸದ್ಯ ಅಪಘಾತದ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿ ಶಿವರಾಜ್ನನ್ನ ಪತ್ತೆ ಮಾಡಿ ಬಂಧಿಸಿದ್ದಾರೆ. ಇನ್ನು ಪ್ರಾಥಮಿಕ ತನಿಖೆ ನಡೆಸಿದಾಗ ಲಾರಿ ಚಾಲಕ ಕುಡಿದು ಚಾಲನೆ ಮಾಡುತ್ತಿರಲಿಲ್ಲ ಅಂತ ತಿಳಿದು ಬಂದಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಕುಲ್ದೀಪ್ ಕುಮಾರ್ ಜೈನ್, "ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿಯ ಅಪಘಾತ ಪ್ರಕರಣ ಹೆಚ್ಚಳವಾಗ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ನಗರದಲ್ಲಿ ಸಂಚರಿಸುವ ಎಲ್ಲಾ ವಾಹನ ಸವಾರರಿಗೂ ಅಪಘಾತದ ಅರಿವನ್ನೂ ಮೂಡಿಸುವಂತೆ ಕೆಲಸವನ್ನ ಮಾಡ್ತಿದ್ದೇವೆ. ಮುಂದಿನ ದಿನದಲ್ಲೂ ಕೂಡ ಅಪಘಾತ ಸಂಚಾರಿ ನಿಯಮದ ಬಗ್ಗೆ ಅರಿವನ್ನ ಮೂಡಿಸ್ತೇವೆ. ಈ ಬಗ್ಗೆ ಅಯಾಯ ಇಲಾಖೆಯವ್ರು ಅವರವರ ಜವಾಬ್ದಾರಿತನ್ನ ಶ್ರದ್ದೆಯಿಂದ ನಿರ್ವಹಿಸ್ತಾರೆ," ಅಂತ ಹೇಳಿದ್ದಾರೆ.

ಕಸದ ಲಾರಿಗೆ ಮೂರನೇ ಬಲಿ:
ಹೆಬ್ಬಾಳದ ಬಳಿ ಮಾ. 21ರಂದು 9ನೇ ತರಗತಿ ವಿದ್ಯಾರ್ಥಿನಿ ಅಕ್ಷಯಾ ರಸ್ತೆ ದಾಟುತ್ತಿದ್ದಾಗ ಬಿಬಿಂಪಿ ಕಸದ ಲಾರಿ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಥಣಿಸಂಧ್ರದ ಮುಖ್ಯ ರಸ್ತೆಯಲ್ಲಿ ಮಾ.31ರಂದು ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಯಲಹಂಕ ನಿವಾಸಿ ರಾಮಯ್ಯ (60) ಎಂಬುವವರು ಮೃತಪಟ್ಟಿದ್ದರು. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications